ಅಪ್ಪನಿಗೆ ಕೊರೊನಾವೈರಸ್, ವ್ಹೀಲ್ಚೇರ್ನಲ್ಲಿಯೇ ಮಗ ಸಾವು: ಹೃದಯ ಕಲಕುವ ಘಟನೆ
ಬೀಜಿಂಗ್, ಫೆಬ್ರವರಿ 4: ಮಕ್ಕಳು ಬೆಳೆದಂತೆ ಪೋಷಕರಿಗೆ ಆಧಾರವಾಗಬೇಕು. ಆದರೆ 16 ವರ್ಷದ ಯಾನ್ ಚೆಂಗ್ಗೆ ಆ ಶಕ್ತಿ ಇರಲಿಲ್ಲ. ಆತನ ಬದುಕಿನುದ್ದಕ್ಕೂ ಅಪ್ಪನೇ ಅವನ ಎಲ್ಲ ಆರೈಕೆ ಮಾಡಬೇಕು. ಏಕೆಂದರೆ ಬಾಲ್ಯದಿಂದಲೂ ಸೆರೆಬ್ರೆಲ್ ಪಾಲ್ಸಿ ಎಂಬ ನರಸಂಬಂಧಿ ಸಮಸ್ಯೆ ಯಾನ್ ಚೆಂಗ್ನನ್ನು ಕಾಡುತ್ತಿತ್ತು. ಆತ ಗಾಲಿಕುರ್ಚಿ ಬಿಟ್ಟು ಮೇಲೇಳಲಾರ. ತನ್ನ ಹೊಟ್ಟೆಬಟ್ಟೆಗೆ ಬೇಕಾಗುವ ಯಾವ ಕೆಲಸವನ್ನೂ ಮಾಡಿಕೊಳ್ಳುವ ಶಕ್ತಿ ಆತನಿಗಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಆತನ ಬದುಕಿಗೆ ಏಕೈಕ ಆಧಾರವಾಗಿದ್ದ ಅಪ್ಪನಿಗೆ ತಗುಲಿದ್ದು ಮಾರಕ ಕೊರೊನಾ ವೈರಸ್. ಮೊದಲೇ ಜೀವನ ಅಸಹನೀಯ ಎಂಬ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಯಾನ್ ಚೆಂಗ್ಗೆ ಮತ್ತೊಂದು ಆಘಾತವನ್ನು ತಾಳಿಕೊಳ್ಳುವ ಸಾಮರ್ಥ್ಯವಿರಲಿಲ್ಲ.
ಕೊರೊನಾ ವೈರಸ್ ದಾಳಿಗೆ ತುತ್ತಾದ ಅಪ್ಪನನ್ನು ಜಗತ್ತಿನಿಂದ ಪ್ರತ್ಯೇಕಿಸಿ ಕೋಣೆಯೊಳಗೆ ಇರಿಸಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆದರೆ ಇತ್ತ ಅಪ್ಪನೇ ತನ್ನ ಜಗತ್ತು ಎಂದು ಭಾವಿಸಿದ್ದ ಮಗ ಅಸಹಾಯಕ ಮಗ ಅನಾಥನಾದ. ಆತನ ಯೋಗಕ್ಷೇಮ ನೋಡಿಕೊಳ್ಳುವವರು, ಒಂದು ಹೊತ್ತು ಊಟ ಮಾಡಿಸುವವರು ಕೂಡ ಯಾರೂ ಇರಲಿಲ್ಲ. ಇಂತಹ ಹೀನಾಯ ಪರಿಸ್ಥಿತಿಯಲ್ಲಿ ಯಾನ್ ಚೆಂಗ್ ಒದ್ದಾಡಿ ಮೃತಪಟ್ಟಿರುವ ಹೃದಯ ಕಲಕುವ ಘಟನೆ ಚೀನಾದಲ್ಲಿ ನಡೆದಿದೆ.

ಆರೈಕೆ ಮಾಡುವವರೇ ಇಲ್ಲ
ಯಾನ್ ಚೆಂಗ್ನ ಅಪ್ಪ ಯಾನ್ ಕ್ಸಿಯಾವೆನ್ ಮತ್ತು ಕಿರಿಯ ಸಹೋದರ ಇಬ್ಬರಲ್ಲಿಯೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ಜನರಿಂದ ಪ್ರತ್ಯೇಕಿಸಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಇತ್ತ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಯಾನ್ ಚೆಂಗ್ನ ಆರೈಕೆ ಮಾಡಿಕೊಳ್ಳುವವರು ಮನೆಯಲ್ಲಿ ಯಾರೂ ಇರಲಿಲ್ಲ. ಒಂದು ವಾರದಲ್ಲಿ ಆತನಿಗೆ ಊಟ ಸಿಕ್ಕಿದ್ದು ಎರಡೇ ಬಾರಿ. ಹಸಿವು ತಾಳಲಾರದೇ ಯಾನ್ ಚೆಂಗ್ ಮೃತಪಟ್ಟಿದ್ದಾನೆ. ಈ ಘಟನೆ ತೀವ್ರ ವಿವಾದ ಸೃಷ್ಟಿಸಿದ ಬಳಿಕ ಇಬ್ಬರು ಅಧಿಕಾರಿಗಳನ್ನು ಹುದ್ದೆಗಳಿಂದ ವಜಾಗೊಳಿಸಲಾಗಿದೆ.

ಒಂದು ವಾರ ಬಾಲಕನ ಸಂಕಟ
ಕೊರೊನಾ ವೈರಸ್ನ ಮೂಲ ಸ್ಥಾನವಾದ ಕೇಂದ್ರ ಹುಬೆಯಿ ಪ್ರಾಂತ್ಯದಲ್ಲಿಯೇ ಈ ಕುಟುಂಬ ವಾಸಿಸುತ್ತಿತ್ತು. ಜ. 22ರಂದು ಯೆನ್ ಚೆಂಗ್ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ವರ್ಷಗಳ ಹಿಂದೆ ಬಾಲಕನ ತಾಯಿ ಮೃತಪಟ್ಟಿದ್ದರು. ಕೊರೊನಾ ವೈರಸ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಯೆನ್ ಚೆಂಗ್ನ ತಮ್ಮ ಕೂಡ ಅಂಗವಿಕಲನಾಗಿದ್ದಾನೆ. ಬಾಲಕನ ದಾರುಣ ಸಾವು ಮತ್ತು ಕುಟುಂಬದ ಕರುಣಾಜನಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಕುಳಿತಲ್ಲಿಯೇ ಮೃತಪಟ್ಟ ಮಗ
ಮಗನನ್ನು ನೋಡಿಕೊಳ್ಳಬೇಕಾದ ಇಬ್ಬರೂ ಕೊರೊನಾ ವೈರಸ್ಗೆ ತುತ್ತಾಗಿದ್ದನ್ನು ತಂದೆ ಆಸ್ಪತ್ರೆಯಿಂದಲೇ ಚೀನಾದ ಸಾಮಾಜಿಕ ಮಾಧ್ಯಮ ವೀಬೊದಲ್ಲಿ ಹಂಚಿಕೊಂಡಿದ್ದರು. ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಮಗನಿಗೆ ಆಹಾರ ಮತ್ತು ನೀರು ಇಲ್ಲದೆ ಸಂಕಷ್ಟ ಎದುರಾಗಿದೆ. ಯಾರಾದರೂ ಸಹಾಯಕ್ಕೆ ಬನ್ನಿ ಎಂದು ಅವರು ಅಂಗಲಾಚಿದ್ದರು. ತಮ್ಮ ಸಂಬಂಧಿಕರು, ಊರಿನವರು ಮತ್ತು ವೈದ್ಯರ ಬಳಿ ಸಹ ಮನವಿ ಮಾಡಿದ್ದರು. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಯೆನ್ ಚೆಂಗ್ ಜ. 29ರಂದು ವೀಲ್ ಚೇರ್ನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಒದ್ದಾಡಿ ಕೊನೆಯುಸಿರೆಳೆದಿದ್ದಾನೆ.

ಇಬ್ಬರು ಅಧಿಕಾರಿಗಳ ಅಮಾನತು
ಬಾಲಕನ ತಂದೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಅಧಿಕಾರಿಗಳು ಅಂಗವಿಕಲ ಬಾಲಕನ ನೆರವಿಗೆ ಮುಂದಾಗಿರಲಿಲ್ಲ. ಆತನ ಸಾವಿನ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ವೈರಸ್ ತಗುಲಿದವರು ಮತ್ತು ಅವರ ಕುಟುಂಬದವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿ. ಹೀಗಾಗಿ ತಮ್ಮ ಜವಾಬ್ದಾರಿ ನಿರ್ವಹಿಸದ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಮತ್ತು ಮೇಯರ್ನನ್ನು ಅವರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications