ಪೌರತ್ವ ಕಾಯ್ದೆ ತಾರತಮ್ಯದಿಂದ ಕೂಡಿದೆ: ವಿಶ್ವಸಂಸ್ಥೆ ಕಳವಳ
ಜಿನಿವಾ, ಡಿಸೆಂಬರ್ 13: ಭಾರತದ ಲೋಕಸಭೆ ಅಂಗೀಕರಿಸಿ ರಾಷ್ಟ್ರಪತಿಗಳ ಅಂಕಿತವೂ ಪಡೆದಿರುವ ಪೌರತ್ವ ಕಾಯ್ದೆ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, 'ಮಸೂದೆಯು ತಾರತಮ್ಯದಿಂದ' ಕೂಡಿದೆ ಎಂದು ಹೇಳಿದೆ.
ಭಾರತದ ಪೌರತ್ವದಿಂದ ಮೂರು ದೇಶಗಳ ಮುಸ್ಲೀಮರನ್ನು ಹೊರಗಿಡುವ ಮೂಲಕ ಪೌರತ್ವ ಕಾಯ್ದೆಯು ಮೂಲದಲ್ಲಿಯೇ ತಾರತಮ್ಯದ ಗುಣವನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಅಭಿಪ್ರಾಯಪಟ್ಟಿದೆ.
'ಭಾರತ ಸರ್ಕಾರದ ಪೌರತ್ವ ಕಾಯ್ದೆಯ ಬಗ್ಗೆ ನಾವು ಕಳವಳ ಹೊಂದಿದ್ದೇವೆ, ಕಾಯ್ದೆಯು ತಾರತಮ್ಯದಿಂದ ಕೂಡಿದೆ' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ವಕ್ತಾರ ಜೆರ್ಮಿ ಲಾರೆನ್ಸ್ ಹೇಳಿದ್ದಾರೆ.

ಆರು ಇತರ ಧರ್ಮದ ವಲಸಿಗರಿಗೆ ನೀಡುತ್ತಿರುವ ರಕ್ಷಣೆಯನ್ನು ಹೊಸ ಕಾಯ್ದೆಯು ಮುಸ್ಲೀಂ ವಲಸಿಗರಿಗೆ ನೀಡುತ್ತಿಲ್ಲ. ಭಾರತ ಸಂವಿಧಾನದ ಪ್ರಕಾರ ಸಮಾನತೆ ಮೊದಲ ಆದ್ಯತೆ ಆಗಿದೆ, ಆದರೆ ಹೊಸ ಕಾಯ್ದೆಯ ಮೂಲಕ ಸಂವಿಧಾನದ ಆಶಯವನ್ನು ಸಡಿಲಿಸಲಾಗಿದೆ' ಎಂದು ಅವರು ಹೇಳಿದರು.
'ಕಾಯ್ದೆಯನ್ನು ಸುಪ್ರೀಂಕೋರ್ಟ್ ಮರುಪರಿಶೀಲನೆ ಮಾಡುತ್ತದೆ ಎಂಬ ನಂಬಿಕೆ ಇದೆ. ಕಾಯ್ದೆಯನ್ನು ಜಾಗರೂಕತೆಯಿಂದ ಭಾರತದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಜವಾಬ್ದಾರಿಗೆ ಚ್ಯುತಿ ಬಾರದಂತೆ ಬದಲಾಯಿಸಲಾಗುತ್ತದೆ ಎಂದು ನಂಬಿದ್ದೇವೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications