ಅಫ್ಘಾನ್ ನೆಲ ಭಯೋತ್ಪಾದನೆಗೆ ಬಳಕೆಯಾಗುವಂತಿಲ್ಲ ಎಂದ NSA ರಾಷ್ಟ್ರಗಳು
ನವದೆಹಲಿ, ನವೆಂಬರ್ 10: ಅಫ್ಘಾನಿಸ್ತಾನದ ನೆಲವನ್ನು ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಬಳಸುವಂತಿಲ್ಲ ಎಂಬ ಘೋಷಣೆಯನ್ನು ಎಂಟು ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು. ನವದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನದ ಮೂರನೇ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ಈ ಘೋಷಣೆ ಹೊರಡಿಸಲಾಯಿತು.
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ನೇತೃತ್ವದ ಸಭೆಯಲ್ಲಿ ಇರಾನ್, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರತಿನಿಧಿಗಳು ಭಾಗವಹಿಸಿದ್ದರು. ದೆಹಲಿಯ ಸಂವಾದದಲ್ಲಿ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರವನ್ನೂ ಆಹ್ವಾನಿಸಲಾಗಿತ್ತಾದರೂ, ಈ ಎರಡು ದೇಶಗಳು ಮಾತ್ರ ಭಾರತದ ಆಹ್ವಾನವನ್ನು ತಿರಸ್ಕರಿಸಿದ್ದವು.
ತಾಲಿಬಾನ್ ಮೊದಲು ಅಫ್ಘಾನಿಸ್ತಾನದಲ್ಲಿ ಮನ್ನಣೆ ಪಡೆದುಕೊಳ್ಳಲಿ: NSA ನಾಯಕರ ಚರ್ಚೆ
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯು ಪ್ರಾದೇಶಿಕ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ನಿರ್ದಿಷ್ಟಪಡಿಸುವುದರ ಜೊತೆಗೆ, ಘೋಷಣೆಯು ಕಾಬೂಲ್ನಲ್ಲಿ ಮುಕ್ತ ಮತ್ತು ಅಂತರ್ಗತ ಸರ್ಕಾರಕ್ಕೆ ಕರೆ ನೀಡಿದೆ. ಅಫ್ಘಾನ್ ಪ್ರದೇಶವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ "ಆಶ್ರಯ, ತರಬೇತಿ, ಯೋಜನೆ ಅಥವಾ ಹಣಕಾಸು" ನೆರವು ನೀಡುವುದಕ್ಕೆ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಘೋಷಣೆಯು ಸ್ಪಷ್ಟವಾಗಿ ಸೂಚಿಸುತ್ತದೆ. ಇತ್ತೀಚೆಗೆ ಕುಂದುಜ್, ಕಂದಹಾರ್ ಮತ್ತು ಕಾಬೂಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಖಂಡಿಸಲಾಗಿದೆ.
ಅಫ್ಘಾನ್ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತಿಲ್ಲ
ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅಫ್ಘಾನಿಸ್ತಾನದ ಬಗ್ಗೆ ಪ್ರಸ್ತಾಪಿಸಲಾಯಿತು. ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೇ ಘೋಷಣೆಯೊಂದನ್ನು ಹೊರಡಿಸಲಾಯಿತು. ಎಂಟು ರಾಷ್ಟ್ರಗಳ ಪೈಕಿ ಯಾವುದೇ ದೇಶವು ಅಫ್ಘಾನಿಸ್ತಾನದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಘೋಷಣೆಯಲ್ಲಿ ಸೂಚಿಸಿತು.
ಅಫ್ಘಾನ್ ಚಟುವಟಿಕೆಗಳನ್ನು ನಾವು ಗಮನಿಸುತ್ತಿದ್ದೇವೆ
"ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಟುವಟಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಕ್ರಮಗಳು ಕೇವಲ ಅಫ್ಘಾನಿಸ್ತಾನದ ಪ್ರಜೆಗಳಿಗೆ ಮಾತ್ರವಲ್ಲದೇ ನೆರೆಹೊರೆಯ ರಾಷ್ಟ್ರಗಳ ಜನರ ಮೇಲೆಯೂ ಪರಿಣಾಮ ಬೀರಲಿದೆ. ಇದು ನಮ್ಮ ನಡುವೆ ನಿಕಟ ಸಮಾಲೋಚನೆ, ಹೆಚ್ಚಿನ ಸಹಕಾರ ಮತ್ತು ಪ್ರಾದೇಶಿಕ ದೇಶಗಳ ನಡುವೆ ಸಂವಹನ ಮತ್ತು ಸಮನ್ವಯವನ್ನು ಸಾಧಿಸಬೇಕಾದ ಸಮಯವಾಗಿದೆ," ಎಂದು ಭಾರತೀಯ ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಅಫ್ಘಾನ್ ಪ್ರಜೆಗಳಿಗೆ ತುರ್ತು ನೆರವಿನ ಅಗತ್ಯತೆ
ಅಫ್ಘಾನಿಸ್ತಾನದಲ್ಲಿ ಈ ವರ್ಷದ ಆಗಸ್ಟ್ನಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಎಂಟು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಅಫ್ಘಾನ್ ಜನರಿಗೆ ತುರ್ತು ಮಾನವೀಯ ನೆರವು ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿವೆ. ಇದರ ಜೊತೆಗೆ ಅಫ್ಘಾನಿಸ್ತಾನದ ಪ್ರದೇಶದಲ್ಲಿ "ಆಮೂಲಾಗ್ರೀಕರಣ, ಉಗ್ರವಾದ, ಪ್ರತ್ಯೇಕತಾವಾದ ಮತ್ತು ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಸಾಮೂಹಿಕ ಸಹಕಾರ" ನೀಡಲು ಎಂಟು ರಾಷ್ಟ್ರಗಳು ಕರೆ ನೀಡಿವೆ.
ಅಫ್ಘಾನ್ ನೆಲದಲ್ಲಿ ಮುಕ್ತ ಸರ್ಕಾರ ರಚನೆಯ ಅಗತ್ಯ
ಭಾರತ, ಇರಾನ್, ರಷ್ಯಾ ಮತ್ತು ಐದು ಮಧ್ಯ ಏಷ್ಯಾದ ದೇಶಗಳು ಆಫ್ಘಾನಿಸ್ತಾನದ ಜನರ ಇಚ್ಛೆಯನ್ನು ಪ್ರತಿನಿಧಿಸುವ ಮುಕ್ತ ಮತ್ತು ಅಂತರ್ಗತ ಸರ್ಕಾರವನ್ನು ರಚಿಸುವ ಅಗತ್ಯವನ್ನು ಒತ್ತಿ ಹೇಳಿವೆ. ಸದಸ್ಯ ರಾಷ್ಟ್ರಗಳು "ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೂಲಭೂತ ಹಕ್ಕುಗಳನ್ನು" ಉಲ್ಲಂಘಿಸಬಾರದು ಎಂದು ಒತ್ತಿ ಹೇಳಿದರು. ಅಂತಿಮವಾಗಿ 2022ರಲ್ಲಿ ಮುಂದಿನ ಸಭೆಯನ್ನು ನಡೆಸುವುದಕ್ಕೆ ಎಂಟು ದೇಶವನ್ನು ಒಪ್ಪಿಗೆ ಸೂಚಿಸಿದವು.
ಮೂರನೇ ಬಾರಿ ನಡೆಯುತ್ತಿರುವ ಎನ್ಎಸ್ಎ ಸಭೆ
ಇರಾನ್, ರಷ್ಯಾ ಮತ್ತು ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳನ್ನು ಅಫ್ಘಾನಿಸ್ತಾನದ ಎನ್ಎಸ್ಎ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದವು. ನವದೆಹಲಿಯಲ್ಲಿ ನವೆಂಬರ್ 10ರಂದು ಭಾರತದ NSA ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ (NSAs) ಮಟ್ಟದ ಸಭೆ ನಡೆಯಿತು. ಈ ಹಿಂದಿನ ಎರಡು ಸಭೆಗಳನ್ನು 2018ರ ಸೆಪ್ಟೆಂಬರ್ ಮತ್ತು 2019ರ ಡಿಸೆಂಬರ್ ತಿಂಗಳಿನಲ್ಲಿ ಇರಾನ್ನಲ್ಲಿ ನಡೆಸಲಾಗಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಭಾರತದಲ್ಲಿ ಮೂರನೇ ಸಭೆಯನ್ನು ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ.