ಡ್ಯಾನಿಶ್ರ ಗುರುತು ಪತ್ತೆಹಚ್ಚಿ ಕ್ರೂರವಾಗಿ ಕೊಂದ ತಾಲಿಬಾನ್: ಖಚಿತ ಪಡಿಸಿದ ಅಫ್ಘಾನ್ ಅಧಿಕಾರಿ
ಕಾಬೂಲ್, ಆ.02: ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವಿನ ಬಗ್ಗೆ ಅಫ್ಘಾನ್ ಭದ್ರತಾ ಪಡೆಗಳ ವಕ್ತಾರರು ಸೋಮವಾರದಂದು ಮೊದಲ ಅಧಿಕೃತ ದೃಢೀಕರಣ ನೀಡಿದ್ದಾರೆ. ಈ ಪ್ರತಿಕ್ರಿಯೆಯಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿರನ್ನು ತಾಲಿಬಾನಿಗರು ವಶಕ್ಕೆ ಪಡೆದು ಕೊಂದಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.
ಈ ಹಿಂದೆ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ತಾಲಿಬಾನಿಗರು ಹಾಗೂ ಅಫ್ಘಾನಿಸ್ತಾನ ಭದ್ರತಾ ಪಡೆಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿತ್ತು. ಆದರೆ ಇತ್ತೀಚೆಗೆ ಪ್ರಕಟವಾದ ವರದಿಯೊಂದು ಡ್ಯಾನಿಶ್ ಸಿದ್ದಿಕಿರನ್ನು ತಾಲಿಬಾನಿಗರು ವಶಕ್ಕೆ ಪಡೆದು, ಗುರುತು ಪರಶೀಲಿಸಿ ಕೊಂದಿದ್ದಾರೆ ಎಂದು ತಿಳಿಸಿತ್ತು.
ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ವಕ್ತಾರರು (ಎಎನ್ಡಿಎಸ್ಎಫ್) ಅಜ್ಮಾಲ್ ಒಮರ್ ಶಿನ್ವಾರಿ, ಡ್ಯಾನಿಶ್ ಸಿದ್ದಿಕಿ 'ಬಂಧಿಸಿ' ನಂತರ ಮರಣದಂಡನೆಗೆ ಒಳಪಡಿಸಲಾಗಿದೆ ಎಂದು ಮೊದಲ ಅಧಿಕೃತ ದೃಢೀಕರಣವನ್ನು ನೀಡಿದರು.

"ಹಲ್ಲೆ ನಡೆಸಿರುವ ಬಗ್ಗೆ ಯಾವುದೇ ದೃಢೀಕರಣವಿಲ್ಲ, ಡ್ಯಾನಿಶ್ರನ್ನು ಮರಣದಂಡನೆಗೆ ಒಳಪಡಿಸಿದ ಪ್ರದೇಶವು ತಾಲಿಬಾನ್ ನಿಯಂತ್ರಣದಲ್ಲಿದೆ, ಆದ್ದರಿಂದ ಸಾಕ್ಷಿಗಳನ್ನು ಕಂಡುಹಿಡಿಯುವುದು ಸಮಯ ತೆಗೆದುಕೊಳ್ಳುತ್ತಿದೆ," ಎಂದು ಅಫ್ಘಾನ್ ಅಧಿಕಾರಿಯೊಬ್ಬರು ಇಂದು ಮಾಧ್ಯಮವೊಂದಕ್ಕೆ ಹೇಳಿದರು.
38 ವರ್ಷದ, ಪುಲಿಟ್ಜರ್ ಪ್ರಶಸ್ತಿ ವಿಜೇತ, ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಲ್ಲ. ಘರ್ಷಣೆ ಸಂದರ್ಭ ಗುಂಡು ತಗುಲಿ ಸಾವನ್ನಪ್ಪಿಲ್ಲ. ಆದರೆ ತಾಲಿಬಾನಿಗರು ಡ್ಯಾನಿಶ್ ಸಿದ್ದಿಕಿ ಗುರುತನ್ನು ಪರಿಶೀಲನೆ ಮಾಡಿ, "ಕ್ರೂರವಾಗಿ ಕೊಂದಿದೆ" ಎಂದು ಅಮೆರಿಕದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಡ್ಯಾನಿಶ್ ಸಿದ್ದಿಕಿ ರಾಯಿಸ್ಟರ್ಗಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಅಫ್ಘಾನ್ ಭದ್ರತಾ ಪಡೆ ಸಂಘರ್ಷದ ಸಂದರ್ಭ ಕಾರ್ಯನಿರ್ವಹಿಸುತ್ತಿದ್ದರು. ಕಂದಾಹಾರದಲ್ಲಿ ಸ್ಪಿನ್ ಬೋಲ್ಡಕ್ ಜಿಲ್ಲೆಯಲ್ಲಿನ ತಾಲಿಬಾನ್ ಹಾಗೂ ಅಫ್ಘಾನ್ ಭದ್ರತಾ ಪಡೆ ನಡುವೆ ನಡೆದ ಸಂಘರ್ಷದಲ್ಲಿ ಸಿದ್ದಿಕಿ ಸಾವನ್ನಪ್ಪಿದರು ಎಂದು ಇದಕ್ಕೂ ಮುನ್ನ ವರದಿಯಾಗಿತ್ತು.
ಅಮೆರಿಕದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ, ''ತಾಲಿಬಾನ್ ದಾಳಿ ನಡೆಸಿ ಗುಂಪು ಬೇರ್ಪಟ್ಟು ಸಿದ್ದಿಕಿ ಮೂವರು ಅಫ್ಘಾನ್ ಪಡೆಯ ವ್ಯಕ್ತಿಗಳ ಜೊತೆ ಉಳಿದರು. ಈ ಸಂದರ್ಭ ದಾಳಿ ವೇಳೆ ಸಿದ್ದಿಕಿಗೆ ಗುಂಡು ತಗುಲಿದೆ. ಈ ಕಾರಣದಿಂದಾಗಿ ಡ್ಯಾನಿಶ್ ಸಿದ್ದಿಕಿ ಮತ್ತು ತಂಡವು ಸ್ಥಳೀಯ ಮಸೀದಿಗೆ ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಆದರೆ ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಮಾಡಿತು. ತಾಲಿಬಾನ್ ಸಿದ್ದಿಕಿಯವರನ್ನು ವಶಪಡಿಸಿಕೊಂಡಾಗ ಸಿದ್ದಿಕಿ ಜೀವಂತವಾಗಿದ್ದರು. ತಾಲಿಬಾನ್ ಸಿದ್ದಿಕಿ ಗುರುತನ್ನು ಪರಿಶೀಲಿಸಿ ಸಿದ್ದಿಕಿ ಮತ್ತು ಜೊತೆಗಿದ್ದವರನ್ನು ಗಲ್ಲಿಗೇರಿಸಿತು. ಕಮಾಂಡರ್ ಮತ್ತು ಆತನ ತಂಡದ ಉಳಿದವರು ಆತನನ್ನು ರಕ್ಷಿಸಲು ಪ್ರಯತ್ನಿಸಿದಾಗ ಸಾವನ್ನಪ್ಪಿದರು," ಎಂದು ಉಲ್ಲೇಖ ಮಾಡಲಾಗಿದೆ.

"ತಾಲಿಬಾನ್ ಪಾಕಿಸ್ತಾನದಿಂದ ಹಣ ಮತ್ತು ಬೆಂಬಲಿ ಪಡೆಯುತ್ತಿದೆ. ಅಫ್ಘಾನಿಸ್ತಾನ ಸರ್ಕಾರವು ಹೋರಾಡುತ್ತಿರುವ ಪ್ರಾಕ್ಸಿ ಯುದ್ಧವಾಗಿದೆ. ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗರ ವಶದಲ್ಲಿದೆ ಎಂಬ ವಶದಲ್ಲಿದೆ ಎಂಬ ತಾಲಿಬಾನ್ ವಾದ ಸುಳ್ಳು. ಲಷ್ಕರ್-ಇ-ತೈಬಾ, ಇಸ್ಲಾಮಿಕ್ ರಾಜ್ಯ / ಡೇಶ್, ಅಲ್-ಖೈದಾ ಎಲ್ಲಾ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಅನೇಕ ಭಯೋತ್ಪಾದಕರು ಮತ್ತು ಲಷ್ಕರ್ ಹೋರಾಟಗಾರರು ಪಾಕಿಸ್ತಾನದಿಂದ ಬರುತ್ತಿದ್ದಾರೆ," ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಜ್ಮಾಲ್ ಒಮರ್ ಶಿನ್ವಾರಿ ಹೇಳಿದ್ದಾರೆ.
"ಎಲ್ಲಾ ದೇಶಗಳು ಮಧ್ಯಸ್ಥಗಾರರು ಅಪ್ಘಾನ್ ಸೈನ್ಯವನ್ನು ಬೆಂಬಲಿಸಬೇಕು. ಅಫ್ಘಾನ್ ಪಡೆಗಳು ಬಲವಾಗಿರುತ್ತವೆ ಮತ್ತು ತಾಲಿಬಾನ್ ನಮ್ಮ ದೇಶವನ್ನು ಸ್ವಾಧೀನ ಪಡೆಯಲು ನಾವು ಅನುಮತಿಸುವುದಿಲ್ಲ," ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications