‘ಕೊರೊನಾ’ ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?
ಪೀಡೆ ಕೊರೊನಾ ಭೂಮಿಗೆ ಬಂದು ಅಪ್ಪಳಿಸಿದ ಬಳಿಕ ಮಾನವರು ಅನುಭವಿಸಿದಷ್ಟೇ ತೊಂದರೆಗಳನ್ನ ಪ್ರಾಣಿ ಸಂಕುಲ ಕೂಡ ಅನುಭವಿಸಿದೆ. ಅದರಲ್ಲೂ ಡೆನ್ಮಾರ್ಕ್ ಮಿಂಕ್ ಉದ್ಯಮ ಅಕ್ಷರಶಃ ಬೀದಿಗೆ ಬಿದ್ದಿದೆ. ಮಿಂಕ್ ಎಂಬ ಪುಟಾಣಿ ಸ್ತನಿಗಳ ಮೂಲಕ ಕೊರೊನಾ ವೈರಸ್ ಸುಲಭವಾಗಿ ಹರಡುತ್ತದೆ ಎಂಬುದು ತಿಳಿಯುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ ಕೋಟ್ಯಂತರ ಮಿಂಕ್ಗಳನ್ನ ಹತ್ಯೆ ಮಾಡಿತ್ತು. ಹೀಗೆ ಹತ್ಯೆ ಮಾಡಿ ಮಿಂಕ್ಗಳನ್ನ ಹೂತು ಹಾಕಿತ್ತು.
ಆದರೆ ಕಳೆದ ತಿಂಗಳು ಹೊಸ ಸಮಸ್ಯೆ ಶುರುವಾಗಿತ್ತು. ಕೊಲೆ ಮಾಡಿದ್ದ ಮಿಂಕ್ಗಳು ಭೂತದ ರೀತಿ ಸಮಾಧಿಯಿಂದ ಹೊರಬಂದು, ಮಾಲಿನ್ಯಕ್ಕೆ ಕಾರಣವಾಗಿದ್ದವು. ಕೆಟ್ಟ ವಾಸನೆ ಮಿಂಕ್ಗಳ ಸಮಾಧಿ ಸುತ್ತಲೂ ಹರಡಿತ್ತು. ಜನ ವಾಸನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ನಡುವೆಯೇ ಮತ್ತೊಂದು ಶಾಕ್ ನೀಡಿದ್ದಾರೆ ತಜ್ಞರು.
ಅಷ್ಟಕ್ಕೂ ಮಿಂಕ್ಗಳನ್ನ ಹೂತು ಹಾಕಿರುವ ಡೆನ್ಮಾರ್ಕ್ ಮಿಲಿಟರಿ ಪ್ರದೇಶದಿಂದ ಸುಮಾರು 200 ಮೀಟರ್ ದೂರದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿದ್ದು, ಅಲ್ಲಿಂದ ಸ್ವಲ್ಪ ದೂರದಲ್ಲಿ ಕೆರೆ ಕೂಡ ಇದೆ. ಹೀಗೆ ಮಿಂಕ್ಗಳ ದೇಹ ಕೊಳೆತು, ಕೆರೆಯ ನೀರು ಹಾಗೂ ಅಂತರ್ಜಲವೂ ಮಲಿನವಾಗುತ್ತಿದೆ.

‘ಕೊರೊನಾ’ ನಡುವೆ ಮತ್ತೊಂದು ರೋಗ..?
ಕೊರೊನಾ ಕಾರಣಕ್ಕೆ ಜಗತ್ತಿನಲ್ಲಿ ಯುರೋಪ್ ಹಾಗೂ ಅಮೆರಿಕ ಎದುರಿಸಿದಷ್ಟು ಸಂಕಷ್ಟವನ್ನು ಬೇರಾವುದೇ ದೇಶಗಳು ಕಂಡಿಲ್ಲ. ಕೊರೊನಾ ಹರಡುವ ಮುನ್ನ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ರಾಷ್ಟ್ರಗಳು ಬಡತನದ ಬೇಗೆಯಲ್ಲಿ ನರಳುತ್ತಿವೆ. ಇದೇ ರೀತಿ ಡೆನ್ಮಾರ್ಕ್ ಜನರ ಬದುಕು ಬೀದಿಗೆ ಬಿದ್ದಿದೆ.
ಅದರಲ್ಲೂ ರೈತರ ಪಾಡು, ಅದರಲ್ಲೂ ಮಿಂಕ್ ಉದ್ಯಮ ನಡೆಸುತ್ತಿದ್ದ ಕೃಷಿಕರ ಪಾಡು ಶತ್ರುಗೂ ಬೇಡ ಎಂಬಂತಿದೆ. ಇಂತಹ ಹೊತ್ತಲ್ಲೇ ಕೊರೊನಾ ಕೂಡ ಪೂರ್ಣ ಮರೆಯಾಗಿಲ್ಲ, ಹಿಡಿತಕ್ಕೆ ಸಿಕ್ಕಿಲ್ಲ. ಇಷ್ಟೆಲ್ಲಾ ಕಷ್ಟಗಳು ಇರುವಾಗಲೇ ಮಿಂಕ್ಗಳ ಕೊಳೆತ ದೇಹದಿಂದ ಬೇರೆ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸ್ಥಳೀಯರನ್ನ ಕಾಡುತ್ತಿದೆ.

17 ಮಿಲಿಯನ್ ಮಿಂಕ್ಗಳ ಹತ್ಯೆ
ಅಮೆರಿಕದಲ್ಲಿ ನಡೆದಿದ್ದ ಅಧ್ಯಯನದ ವರದಿ ಆಧಾರದಲ್ಲಿ ಮಿಂಕ್ ಪ್ರಾಣಿಗಳಿಂದ ಕೊರೊನಾ ಹರಡುವುದು ದೃಢವಾಗಿತ್ತು. ಈ ವರದಿ ತನ್ನ ಕೈಸೇರಿದ ತಕ್ಷಣ ತಡಮಾಡದ ಡೆನ್ಮಾರ್ಕ್ ಸರ್ಕಾರ ಸುಮಾರು 1 ಕೋಟಿ 70 ಲಕ್ಷ ಮಿಂಕ್ಗಳನ್ನ ಕೊಂದು ಹಾಕಿತ್ತು. ಆದರೆ ಸರ್ಕಾರದ ಕ್ರಮವೇ ಹೊಸ ಸಮಸ್ಯೆಗೆ ಕಾರಣವಾಗಿದೆ.
ಹೀಗೆ ಕೋಟ್ಯಂತರ ಮಿಂಕ್ಗಳನ್ನು ಹೂತು ಹಾಕಿದ ಪ್ರದೇಶದಲ್ಲಿ ಹೊಸ ಆತಂಕ ಎದುರಾಗಿದೆ. ಗುಂಡಿಯಲ್ಲಿ ಹೂತಿರುವ ಕೋಟ್ಯಂತರ ಮಿಂಕ್ ಸ್ತನಿಗಳು ಈಗ ಸಮಾಧಿಯಿಂದ ಹೊರಬರುತ್ತಿವೆ. ಮಿಂಕ್ಗಳ ದೇಹದಿಂದ ಬಿಡುಗಡೆಯಾಗುತ್ತಿರುವ ಗ್ಯಾಸ್ ಈ ಪ್ರಕ್ರಿಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಡೆನ್ಮಾರ್ಕ್ ಶೀತ ವಲಯದ ಪ್ರದೇಶ, ಹೀಗಾಗಿ ಹೆಚ್ಚು ಚಳಿ ಇರುತ್ತದೆ. ಹೀಗೆ ಚಳಿ ಇರುವ ಪ್ರದೇಶಗಳಲ್ಲಿ ಪ್ರಾಣಿಗಳ ದೇಹ ಅಷ್ಟು ಬೇಗ ಕೊಳೆಯುವುದಿಲ್ಲ. ಈಗ ಆಗಿರುವುದೂ ಅದೇ. ಮಣ್ಣು ಮಾಡಿ ತಿಂಗಳಾದರೂ ಅರ್ಧಂಬರ್ಧ ಕೊಳೆತಿರುವ ಮಿಂಕ್ಗಳ ದೇಹವನ್ನು ಅದೇ ಮಿಂಕ್ಗಳ ದೇಹದಿಂದ ಬಿಡೆಗಡೆ ಆಗುತ್ತಿರುವ ಗ್ಯಾಸ್ ಹೊರಗೆ ತಳ್ಳುತ್ತಿದೆ.

ರೈತರ ಸ್ಥಿತಿ ಕಂಡು ಪ್ರಧಾನಿ ಕಣ್ಣೀರು
ಜಗತ್ತಿನಾದ್ಯಂತ ಅತಿಹೆಚ್ಚು ಮಿಂಕ್ ಸ್ತನಿಗಳನ್ನ ರಫ್ತು ಮಾಡುವ ದೇಶ ಡೆನ್ಮಾರ್ಕ್. ಅಷ್ಟಕ್ಕೂ ಈ ಮಿಂಕ್ಗಳ ಉಪಯೋಗ ಏನು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಮಿಂಕ್ಗಳ ತುಪ್ಪಳ ಅಂದರೆ ಅವುಗಳ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಈ ಚರ್ಮದಿಂದ ಕೋಟ್, ಬ್ಯಾಗ್ ಹೀಗೆ ವಿವಿಧ ರೀತಿ ವಸ್ತುಗಳನ್ನು ತಯಾರಿಸುತ್ತಾರೆ.
ಒಂದೊಂದು ಮಿಂಕ್ನ ಚರ್ಮಕ್ಕೂ ಲಕ್ಷಾಂತರ ರೂಪಾಯಿ ಬೆಲೆ ಇದೆ. ಡೆನ್ಮಾರ್ಕ್ನ ವಾತಾವರಣ ಮಿಂಕ್ ಸಾಕಾಣಿಕೆಗೆ ಉತ್ತಮ ಪರಿಸರ ಒದಗಿಸಿದೆ. ಹೀಗಾಗಿ ಅಲ್ಲಿ ಮಿಂಕ್ ಸಾಕಾಣಿಕೆ ಬಹುದೊಡ್ಡ ಉದ್ಯೋಗವನ್ನೂ ಒದಗಿಸಿಕೊಟ್ಟಿದೆ. ಆದರೆ ಕೊರೊನಾ ಕಾರಣಕ್ಕೆ ಮಿಂಕ್ಗಳ ಹತ್ಯೆ ಮಾಡಿದ್ದು, ಮಿಂಕ್ ಸಾಕಾಣಿಕೆ ಉದ್ಯಮದ ಬೆನ್ನೆಲುಬನ್ನೇ ಮುರಿದಿದೆ. ಇನ್ನು ವಾಸ್ತವ ಪರಿಶೀಲನೆಗೆ ಅಂತಾ ಮಿಂಕ್ ಸಾಕಾಣಿಕೆದಾರರ ಜಮೀನಿಗೆ ಭೇಟಿ ನೀಡಿದ್ದ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ರೈತರ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದರು.

ಲಕ್ಷ ಲಕ್ಷ ಕೋಟಿ ಉದ್ಯಮ
ಭಾರತದಲ್ಲಿ ಹೈನುಗಾರಿಕೆ ರೀತಿಯಲ್ಲೇ ಡೆನ್ಮಾರ್ಕ್ ಮಿಂಕ್ ಉದ್ಯಮವನ್ನು ಅವಲಂಬಿಸಿದೆ. ಯುರೋಪ್ನಲ್ಲಿ ಮಿಂಕ್ ಸಾಕಾಣಿಕೆ ಉದ್ಯಮ ಲಕ್ಷಾಂತರ ಕೋಟಿ ವಹಿವಾಟು ನಡೆಸುತ್ತದೆ. ಇದರಲ್ಲೂ ಡೆನ್ಮಾರ್ಕ್ನ ಪಾಲು ತುಸು ಹೆಚ್ಚಾಗಿದೆ. ಆದರೆ ಮಿಂಕ್ ಸಾಕಾಣಿಕೆ ಅಷ್ಟು ಸುಲಭದ ಮಾತಲ್ಲ. ಮಿಂಕ್ಗಳ ಕುರಿತು ತುಂಬಾ ಕೇರ್ ತೆಗೆದುಕೊಳ್ಳಬೇಕು. ಅದರಲ್ಲೂ ಚಳಿ ಹೆಚ್ಚಾಗಿರುವ ಡೆನ್ಮಾರ್ಕ್ ರೀತಿಯ ವಾತಾವರಣದಲ್ಲಿ ಬೆಚ್ಚನೆ ಗೂಡನ್ನು ನಿರ್ಮಿಸಬೇಕಾಗುತ್ತದೆ. ಹೀಗೆ ಒಬ್ಬೊಬ್ಬ ಡೆನ್ಮಾರ್ಕ್ ರೈತನೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಈ ಮಿಂಕ್ಗಳನ್ನ ಸಾಕುತ್ತಾನೆ. ಆದರೆ ಈ ಪೀಡೆ ಕೊರೊನಾ ಡೆನ್ಮಾರ್ಕ್ನ ರೈತರ ಬದುಕನ್ನೂ ಬೀದಿಗೆ ತಳ್ಳಿದೆ.

ಅಮೆರಿಕ ರೈತರ ಪಾಡು ಭಿನ್ನವಾಗಿಲ್ಲ
ಇದು ಡೆನ್ಮಾರ್ಕ್ನ ರೈತರ ಬವಣೆ ಮಾತ್ರವಲ್ಲ. ಅಮೆರಿಕದಲ್ಲೂ ಮಿಂಕ್ ಸಾಕಾಣಿಕೆ ಉದ್ಯಮ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಆದರೆ ಕೊರೊನಾ ಕಾರಣಕ್ಕೆ ಅಲ್ಲೂ ಕೋಟ್ಯಂತರ ಮಿಂಕ್ಗಳನ್ನ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ. ಇದರಿಂದ ಅಮೆರಿಕದ ಮಿಂಕ್ ಸಾಕಾಣಿಕೆದಾರರು ಕೂಡ ಬೀದಿಗೆ ಬಿದ್ದಿದ್ದಾರೆ. ಕೋಟಿ, ಕೋಟಿ ದುಡಿಯುತ್ತಿದ್ದ ರೈತರು ದಿವಾಳಿಯಾಗಿ ದಿಕ್ಕೇ ಕಾಣದಂತಾಗಿದ್ದಾರೆ. ಆದರೆ ಮಿಂಕ್ಗಳ ಮುಖಾಂತರ ಮನುಷ್ಯನಿಗೆ ಕೊರೊನಾ ಹರಡುವುದು ದೃಢವಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದು ಮಿಂಕ್ ಉದ್ಯಮದ ಜೊತೆಗೆ ಮಿಂಕ್ ಚರ್ಮ ಉತ್ಪನ್ನಗಳ ಉದ್ಯಮದ ಮೇಲೂ ಪ್ರಭಾವ ಬೀರಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications