ಸ್ವಂತ ಪಕ್ಷವನ್ನೇ ಕಾಂಗ್ರೆಸ್ನಲ್ಲಿ ವಿಲೀನಗೊಳಿಸಲು ಮುಂದಾದ ವೈಎಸ್ಆರ್ ಪುತ್ರಿ: ತೆಲಂಗಾಣ ರಾಜಕೀಯದಲ್ಲಿ ಸ್ಫೋಟಕ ತಿರುವು
ಹೈದರಾಬಾದ್, ಜೂನ್ 21: ದಿವಂಗತ ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರು ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷವನ್ನು (ವೈಎಸ್ಆರ್ಟಿಪಿ) ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂದು ಟಿವಿ9 ತೆಲುಗು ವರದಿ ಮಾಡಿದೆ.
ತೆಲಂಗಾಣ ಚುನಾವಣೆಗೂ ಮುನ್ನ ಈ ಪ್ರಮುಖ ನಿರ್ಧಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ಶರ್ಮಿಳಾ ಅವರು ಬಂದಿದ್ದಾರೆ ಎಂದು ವರದಿಯಾಗಿದೆ. ಜುಲೈ 8 ರಂದು ವೈಎಸ್ಆರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಲೀನದ ಕುರಿತು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಚುನಾವಣಾ ಗೆಲುವಿನಿಂದ ಉತ್ಸುಕವಾಗಿರುವ ಕಾಂಗ್ರೆಸ್ ಪಕ್ಷವು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವರದಿಯಾಗಿದೆ. ಎರಡೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಕೆಲ ತಿಂಗಳಲ್ಲಿ ನಡೆಯಲಿವೆ.
ಕಾರ್ಯತಂತ್ರದ ಭಾಗವಾಗಿ, ಶರ್ಮಿಳಾ ಅವರು ತಮ್ಮ ತವರು ನೆಲವಾಗಿರುವ ಆಂಧ್ರಪ್ರದೇಶದತ್ತ ಗಮನ ಹರಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ವರದಿಯಾಗಿದೆ. ಅವರ ದಿವಂಗತ ತಂದೆ ಮತ್ತು ಮಾಜಿ ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರು ಸಹ ಆಂಧ್ರಕ್ಕೆ ಸಂಬಂಧಿಸಿದವರಾಗಿದ್ದು, ಈ ಭಾವನಾತ್ಮಕ ತಂತ್ರದ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಪಕ್ಷವು ಆಂಧ್ರಪ್ರದೇಶದಲ್ಲಿ ಅವರಿಗೆ ನಿರ್ಣಾಯಕ ನಾಯಕತ್ವದ ಪಾತ್ರವನ್ನು ನೀಡಿಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ವೈಎಸ್ಆರ್ ಅವರ ಪರಂಪರೆಯನ್ನು ಮರು ನಿರ್ಮಿಸುವ ಮೂಲಕ ಕಾಂಗ್ರೆಸ್ ಅನ್ನು ಬಲಪಡಿಸುವ ಜವಾಬ್ದಾರಿಯನ್ನು ಶರ್ಮಿಳಾ ಅವರಿಗೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ತಮ್ಮ ಸಹೋದರನೊಂದಿಗಿನ ಸಂಬಂಧ ಇನ್ನಷ್ಟು ಹದಗೆಡಿಸಬಹುದು ಆತಂಕದ ಹಿನ್ನೆಲೆಯಲ್ಲಿ ಶರ್ಮಿಳಾ ಹಿಂಜರಿಯಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಶರ್ಮಿಳಾ ಕಟ್ಟಿದ್ದಾರೆ. ಈ ಮೂಲಕ ರಾಜಕೀಯ ಹೋರಾಟಕ್ಕೆ ಪ್ರವೇಶಿಸಲು ನಿರ್ಧರಿಸಿದರು. ಆ ನಂತರ ಸಹೋದರ-ಸಹೋದರಿ ಇಬ್ಬರೂ ಪರಸ್ಪರ ಮಾತುಕತೆ ನಡೆಸುತ್ತಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಜಯಗಳಿಸಿದ ಕೆಲವೇ ದಿನಗಳಲ್ಲಿ ಶರ್ಮಿಳಾ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಮಯದಲ್ಲಿ ಕಾಂಗ್ರೆಸ್ನೊಂದಿಗೆ ವಿಲೀನದ ಮಾತುಕತೆ ನಡೆದಿದೆ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಈ ಹಿಂದೆ, ಶರ್ಮಿಳಾ ಅವರು ಕಾಂಗ್ರೆಸ್ನೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವ ಊಹಾಪೋಹಗಳನ್ನು ನಿರಾಕರಿಸಿದ್ದರು.
ಮುಂದಿನ ತಿಂಗಳು ಕಡಪದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಇದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.












Click it and Unblock the Notifications