ತಮಿಳುನಾಡಿಗೆ ಬರುವುದಕ್ಕಾಗಿ ಶ್ರೀಲಂಕಾದಲ್ಲಿ ಮನೆಯನ್ನೇ ಮಾರಿದ ಮಹಿಳೆ!
ಚೆನ್ನೈ, ಅಕ್ಟೋಬರ್ 22: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳುವುದಕ್ಕೆ ಜನರು ದೇಶವನ್ನೇ ತೊರೆದು ಹೋಗುತ್ತಿದ್ದಾರೆ. ಲಂಕಾದ ಮಹಿಳೆಯೊಬ್ಬರು ತಮ್ಮ ಮನೆ ಸೇರಿದಂತೆ ಎಲ್ಲಾ ಆಸ್ತಿ-ಪಾಸ್ತಿ ಮತ್ತು ವಸ್ತುಗಳನ್ನು ಮಾರಾಟ ಮಾಡಿ, ಶನಿವಾರ ತಮಿಳುನಾಡಿಗೆ ಬಂದು ಇಳಿದಿದ್ದಾರೆ.
ತನ್ನ ಸ್ವತ್ತುಗಳನ್ನೆಲ್ಲ ಮಾರಾಟ ಮಾಡಿ ಬಂದ ಹಣದಲ್ಲಿ ಭಾರತಕ್ಕೆ ಆಗಮಿಸಲು ಮಹಿಳೆಯು ಬಯಸಿದ್ದರು. ಇದರ ಮಧ್ಯೆ ಅಕ್ರಮವಾಗಿ ದೋಣಿಯೊಂದರಲ್ಲಿ ಮಹಿಳೆಯು ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು ಧನುಷ್ಕೋಡಿ ಬಳಿಗೆ ಬಂದಿದ್ದಾರೆ. ಸಮುದ್ರದ ನೀರಿನ ಉಸ್ತುವಾರಿ ವಹಿಸಿದ್ದ ಮೆರೈನ್ ಪೊಲೀಸರು ಮೂವರನ್ನು ರಕ್ಷಿಸಿ ಮಂಡಪಂ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಗ್ಲೋಬಲ್ ಹಂಗರ್ ಇಂಡೆಕ್ಸ್ 2022: ಭಾರತದ ಇಮೇಜ್ ಕೆಡಿಸುವ ಪ್ರಯತ್ನ?
ಶ್ರೀಲಂಕಾದಿಂದ ತಮಿಳುನಾಡಿಗೆ ಆಗಮಿಸಿದ ಮಹಿಳೆಯನ್ನು ಶಾಂತಿ ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಜಾಫ್ನಾ ನಿವಾಸಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತಲೈಮನ್ನಾರ್ ನಿಂದ ಫೈಬರ್ ಬೋಟ್ ಹತ್ತಿ ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಧನುಷ್ಕೋಡಿಗೆ ಬಂದಿದ್ದಾರೆ.
ಶ್ರೀಲಂಕಾದಲ್ಲಿ ಬದುಕಿನ ಕಷ್ಟ ತೋಡಿದ ಮಹಿಳೆ:
"ನನ್ನ ಪತಿ ಎರಡು ವರ್ಷಗಳ ಹಿಂದೆ ನಿಧನರಾದರು. ನನ್ನ ಮಕ್ಕಳಿಬ್ಬರನ್ನೂ ನಾನು ನೋಡಿಕೊಳ್ಳುತ್ತೇನೆ. ನಾನು ಮನೆಗೆಲಸವಾಗಿ ಕೆಲಸ ಮಾಡುತ್ತಿದ್ದೆ, ಆದರೆ ಬದುಕಲು ಹಣ ಸಾಕಾಗಲಿಲ್ಲ. ಆರ್ಥಿಕ ಬಿಕ್ಕಟ್ಟು ಸೃಷ್ಟಿಯ ಮಧ್ಯೆ ಹೆಚ್ಚಿನ ದಿನಗಳಲ್ಲಿ ನಾವು ದಿನಕ್ಕೆ ಒಂದೇ ಹೊತ್ತು ಊಟ ಮಾಡುವಂತಾಗಿತ್ತು," ಎನ್ನುವ ಮೂಲಕ ತಮ್ಮ ಕಷ್ಟದ ದಿನಗಳ ಬಗ್ಗೆ ಶಾಂತಿ ವಿವರಿಸಿದ್ದಾರೆ. ಇದರ ಮಧ್ಯೆ ಶ್ರೀಲಂಕಾದಿಂದ ತಮಿಳುನಾಡಿಗೆ ಬೆಳೆಸಿದ ಪ್ರಯಾಣವು ತೀರಾ ಕಠಿಣವಾಗಿತ್ತು, ಆದರೆ ಬದುಕಲು ಅದನ್ನು ಮಾಡಬೇಕಾಗಿತ್ತು ಎಂದರು.
ಶ್ರೀಲಂಕಾಗೆ ಆಗಮಿಸಿದ 184 ನಿರಾಶ್ರಿತರು:
ಕಳೆದ 2022ರ ಮಾರ್ಚ್ ತಿಂಗಳಿನಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿಗೆ ಇಡೀ ಶ್ರೀಲಂಕಾ ತತ್ತರಿಸಿ ಹೋಯಿತು. ರಾಜಕೀಯ ಬೆಳಣಿಗೆಗಳು ಹಾಗೂ ಆರ್ಥಿಕ ಬೆಳವಣಿಗೆಗಳು ಜನರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದವು. ಶ್ರೀಲಂಕಾದ ನೂರಾರು ಮಂದಿ ದೇಶವನ್ನೇ ತೊರೆದು ಹೋದರು. ಈ ಹಂತದಲ್ಲಿ ಶ್ರೀಲಂಕಾದಿಂದ 184 ಮಂದಿ ತಮಿಳುನಾಡಿಗೆ ಆಗಮಿಸಿ ನೆಲೆಸಿದ್ದಾರೆ ಎಂದು ಗೊತ್ತಾಗಿದೆ.
ಚಿತ್ರಕೃಪೆ : ಇಂಡಿಯಾ ಟುಡೇ