ಥಾಯ್ಲೆಂಡ್ ಗುಹೆ ಸಾಹಸ: ಘಟನೆಯ ಸುತ್ತಲಿನ ವಾಸ್ತವಗಳು
ಮಾಯ್ ಸಾಯ್, ಜುಲೈ 12: ಅಂದು ಶನಿವಾರ, ಜೂನ್ 23. ಎಂದಿನಂತೆ ಫುಟ್ಬಾಲ್ ಅಭ್ಯಾಸ ಮುಗಿಸಿದ ಬಳಿಕ ಅಲ್ಲಿ ಜನ್ಮದಿನದ ಸಂಭ್ರಮವಿತ್ತು.
ತಂಡದ ಫೀರಫತ್ ಸೊಂಪಿಂಗ್ಜೈ ಎಂಬ ಬಾಲಕ 16 ವರ್ಷ ದಾಟಿ 17ಕ್ಕೆ ಕಾಲಿಡುತ್ತಿದ್ದ ಗಳಿಗೆಯದು.
ವೈಲ್ಡ್ ಬೋರ್ ಎಂಬ ಹೆಸರಿನ ಫುಟ್ಬಾಲ್ ತಂಡದ 12 ಬಾಲಕರು ಜನ್ಮದಿನದ ಸಂಭ್ರಮವನ್ನು ಮೈದಾನದಲ್ಲಿ ಆಚರಿಸಲಿಲ್ಲ. ಬದಲಾಗಿ ಹಲವು ಅಚ್ಚರಿಗಳ ಜಾಗವಾದ ದುರ್ಗಮ, ಬೃಹತ್ ಥಾಮ್ ಲುವಾಂಗ್ ಗುಹೆಯನ್ನು ಆಯ್ದುಕೊಂಡರು.
ಆದರೆ, ವಾಸ್ತವ ಅರಿಯದೆ ಬಹುತೇಕರಿಂದ ದೂಷಣೆಗೆ ಒಳಗಾಗಿದ್ದ ಕೋಚ್ ಎಕ್ಕೊಪಲ್ ಚಂಟಾವೊಂಗ್ ಆ ಸಮಯದಲ್ಲಿ ಬಾಲಕರ ಜತೆಯಲ್ಲಿ ಇರಲೇ ಇಲ್ಲ.

ಬಾಲಕರ ಇಷ್ಟದ ಜಾಗ
11-16 ವರ್ಷದ ವಯಸ್ಸಿನ ಬಾಲಕರು ಸ್ಥಳೀಯ ಅಂಗಡಿಯೊಂದರಲ್ಲಿ $28 ಮೊತ್ತದ ಆಹಾರ, ಪಾನೀಯ ಮತ್ತು ಸಿಹಿ ತಿನಿಸುಗಳನ್ನು ಖರೀದಿಸಿದರು. ಬಳಿಕ ತಮ್ಮ ಸೈಕಲ್ಗಳನ್ನೇರಿ ಗುಹೆಯತ್ತ ಪ್ರಯಾಣಿಸಿದ್ದರು.
ಸೈಕಲ್ಗಳನ್ನು ಗುಹೆಯ ದ್ವಾರದಲ್ಲಿ ನಿಲ್ಲಿಸಿದ ಬಾಲಕರು ಅದರೊಳಗೆ ಹೊಕ್ಕರು. ಮಳೆಗಾಲದ ಅವಧಿಯಲ್ಲಿ ಒಳಭಾಗದಲ್ಲಿ ಏಕಾಏಕಿ ಪ್ರವಾಹ ಉಂಟಾಗಬಹುದು ಎಂಬ ಎಚ್ಚರಿಕೆಯ ಫಲಕವನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ.
ಏಕೆಂದರೆ ಅವರಿಗೆ ಆ ಗುಹೆ ಚಿರಪರಿಚಿತವಾಗಿತ್ತು. ಜತೆಗೆ ಅವರ ಬಲು ಇಷ್ಟದ ಜಾಗ ಕೂಡ.
ಈ ಬಾಲಕರು ಶಾನ್, ಲಹು, ಲುವಾ ಎಂಬ ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಅವರ ಜತೆ ಉತ್ತರ ಥಾಯ್ಲೆಂಡ್ನ ಇಬ್ಬರು ಬಾಲಕರೂ ಇದ್ದರು.

ಹೊರಗೆ ವಿಪರೀತ ಮಳೆ
ಗುಹೆಯೊಳಗಿನ ಕಿಂಡಿಗಳಲ್ಲಿ ನುಸಿದು ಹೋಗುವ ಸಾಹಸ ಅವರಿಗೆ ಹೊಸದಲ್ಲ. ಆದರೆ, ಈ ಬಾರಿ ಅವರ ಅದೃಷ್ಟ ಕೈಕೊಟ್ಟಿತ್ತು. ಇದು ಅಲ್ಲಿ ವಿಪರೀತ ಮಳೆ ಸುರಿಯುವ ಅವಧಿಯೇನಲ್ಲ. ಆದರೆ, ಅದ್ಯಾಕೋ ರೊಚ್ಚಿಗೆದ್ದಿದ್ದ ಮಳೆ ಧಾರಾಕಾರವಾಗಿ ಸುರಿಯಿತು.
ಆ ಬೃಹತ್ ಗುಹೆಯ ಒಳಭಾಗಕ್ಕೆ ಸಾಗಿದ್ದ ಬಾಲಕರಿಗೆ ಮರಳಿ ಹೋಗಬೇಕೆನ್ನುವಾಗಲೇ ಅಪಾಯದಲ್ಲಿ ಸಿಲುಕಿರುವುದು ಅರಿವಾಗಿದ್ದು. ಮಳೆಯ ಅಬ್ಬರಕ್ಕೆ ಏಕಾಏಕಿ ಗುಹೆಯೊಳಗೆ ನೀರು ನುಗ್ಗಿತ್ತು.

ಹುಡುಕಿಕೊಂಡು ಹೊರಟ ಕೋಚ್
ಇತ್ತ ಆ ಬಾಲಕರ ಪೋಷಕರಿಗೆ ತಮ್ಮ ಮಕ್ಕಳು ಎಲ್ಲಿ ಹೋದರೆಂಬ ಕಳವಳ ಶುರುವಾಯಿತು.
ಅವರು ಸಂಪರ್ಕಿಸಿದ್ದು ಆ ತಂಡವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕೋಚ್, ಎಕ್ಕೊಪಲ್ ಚಂಟಾವೊಂಗ್ ಅವರನ್ನು. ಮಕ್ಕಳ ಚಟುವಟಿಕೆ ಕುರಿತು ತಿಳಿದಿದ್ದ ಚಂಟಾವೊಂಗ್ ನೇರವಾಗಿ ಗುಹೆಯತ್ತ ತೆರಳಿದರು. ಅವರಿಗೆ ಹೊರಭಾಗದಲ್ಲಿ ಅವರ ಸೈಕಲ್ಗಳು ಕಂಡವು.
ಅವರನ್ನು ಹುಡುಕಿ ಕರೆತರುವ ಸಲುವಾಗಿ ಅವರೂ ಗುಹೆಯ ಒಳಭಾಗಕ್ಕೆ ನುಸುಳಿ ಹೋದರು. ಆ ಮಕ್ಕಳನ್ನೇನೋ ತಲುಪಿದರು. ಆದರೆ, ಹೊರಕ್ಕೆ ಕರೆತರುವುದು ಸಾಧ್ಯವಾಗಲಿಲ್ಲ. ಏಕೆಂದರೆ ಅಷ್ಟರಲ್ಲಿ ನೀರು ಗುಹೆಯನ್ನು ಆವರಿಸಿತ್ತು.
ಅಲ್ಲಿಂದ ಮುಂದೆ ನಡೆದಿದ್ದು ಇತಿಹಾಸದಲ್ಲಿ ದಾಖಲಾಗುವಂತಹ ಸಾಹಸಗಾಥೆ.

ಬಾಲ್ಯದಲ್ಲಿಯೇ ಫುಟ್ಬಾಲ್ ಪ್ರೀತಿ
ಕೋಚ್ ಎಕ್ಕೊಪಲ್ ಚಂಟಾವೊಂಗ್ನ ಪೋಷಕರು ಮೂಲತಃ ಮ್ಯಾನ್ಮಾರ್ನವರು. ಸಾಂಕ್ರಾಮಿಕ ಕಾಯಿಲೆಯಿಂದ ಕುಟುಂಬವನ್ನು ಕಳೆದುಕೊಂಡ ಚಂಟಾವೊಂಗ್, ಮಾಯ್ ಸಾಯ್ನಲ್ಲಿನ ಅಜ್ಜಿಯ ಆಶ್ರಯದಲ್ಲಿ ಬೆಳೆದರು.
ಚಿಕ್ಕಂದಿನಲ್ಲಿ ಫುಟ್ಬಾಲ್ ಆಟದ ಬಗ್ಗೆ ಪ್ರೀತಿ ಹೊಂದಿದ್ದ ಚಂಟಾವೊಂಗ್, ಥಾಯ್ಲೆಂಡ್-ಮ್ಯಾನ್ಮಾರ್ ಗಡಿಯಲ್ಲಿ ಬುಡಕಟ್ಟು ಸಮುದಾಯದ ಅನೇಕ ಮಕ್ಕಳನ್ನು ಭೇಟಿಯಾಗಿದ್ದರು.
ಅವರೆಲ್ಲರೂ ತನ್ನಂತೆ ಬಡವರು, ಫುಟ್ಬಾಲ್ ಆಡಲು ಅವಕಾಶ ಇಲ್ಲದವರು ಎನ್ನವುದು ತಿಳಿದಿತ್ತು. ಮುಂದೆ ಲಾಂಪುನ್ನಲ್ಲಿರುವ ದೇವಸ್ಥಾನವೊಂದರಲ್ಲಿ ಬಾಲ ಸನ್ಯಾಸಿಯಾಗಿ ಧ್ಯಾನದ ವಿದ್ಯೆ ಕಲಿತರು.
ಆದರೆ, ಫುಟ್ಬಾಲ್ ಆಸಕ್ತಿ ಕಡಿಮೆಯಾಗಿರಲಿಲ್ಲ. ಈ ಗುಡ್ಡಗಾಡು ಪ್ರದೇಶದ ಬಾಲಕರಿಗಾಗಿಯೇ ಮೂರು ವರ್ಷದ ಹಿಂದೆ ಮುಖ್ಯ ಕೋಚ್ ಜತೆ ಸೇರಿಕೊಂಡು 'ಮೂ ಪಾ' (ವೈಲ್ಡ್ ಬೋರ್) ಎಂಬ ತಂಡ ಹುಟ್ಟುಹಾಕಿದರು.
ತಂಡದ ಎಲ್ಲ 12 ಮಕ್ಕಳನ್ನೂ ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದರು. ಆ ಮಕ್ಕಳ ಜತೆ ನಡೆಸಿದ ಚಟುವಟಿಕೆಗಳ ಕುರಿತು ಫೇಸ್ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದರು.
ಗುಹೆಯೊಳಗೆ ಸಿಲುಕಿದ್ದ ಬಾಲಕರು ಮತ್ತು ಕೋಚ್ನನ್ನು ಪತ್ತೆ ಮಾಡಲು ಭಾರಿ ದೊಡ್ಡ ರಕ್ಷಣಾ ಪಡೆಯನ್ನು ಸಜ್ಜುಗೊಳಿಸಲಾಗಿತ್ತು.
ಆದರೆ, ಅವರು ಬದುಕಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿಯೇ ದೇಶಕ್ಕೆ ಒಂಬತ್ತು ದಿನ ಬೇಕಾಯಿತು.

ಧ್ಯಾನದ ಕಲೆ ಹೇಳಿಕೊಟ್ಟಿದ್ದ ಕೋಚ್
ನೂರಾರು ಸ್ವಯಂಕಾರ್ಯಕರ್ತರು ಮತ್ತು ಅಧಿಕಾರಿಗಳು ವಿವಿಧ ದೇಶಗಳಿಂದ ನೆರವಿಗಾಗಿ ಧಾವಿಸಿದ್ದರು. ಅವರಲ್ಲಿ ಮಹತ್ವದ ಪಾತ್ರ ವಹಿಸಿದ್ದು ಬ್ರಿಟನ್ನಿಂದ ಬಂದ ಸಣ್ಣ ತಂಡ. '
ಜುಲೈ 2ರಂದು ಬ್ರಿಟನ್ನ ಇಬ್ಬರು ಮುಳುಗುತಜ್ಞರು ಕತ್ತಲನ್ನು ಸೀಳಿಕೊಂಡು ಮುಂದೆ ಸಾಗಿದ್ದರು. ಆಗಲೇ ರಾತ್ರಿ 9.40 ಆಗಿತ್ತು. ಅವರ ಹಾಯಿಸಿದ ಬೆಳಕಿಗೆ ಕೊನೆಗೂ ಕೋಚ್ ಮತ್ತು ಬಾಲಕರು ಕಾಣಿಸಿದರು.
ಎಲ್ಲರೂ ಸುಸ್ತಾಗಿದ್ದರು. ಆದರೆ, ಆ ಬಾಲಕರು ಮತ್ತು ಕೋಚ್ ಸಮಚಿತ್ತ ಹಾಗೂ ಉಲ್ಲಾಸದಿಂದ ಇದ್ದರು. ಏಕೆಂದರೆ ಕೋಚ್ ಚಂಟಾವೊಂಗ್, ಎಲ್ಲರಿಗೂ ಧ್ಯಾನ ಮಾಡುವ ಕಲೆಯನ್ನು ಹೇಳಿಕೊಟ್ಟಿದ್ದರು.
ಅಲ್ಲಿ 13 ಮಂದಿ ಜೀವಂತವಾಗಿ ಸಿಕ್ಕರೇನೋ ಸರಿ. ಆದರೆ, ರಕ್ಷಣಾ ತಂಡದ ತಜ್ಞರಿಗೆ ಎದುರಾಗಿದ್ದು ಭಾಷೆಯ ಸಮಸ್ಯೆ. ಥಾಯ್ ಭಾಷೆ ತಿಳಿಯದ ಅವರು ಇಂಗ್ಲಿಷ್ನಲ್ಲಿಯೇ 'ಎಷ್ಟು ಮಂದಿ ಇದ್ದೀರಿ' ಎಂದು ಪ್ರಶ್ನಿಸಿದರು.
'13' ಎಂದು ಬಾಲಕನೊಬ್ಬನ ಧ್ವನಿ ಕೇಳಿಸಿತು.

ಅದುಲ್- ನಿರಾಶ್ರಿತರ ಪ್ರತಿನಿಧಿ
ಅದುಲ್ ಎಂಬ ಬಾಲಕನ ಧ್ವನಿ ಅದು. ಇಡೀ ತಂಡದಲ್ಲಿ ಇಂಗ್ಲಿಷ್ ಬಲ್ಲವನಾಗಿದ್ದ ಬಾಲಕ ಆತ. ಇಂಗ್ಲಿಷ್ ಮಾತ್ರವಲ್ಲ ಒಟ್ಟು ನಾಲ್ಕು ಭಾಷೆಗಳು ಆತನಿಗೆ ಪರಿಚಿತ.
ಥಾಯ್, ಇಂಗ್ಲಿಷ್, ಬರ್ಮೀಸ್ ಮತ್ತು ಚೀನೀ ಭಾಷೆಗಳು ಆತನಿಗೆ ಕರಗತವಾಗಿದ್ದವು. ಕಾರ್ಯಾಚರಣೆ ವೇಳೆ ಸಂವಹನಕ್ಕೆ ನೆರವಾಗಿದ್ದೇ ಅದುಲ್ನ ಇಂಗ್ಲಿಷ್ ಜ್ಞಾನ.
ಮ್ಯಾನ್ಮಾರ್ನ ವಾ ರಾಜ್ಯ ಮಾದಕದ್ರವ್ಯಗಳ ವಹಿವಾಟಿಗೆ ಕುಖ್ಯಾತವಾದದ್ದು. ಅದುಲ್ ಹುಟ್ಟಿದ್ದು ಅಲ್ಲಿಯೇ. ಕ್ರೈಸ್ತ ಧರ್ಮೀಯರಾದ ಆತನ ಪೋಷಕರು ಆ ಭಾಗದ ಹೆಚ್ಚಿನವರಂತೆಯೇ ಶಿಕ್ಷಣಕ್ಕಾಗಿ ಉತ್ತರ ಥಾಯ್ಲೆಂಡ್ಗೆ ಕಳುಹಿಸಿದರು.
ಥಾಯ್ಲೆಂಡ್ನಲ್ಲಿ ನೆಲೆ ಇಲ್ಲದವ ಎಂದು ಹೆಸರು ಬರೆಸಿಕೊಂಡ 4 ಲಕ್ಷ ಜನರಲ್ಲಿ ಅದುಲ್ ಕೂಡ ಒಬ್ಬ. ಜನ್ಮದಿನದ ಪ್ರಮಾಣಪತ್ರ, ಐಡಿ ಕಾರ್ಡ್ ಅಥವಾ ಪಾಸ್ಪೋರ್ಟ್ ಇದಾವುದೂ ಇಲ್ಲದ ಅದುಲ್, ಅಲ್ಲಿ ಅಧಿಕೃತವಾಗಿ ಮದುವೆಯಾಗುವಂತಿಲ್ಲ, ಕೆಲಸ ಅಥವಾ ಬ್ಯಾಂಕ್ ಖಾತೆ ಹೊಂದುವಂತಿಲ್ಲ, ಪ್ರಾಂತ್ಯದ ಹೊರಗೂ ಪ್ರಯಾಣಿಸುವಂತಿಲ್ಲ. ಜತೆಗೆ ಸ್ವಂತ ಆಸ್ತಿ ಗಳಿಸಲು ಅವಕಾಶವಿಲ್ಲ. ಮತ ಚಲಾಯಿಸುವ ಹಕ್ಕಂತೂ ಇಲ್ಲವೇ ಇಲ್ಲ.
ಆದರೆ, ಆತನಿಗೆ ಫುಟ್ಬಾಲ್ ಎಂದರೆ ಪಂಚಪ್ರಾಣ. ಜತೆಗೆ ಗಿಟಾರ್ ನುಡಿಸುವುದು ಹಾಡುವುದು ಕೂಡ. ಓದು ಮತ್ತು ಕ್ರೀಡೆ ಎರಡರಲ್ಲಿಯೂ ಆತನ ಶ್ರಮವನ್ನು ಶಾಲೆಯ ಶಿಕ್ಷಕರು ಮೆಚ್ಚಿಕೊಂಡಿದ್ದಾರೆ.

ಪೌರತ್ವ, ದಾಖಲೆ ಸಿಗುತ್ತಿಲ್ಲ
ಬಡ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದಕ್ಕಾಗಿ ಇಲ್ಲಿನ ಆಶ್ರಯ ಶಿಕ್ಷಣ ಸಂಸ್ಥೆಗಳಿಗೆ ತಂದು ಬಿಡುತ್ತಾರೆ. ಇಲ್ಲಿನ ಹಿರಿಯ ಮಕ್ಕಳು ಅಡುಗೆ ಮಾಡುವುದು, ಚಿಕ್ಕವರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುತ್ತಾರೆ.
ಸುಖಾಂತ್ಯಗೊಂಡ ಗುಹೆಯ ಪ್ರಕರಣವು ಪೋಷಕರಿದ್ದೂ ಅನಾಥರಂತೆ ಬದುಕುವ ಈ ಮಕ್ಕಳ ಸಂಕಟದ ಮೇಲೆ ಬೆಳಕು ಚೆಲ್ಲುವಂತೆ ಮಾಡಿದೆ.
ಥಾಯ್ಲೆಂಡ್ ಸರ್ಕಾರವು ಸಾವಿರಾರು ವಲಸಿಗ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಆದರೆ, ಬೆಟ್ಟಗುಡ್ಡಗಳಲ್ಲಿನ ಬುಡಕಟ್ಟು ಸಮುದಾಯದ ಜನರಿಗೆ ಪೌರತ್ವ ಹಾಗೂ ಕಾನೂನು ಮಾನ್ಯತೆ ನೀಡುವ ಪ್ರಕ್ರಿಯೆ ಹೆಚ್ಚು ಸಂಕೀರ್ಣ ಮತ್ತು ನಿಧಾನಗತಿಯಲ್ಲಿದೆ.
ಥಾಯ್ಲೆಂಡ್ನ ಉತ್ತರ ಭಾಗದಲ್ಲಿ ಹೆಚ್ಚಿನ ಬಡವರು ಇದ್ದಾರೆ. ಅವರೆಲ್ಲರೂ ಮ್ಯಾನ್ಮಾರ್ನಲ್ಲಿನ 70 ವರ್ಷಗಳ ನಾಗರಿಕ ಯುದ್ಧದ ಸಂತ್ರಸ್ತರು. ದೇಶದ ಮೂಲ ಸಮುದಾಯಗಳನ್ನು ಮರಳಿ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮ್ಯಾನ್ಮಾರ್ ಸೇನೆ ವಿಳಂಬ ಮಾಡುತ್ತಿದೆ.
ಫೀರಫತ್ ಸೊಂಪಿಂಗ್ಜೈ ಕುಟುಂಬ ಜೂನ್ 23ರಂದು ತಂದು ಇರಿಸಿರುವ ಜನ್ಮದಿನದ ಕೇಕ್ ಅವರ ಮನೆಯ ಫ್ರಿಡ್ಜ್ನಲ್ಲಿ ಈಗಲೂ ಹಾಗೆಯೇ ಇದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications