ಪಾಕಿಸ್ತಾನದಲ್ಲಿ ಭಾರಿ ಪ್ರವಾಹದಿಂದಾಗಿ 33 ದಶಲಕ್ಷ ಜನರ ಬದುಕು ದುಸ್ತರ: ಗಗನಕ್ಕರಿದ ತರಕಾರಿ ಬೆಲೆಗಳು
ಇಸ್ಲಾಮಾಬಾದ್, ಆಗಸ್ಟ್ 29: ರಣಭೀಕರ ಮಳೆಯಿಂದಾಗಿ ಪಾಕಿಸ್ತಾನ ನಲುಗುತ್ತಿದೆ. ದಶಕದಲ್ಲೇ ಕಂಡು ಕೇಳರಿಯದ ಪ್ರವಾಹದಿಂದ ಲಕ್ಷಾಂತರ ಪಾಕಿಸ್ತಾನ ಜನತೆ ತತ್ತರಿಸಿದ್ದಾರೆ. ಅಸಂಖ್ಯ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದರೆ, ಸಾವಿರಾರು ಎಕರೆ ಕೃಷಿಭೂಮಿ ನಾಶವಾಗಿದೆ.
ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಮಳೆಯಿಂದ ಸಂಭವಿಸಿದ ಪ್ರವಾಹ, ಭೂಕುಸಿತದ ಪರಿಣಾಮವಾಗಿ 1,061 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಹದ ಪ್ರಮಾಣ ಹೆಚ್ಚಾಗಿದ್ದು ಉಕ್ಕಿಹರಿಯುತ್ತಿರುವ ನದಿಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋದ ನಂತರ ಪರ್ವತ ಉತ್ತರದ ನೂರಾರು ಹಳ್ಳಿಗಳು ಸಂಪರ್ಕ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.
ದೇಶದ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷದಲ್ಲಿ ಪಾಕಿಸ್ತಾನದಲ್ಲಿ 33 ದಶಲಕ್ಷಕ್ಕೂ ಅಧಿಕ ಮಂದಿ ಪ್ರವಾದಿಂದ ತೊಂದರೆಗೊಳಪಟ್ಟಿದ್ದಾರೆ. ಏಳು ಪಾಕಿಸ್ತಾನಿಯರಲ್ಲಿ ಒಬ್ಬರು ಪ್ರವಾಹದಿಂದ ತೊಂದರೆ ಅನುಭವಿಸಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಈ ವರ್ಷದ ಪ್ರವಾಹವನ್ನು 2010 ರ ಪ್ರವಾಹಕ್ಕೆ ಹೋಲಿಸಬಹುದು, 2010ರಲ್ಲಿ ಪ್ರವಾಹದ ಕಾರಣದಿಂದ 2,000 ಕ್ಕಿಂತ ಹೆಚ್ಚಿನ ಜನ ಸಾವನ್ನಪ್ಪಿದ್ದರು. ದೇಶದ ಐದನೇ ಒಂದು ಭಾಗದಷ್ಟು ಜಜನ ಪ್ರವಾಹದಿಂದ ಸಂತ್ರಸ್ತರಾಗಿದ್ದರು.

ಲಕ್ಷಾಂತರ ಎಕರೆಯಲ್ಲಿದ್ದ ಬೆಳೆ ನಾಶ
ದಕ್ಷಿಣ ಸಿಂಧ್ ಪ್ರಾಂತ್ಯದ ಸುಕ್ಕೂರ್ ಬಳಿ ಸಿಂಧೂ ನದಿ ಪಾತ್ರದಲ್ಲಿ ಲಕ್ಷಾಂತರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಲಕ್ಷಾಂತರ ಎಕರೆಯಲ್ಲಿ ಬೆಳೆ ನಾಶವಾಗಿದೆ, ಭತ್ತದ ಬೆಳೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಕ್ಷಾಂತರ ಎಕರೆ ಸಮೃದ್ಧ ಕೃಷಿಭೂಮಿಯು ವಾರಗಳ ಕಾಲದಿಂದ ಸುರಿಯುತ್ತಿರುವ ಸತತ ಮಳೆಯಿಂದ ಜಲಾವೃತಗೊಂಡಿದೆ, ಆದರೆ ಈಗ ಸಿಂಧೂ ಉತ್ತರದ ಉಪನದಿಗಳಿಂದ ಕೆಳಗಿರುವ ನೀರಿನ ಹರಿವು ಹೆಚ್ಚಾಗಿರುವುದರಿಂದ ದಂಡೆಗಳು ಒಡೆಯುವ ಭೀತಿ ಎದುರಾಗಿದೆ.

ರಕ್ಷಣಾ ಪಡೆಗಳಿಂದ ಪರಿಹಾರ ಕಾರ್ಯ
ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಸಂಭವಿಸಿದ್ದು, ಜನರನ್ನು ರಕ್ಷಿಸಲು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಹೆಚ್ಚಿನ ಪ್ರಮಾಣ ಪ್ರದೇಶ ಮುಳೂಗಡೆಯಾಗಿರುವುದರಿಂದ ಬೃಹತ್ ಮಿಲಿಟರಿ ನೇತೃತ್ವದ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
"ಯಾವುದೇ ಲ್ಯಾಂಡಿಂಗ್ ಸ್ಟ್ರಿಪ್ಗಳು ಅಥವಾ ವಿಧಾನಗಳು ಲಭ್ಯವಿಲ್ಲ. ನಮ್ಮ ಪೈಲಟ್ಗಳು ಪ್ರವಾಹ ಪ್ರದೇಶದಲ್ಲಿ ಇಳಿಯಲು ಕಷ್ಟಪಡುತ್ತಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಎಎಫ್ಪಿಗೆ ಮಾಹಿತ ನೀಡಿದ್ದಾರೆ. ಸೇನೆಯ ಹೆಲಿಕಾಪ್ಟರ್ಗಳು ಉತ್ತರದಲ್ಲಿ ಜನರನ್ನು ಸುರಕ್ಷಿತವಾಗಿ ತರಲು ಹೆಣಗಾಡುತ್ತಿದ್ದವು, ಅಲ್ಲಿ ಎತ್ತರದ ಪರ್ವತಗಳು ಮತ್ತು ಆಳವಾದ ಕಣಿವೆಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ.

ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ
ದೇಶವು ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆಯನ್ನು ಪಡೆದಿದೆ ಎಂದು ಮೆಟ್ ಆಫೀಸ್ ಹೇಳಿದೆ, ಆದರೆ ಬಲೂಚಿಸ್ತಾನ್ ಮತ್ತು ಸಿಂಧ್ ಕಳೆದ ಮೂರು ದಶಕಗಳ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಪಾಕಿಸ್ತಾನದ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅನೇಕ ನದಿಗಳು ಉಕ್ಕಿ ಹರಿದ ಪರಿಣಾಮ, 150-ಕೋಣೆಗಳ ಹೋಟೆಲ್ ಸೇರಿದಂತೆ ಹಲವಾರು ಕಟ್ಟಡಗಳು ನೆಲಸಮವಾಗಿದೆ.
ಪಾಕಿಸ್ತಾನ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಗೋಷಣೆ ಮಾಡಿದೆ. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದೆ. ಪಾಕಿಸ್ತಾನದ ಮನವಿಗೆ ಸ್ಪಂದಿಸಿರುವ ಟರ್ಕಿ ಮತ್ತು ಯುಎಇ ಪ್ರಥಮ ಚಿಕಿತ್ಸಾ ವಿಮಾನಗಳನ್ನು ಕಳುಹಿಸಿಕೊಟ್ಟಿವೆ.

ದೇಶದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ
ಸತತ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಮೂಲಭೂತ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದ್ದು, ವಿಶೇಷವಾಗಿ ಈರುಳ್ಳಿ, ಟೊಮ್ಯಾಟೊ ಮತ್ತು ಕಡಲೆ ಬೆಲೆ ತೀವ್ರ ಹೆಚ್ಚಾಗಿದೆ. ಪ್ರವಾಹದಿಂದ ಮೊದಲೇ ಸಂಕಷ್ಟದಲ್ಲಿರುವ ಜನತೆಗೆ ಬೆಲೆ ಏರಿಕೆ ಮತ್ತೊಂದು ಸಮಸ್ಯೆಯಾಗಿದೆ.
ಈಗಾಗಲೇ ದೇಶ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರವಾಹ, ಮಳೆ, ಬೆಳೆಹಾನಿ ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ಮಂಡಳಿ ಸೋಮವಾರದ ನಂತರ ವಾಷಿಂಗ್ಟನ್ನಲ್ಲಿ ಭೇಟಿಯಾಗಲಿದ್ದು, ಅದರ ವಿದೇಶಿ ಸಾಲವನ್ನು ಪೂರೈಸಲು ದೇಶಕ್ಕೆ ಅಗತ್ಯವಾದ 6 ಶತಕೋಟಿ ಡಾಲರ್ ನೆರವು ನೀಡಲು ನಿರ್ಧರಿಸಲಾಗಿದ್ದರು, ಪ್ರವಾಹದ ನಷ್ಟ ಸುಧಾರಣೆಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ ಎಂದು ಹೇಳಲಾಗಿದೆ.












Click it and Unblock the Notifications