ಧರ್ಮ ಬೋಧಕ ಝಕೀರ್ ನಾಯ್ಕ್ ಮುಂಬೈಗೆ ಬರ್ತಾ ಇಲ್ಲ!
ಮುಂಬೈ, ಜುಲೈ 11: ಇಸ್ಲಾಂ ಧರ್ಮ ಬೋಧಕ, ಪೀಸ್ ಟಿವಿ ಮಾಲೀಕ ಝಕೀರ್ ನಾಯ್ಕ್ ಸದ್ಯಕ್ಕೆ ಭಾರತಕ್ಕೆ ಬರುತ್ತಿಲ್ಲ. ಸೌದಿ ಅರೇಬಿಯಾದಿಂದ ಮುಂಬೈಗೆ ಸೋಮವಾರ ಬರಬೇಕಿದ್ದ ಝಕೀರ್ ನಾಯ್ಕ್ ತನ್ನ ಮಾರ್ಗ ಬದಲಾಯಿಸಿ ಆಫ್ರಿಕಾಕ್ಕೆ ತೆರಳುತ್ತಿದ್ದಾರೆಎಂದು ತಿಳಿದು ಬಂದಿದೆ.
ಝಕೀರ್ ನಾಯ್ಕ್ ಒಡೆತನದ 'ಪೀಸ್ ಟಿವಿ ಬಾಂಗ್ಲಾ' ವಾಹಿನಿ ಮೇಲೆ ಬಾಂಗ್ಲಾದೇಶ ಸರ್ಕಾರ ಭಾನುವಾರ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಂಬೈ ಮೂಲದ ಧರ್ಮ ಪ್ರಚಾರಕ ಝಕೀರ್ ನಾಯ್ಕ್ ಅವರ ಭಾಷದಲ್ಲಿ ಪ್ರಚೋದನಕಾರಿ ಅಂಶಗಳಿವೆ ಎಂಬ ಕಾರಣಕ್ಕೆ ನಾಯ್ಕ್ ಬಂಧನಕ್ಕೆ ಶಿವಸೇನೆ ಆಗ್ರಹಿಸಿತ್ತು.

ಇತ್ತೀಚೆಗೆ ಢಾಕಾದ ರೆಸ್ಟೋರೆಂಟ್ವೊಂದರಲ್ಲಿ ಜುಲೈ ಒಂದರಂದು ಬಾಂಗ್ಲಾದ ಉಗ್ರರು ವಿದೇಶಿಯರೂ ಸೇರಿದಂತೆ 22 ಮಂದಿಯನ್ನು ಹತ್ಯೆಗೈದ ಘಟನೆಗೆ ಝಕೀರ್ ಅವರ ಭಾಷಣದ ಪ್ರಚೋದನೆಯಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಮಂಗಳವಾರದಂದು ಮುಂಬೈನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು.
ಆದರೆ, ಈಗ ಮುಂಬೈ ಬದಲಿಗೆ ಆಫ್ರಿಕಾ ದೇಶಕ್ಕೆ ತೆರಳುತ್ತಿರುವ ನಾಯ್ಕ್ ಅಲ್ಲಿಂದಲೇ ಸ್ಕೈಪ್(Skype) ಮೂಲಕ ವಿಡಿಯೋ ಭಾಷಣ ಮಾಡಿ ಸ್ಪಷ್ಟನೆ ನೀಡಲಿದ್ದಾರೆ.ಇನ್ನೂ ಎರಡು ಮೂರು ವಾರಗಳ ಕಾಲ ಭಾರತಕ್ಕೆ ಹಿಂತಿರುಗುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. (ಪಿಟಿಐ)












Click it and Unblock the Notifications