ಅಭಿನಂದನ್ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಇದು...
ಶುಕ್ರವಾರ ಬೆಳಿಗ್ಗೆಯಿಂದಲೇ ವಾಘಾ ಗಡಿಯಲ್ಲಿ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಾವಿರಾರು ದೇಶಭಕ್ತರ ಸಹನೆಯ ಪರೀಕ್ಷೆ ಮಾಡಿದ್ದು ಪಾಕಿಸ್ತಾನ. ಭಾರತದ ಹೆಮ್ಮೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ದೇಶಕ್ಕೆ ವಾಪಸ್ ಹಸ್ತಾಂತರಿಸಲು ಪಾಕಿಸ್ತಾನ ಅದ್ಯಾಕೆ ಅಷ್ಟು ವಿಳಂಬ ಮಾಡಿತ್ತು? 'ಶಾಂತಿಯ ದ್ಯೋತಕವಾಗಿ ನಾವು ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ' ಎಂದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಪಾಕಿಸ್ತಾನ ಇಲ್ಲಸಲ್ಲದ 'ಫಾರ್ಮಾಲಿಟಿ' ಗಳನ್ನೆಲ್ಲ ಮಾಡುತ್ತ ಅಷ್ಟು ಸಮಯ ತೆಗೆದುಕೊಂಡಿತ್ತಾ?
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಮಧ್ಯಾಹ್ನ 12 ಗಂಟೆಗೆ ಭಾರತಕ್ಕೆ ಹಸ್ತಾಂತರ ಮಾಡುತ್ತೇವೆ ಎಂದಿದ್ದ ಪಾಕಿಸ್ತಾನ ನಂತರ ಎರಡು ಬಾರಿ ಸಮಯ ಬದಲಾವಣೆ ಮಾಡಿದ್ದೇಕೆ? ನಿಜವಾಗಿಯೂ ಕೆಲವು ಔಪಚಾರಿಕ ಪ್ರಕ್ರಿಯೆಗಳಿಗಾಗಿ ತಡವಾಯಿತಾ? ಅಥವಾ ಪಾಕಿಸ್ತಾನ ಬೇರೇನಾದರೂ ಕಿತಾಪತಿ ಮಾಡಿತ್ತಾ?
ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು
ಕೆಲವು ಕಾಗದ-ಪತ್ರಗಳ ಪ್ರಕ್ರಿಯೆಗೆ ಸಮಯ ತೆಗೆದೆಕೊಂಡಿತ್ತು ಎಂಬುದನ್ನು ಎಷ್ಟರ ಮಟ್ಟಿಗೆ ನಂಬುವುದಕ್ಕೆ ಸಾಧ್ಯ? ಬೆಳಗ್ಗಿನ ಸಂಜೆಯವರೆಗೆ ಸಮಯ ಬೇಕಾಗುವಷ್ಟು ದೀರ್ಘ ಪ್ರಕ್ರಿಯೆಯಾ ಅದು? ಕೆಲವು ನಂಬಲರ್ಹ ಮೂಲಗಳ ಪ್ರಕಾರ ಅಭಿನಂದನ್ ಬಿಡುಗಡೆ ವಿಳಂಬಕ್ಕೆ ನಿಜವಾದ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ...
ಅಭಿನಂದನ್ ವಿಡಿಯೋ
ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದ್ಕೂ ಮುನ್ನ ಅವರನ್ನು ವಾಘಾ ಗಡಿಯವರೆಗೆ ಕರೆತಂದು, ತನ್ನಲ್ಲೇ ಇಟ್ಟುಕೊಂಡಿತ್ತು ಪಾಕಿಸ್ತಾನ. ಆ ಸಂದರ್ಭದಲ್ಲಿ ಅಭಿನಂದನ್ ಅವರ ವಿಡಿಯೋ ತೆಗೆದುಕೊಂಡಿತ್ತು. ಅಭಿನಂದನ್ ಅವರು ಪಾಕಿಸ್ತಾನ ಸೇನೆಯನ್ನು ಹೊಗಳುವಂತೆ ಹೇಳಿ ವಿಡಿಯೋ ಮಾಡಿಸಿಕೊಳ್ಳಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ವಿಡಿಯೋದಲ್ಲಿ ಅಭಿನಂದನ್ ಏನು ಹೇಳಿದ್ದಾರೆ?
"ನಾನು 'ಗುರಿ'ಯನ್ನು ಬೆನ್ನೆತ್ತಿ ಗಡಿನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದೆ. ಅಷ್ಟರಲ್ಲಿ ನನ್ನ ಯುದ್ಧ ವಿಮಾನ ಪತನವಾಯ್ತು. ಈ ಸಮಯದಲ್ಲಿ ಪಾಕಿಸ್ತಾನ ಸೇನೆಯ ಸಿಬ್ಬಂದಿ ನನ್ನನ್ನು ಕೆಲವು ದುಷ್ಕರ್ಮಿಗಳಿಂದ ಪಾರುಮಾಡಿದರು. ಪಾಕಿಸ್ತಾನದ ಸೇನೆಯ ನಡೆಯಿಂದ ನಾನು ಇಂಪ್ರೆಸ್ ಆಗಿದ್ದೇನೆ" ಎಂದು ಅಭಿನಂದನ್ ಅವರ ಬಳಿ ಹೇಳಿಸಲಾಗಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿಯಬೇಕಿದೆ.
ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?
ಪಾಕ್ ಮಾಧ್ಯಮಗಳಲ್ಲಿ ಬಿಡುಗಡೆ?
ಈ ವಿಡಿಯೋವನ್ನು ಪಾಕ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ನಂತರ ಅಭಿನಂದನ್ ಅವರನ್ನು ಬಿಡುಗಡೆ ಮಂಆಡಲಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಈ ವಿಡಿಯೋ ಅಲ್ಲಲ್ಲಿ ಕಟ್ ಆಗಿದ್ದು, ಒತ್ತಾಯ ಪೂರ್ವಕವಾಗಿ ಅಭಿನಂದನ್ ಅವರ ಬಳಿ ಈ ಮಾತುಗಳನ್ನು ಹೇಳಿಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ವರದಿ ಹೇಳಿದೆ.
ಇದು ಪಾಕಿಸ್ತಾನ ನೀಡಿದ ಭಿಕ್ಷೆಯಲ್ಲ!
ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಅವರನ್ನು ಕೂಡಲೇ ಬಿಟ್ಟುಬಿಡುವಂತೆ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಕಾರಣ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡಲು ಒಪ್ಪಿತ್ತು. ಆದರೆ ಅದಕ್ಕೆ 'ಶಾಂತಿಯ ಸಂಕೇತ' ಎಂಬೆಲ್ಲ ಕಾರಣ ನೀಡಿತ್ತು. ಆದರೆ ಅಭಿನಂದನ್ ಬಿಡುಗಡೆ ಪಾಕಿಸ್ತಾನ ನೀಡಿದ ಭಿಕ್ಷೆಯಾಗಲೀ, ಅನುಕಂಪದ ನಡೆಯಾಗಲೀ ಅಲ್ಲ. ಇದು ಭಾರತದ ರಾಜತಾಂತ್ರಿಕ ಗೆಲುವು ಎಂದು ಭಾರತ ಹೇಳಿತ್ತು. ಮಾರ್ಚ್ 1, ಶುಕ್ರವಾರ ಬೆಳಿಗ್ಗೆಯೇ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ, ಅವರನ್ನು ಹಸ್ತಾಂತರ ಮಾಡಿದ್ದು, ರಾತ್ರಿ 9:25ಕ್ಕೆ. ವಾಘಾ ಗಡಿಗೆ ಅವರನ್ನು ಬೇಗನೇ ಕರೆತಂದಿದ್ದರೂ, ಮೇಲಿನ ಕಾರಣದಿಂದಾಗಿ ವಿಳಂಬ ಮಾಡಿತ್ತು ಎನ್ನಲಾಗಿದೆ.
ತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆ