ಜಾಗತಿಕ ಉಗ್ರರ ಪಟ್ಟಿಗೆ ಅಜರ್ ಹೆಸರು ಸೇರಿಸಲು ಚೀನಾ ಅಡ್ಡಗಾಲು
ಬೀಜಿಂಗ್, ಫೆಬ್ರವರಿ 15: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ದಾಳಿಯ ಹೊಣೆಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ. 44 ಯೋಧರು ಹುತಾತ್ಮರಾದ ಈ ಘಟನೆಯನ್ನು ಚೀನಾ ಖಂಡಿಸಿದೆ.
ಕಾಶ್ಮೀರದಲ್ಲಿ ಆತ್ಮಾಹುತಿ ಉಗ್ರರ ದಾಳಿ ನಡೆದಿರುವುದನ್ನು ಚೀನಾ ತೀವ್ರವಾಗಿ ಖಂಡಿಸುತ್ತಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ನಮ್ಮ ಸಂತಾಪವಿದೆ. ಗಾಯಗೊಂಡವರು ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಚೀನಾದ ವಿದೇಶಾಂಗ ಖಾತೆ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.
ಆದರೆ, ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ.

ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯಿಂದ ನಿಷೇಧ ಹೇರುವಂತೆ ಮಾಡುವ ಭಾರತದ ಪ್ರಯತ್ನಕ್ಕೆ ಚೀನಾ ಇದಕ್ಕೂ ಮುನ್ನ ಮೂರು ಬಾರಿ ಅಡ್ಡಿಪಡಿಸಿತ್ತು. ಪಾಕಿಸ್ತಾನ ಬೆಂಬಲಿತ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ಗೆ ನಿರಂತರವಾಗಿ ಚೀನಾ ಬೆಂಬಲ ಸಿಗುತ್ತಿದೆ.
ವಿಶ್ವಸಂಸ್ಥೆಯು ನಿಷೇಧಿತ ಉಗ್ರರ ಪಟ್ಟಿಯನ್ನು ತಯಾರಿಸುವ ವಿಚಾರದಲ್ಲಿ ಈಗಾಗಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದಲೇ ತೀವ್ರ ಆಕ್ಷೇಪವಿದೆ. ಹಾಗಾಗಿ, ಚೀನಾ ದೇಶವು ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.
ಅಜರ್ ಮೇಲೆ ನಿಷೇಧ ಹೇರಬೇಕೆಂದು ವಿಶ್ವಸಂಸ್ಥೆಯನ್ನು ಭಾರತ ಆಗ್ರಹಿಸುತ್ತಿದೆ. ಕಳೆದ ವರ್ಷ ನಡೆದಿದ್ದ ಪಠಾಣ್ ಕೋಟ್ ಉಗ್ರರ ದಾಳಿಯ ಪ್ರಮುಖ ರೂವಾರಿಯೂ ಆಗಿರುವ ಮಸೂದ್ ಗೆ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರುವಂತೆ ಭಾರತ ವಿಶ್ವಸಂಸ್ಥೆಯನ್ನು ಕೋರಿದೆ.
ವಿಶ್ವಸಂಸ್ಥೆಯ 1267 ಭದ್ರತಾ ಸಮಿತಿಯ ಮುಂದೆ ಈ ವಿಚಾರ ಚರ್ಚೆಗೆ ಬಂದಾಗ, ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಾಗುತ್ತದೆ. ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ. ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ ರೂವಾರಿ ಮೌಲನಾ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಎರಡು ವರ್ಷಗಳ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications