ಹಿಂದೆ ಬಿಜೆಪಿಗೇ ಬಿಸಿ ಮುಟ್ಟಿಸಿದ್ರೂ ಕಮಲ ಪಕ್ಷಕ್ಕೆ ಯೋಗಿಯೇ ಅಚ್ಚುಮೆಚ್ಚು
ವಿವಾದ ಪ್ರಿಯರೆಂದೇ ಗುರುತಿಸಿಕೊಂಡಿರುವ ಯೋಗಿ ಆದಿತ್ಯನಾಥ ಅವರು ಮೈಮೇಲೆಳೆದುಕೊಂಡಿದ್ದ ವಿವಾದಗಳು ಬೇಕಾದಷ್ಟಿವೆ. ಇವುಗಳಲ್ಲಿ ಟಾಪ್ 5 ವಿವಾದಗಳನ್ನು ಇಲ್ಲಿ ನೀಡಲಾಗಿದೆ.
ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಿಜೆಪಿಯ ಯೋಗಿ ಆದಿತ್ಯನಾಥ್ ಅವರು ವಿವಾದ ಪ್ರಿಯರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರ.
ಅವರೆಂಥಾ ಹಠವಾದಿ ಎಂದರೆ, ಒಂದು ಹೆಜ್ಜೆ ಮುಂದಿಟ್ಟರೆ, ಅದಕ್ಕೆ ಸ್ವಂತ ಪಕ್ಷದಿಂದಲೇ ವಿರೋಧ ಬಂದರೂ ಅದನ್ನು ಡೋಂಟ್ ಕೇರ್ ಎಂದು ಪಕ್ಕಕ್ಕೆ ತಳ್ಳಿಬಿಡುವಂಥವರು.[ಯೋಗಿ ಆದಿತ್ಯ ನಾಥ್ ಉ.ಪ್ರ ಸಿಎಂ; ಮೌರ್ಯ, ಶರ್ಮಾ ಡಿಸಿಎಂ]
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅವರಿಗೆ ಬಿಜೆಪಿ ಹೈಕಮಾಂಡ್ ನ ಭೀತಿಯಿಲ್ಲ. ಈ ಹಿಂದೆ, ಇಂಥ ಒಂದೆರಡು ಪ್ರಕರಣಗಳಲ್ಲಿ ಅವರು ಬಿಜೆಪಿ ಹಿರಿಯರಿಗೇ ಸಡ್ಡು ಹೊಡೆದಿದ್ದುಂಟು.[ಉತ್ತರ ಪ್ರದೇಶ ನೂತನ ಸಿಎಂ ಬಗ್ಗೆ ತಿಳಿಯಬೇಕಾದ 5 ವಿಚಾರ]
ಆದರೂ, ಅವರ ಸಿದ್ಧಾಂತಗಳ ಮೇಲಿನ ನಂಬಿಕೆಯಿಂದ ಹಾಗೂ ಅದಕ್ಕಿಂತ ಹೆಚ್ಚಾಗಿ ಅಂಥಾ ಒಬ್ಬ ಪ್ರಬಲ ಹಿಂದೂ ಪ್ರತಿಪಾದಕ, ಅಪಾರ ಜನಬೆಂಬಲ ಇರುವಂಥ, ಹಠವಾದಿಯನ್ನು ಬಿಟ್ಟುಕೊಡಲು ಇಚ್ಛೆಯಿಲ್ಲದ ಕಾರಣದಿಂದಲೇ ಯೋಗಿ ಆದಿತ್ಯನಾಥರನ್ನು ಬಿಜೆಪಿ ಅಪ್ಪಿಕೊಂಡಿದೆ.[ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]
ಈ ಹಿಂದೆ ಅವರು ಕೈಗೊಂಡಿದ್ದ ಐದು ಮಹಾ ಕಾಂಟ್ರೋವರ್ಸಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿವೆ.
ವಿರಾಟ್ ಹಿಂದೂಸ್ತಾನ್ ಸಭೆ ನಡೆಸಿದ್ದ ಯೋಗಿ
ಬಿಜೆಪಿ ವಿರುದ್ಧವೇ ಅವರು ಆಗಾಗ ಸಡ್ಡು ಹೊಡೆದಿದ್ದುಂಟು. 2006ರಲ್ಲಿ ಚುನಾವಣಾ ಟಿಕೆಟ್ ವಿತರಿಸುವ ವಿಚಾರದಲ್ಲಿ ಉತ್ತರ ಪ್ರದೇಶದ ಅಂದಿನ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದ ಆದಿತ್ಯನಾಥ್, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಎದುರಾಗಿ ವಿರಾಟ್ ಹಿಂದೂಸ್ತಾನ್ ಎಂಬ ಮಹಾ ಬಹಿರಂಗ ಸಭೆ ನಡೆಸಿದ್ದರು ಯೋಗಿ ಆದಿತ್ಯನಾಥ್.
ವ್ಹಿಪ್ ಅನ್ನೂ ಲೆಕ್ಕಿಸಿರಲಿಲ್ಲ!
ಮತ್ತೊಮ್ಮೆ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದರು ಅವರು. 2010ರಲ್ಲಿ ಬಿಜೆಪಿಯೊಳಗಿನ ಆಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರ ಮೇಲೆ ಮುನಿಸಿಕೊಂಡಿದ್ದ ಆದಿತ್ಯನಾಥ್, ಅವರು, ಆ ವರ್ಷ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬಿಜೆಪಿಯ ಎಲ್ಲಾ ಎಂಪಿಗಳೂ ತಮ ಚಲಾಯಿಸಬೇಕು ಎಂದು ಬಿಜೆಪಿಯು ವ್ಹಿಪ್ ಜಾರಿ ಮಾಡಿದ್ದರೂ ಇವರು ಅದಕ್ಕೆ ಸಡ್ಡು ಹೊಡೆದು ಮಸೂದೆಯ ವಿರುದ್ಧವಾಗಿಯೇ ಮತ ಚಲಾಯಿಸಿದ್ದರು.
ಶುದ್ಧೀಕರಣ ನಡೆಗೆ ಚಾಲನೆ ನೀಡಿದ್ದರು
ಎರಡು ಬಾರಿ ಬಿಜೆಪಿ ವಿರುದ್ಧ ಸಡ್ಡು ಹೊಡೆದಿದ್ದು ಬಿಟ್ಟರೆ, ಮಿಕ್ಕೆಲ್ಲಾ ಪ್ರಕರಣಗಳಲ್ಲಿ ಅವರ ಹೋರಾಟ ಹಿಂದೂ ಪರವಾಗಿಯೇ ಇದ್ದವು. 2005ರಲ್ಲಿ ಕ್ರಿಶ್ಚಿಯನೀಕರಣ ವಿರುದ್ಧ ದೊಡ್ಡ ಆಂದೋಲನ ಹುಟ್ಟಹಾಕಿದ ಅವರು, 'ಶುದ್ಧೀಕರಣ ನಡೆ'ಗೆ ಚಾಲನೆ ನೀಡಿದ್ದರು. ಅದರ ಮುಖ್ಯ ಉದ್ದೇಶ, ಯಾರು ಈ ಹಿಂದೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ನರಾಗಿ ಮತಾಂತರ ಹೊಂದಿದ್ದರೋ, ಅಂಥವರನ್ನು ಪುನಃ ಹಿಂದೂಗಳನ್ನಾಗಿ ಪರಿವರ್ತಿಸುವುದಾಗಿತ್ತು. ಇದು ಉತ್ತರ ಪ್ರದೇಶದಲ್ಲಿ ಭಾರೀ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು.
ಬಂಧನದ ಹಿನ್ನೆಲೆಯಲ್ಲಿ ಭಾರೀ ಜನಬೆಂಬಲ
2007ರಲ್ಲಿ ಗೋರಖ್ ಪುರದಲ್ಲಿ ಮೋಹನ್ ದಾಸ್ ಮೆರವಣಿಗೆ ನಡೆದಿದ್ದ ಸಂದರ್ಭದಲ್ಲಿ ಆದಿತ್ಯಾನಾಥ್ ಅವರು, ಅಹಿಂಸಾ ಧರಣಿಯನ್ನು ಆರಂಭಿಸಿದ್ದರು. ಆದರೆ, ಆ ಧರಣಿ ವೇಳೆ ಅವರು ಮಾಡಿದ್ದರೆನ್ನಲಾದ ಕೆಲವು ಪ್ರಚೋದನಾಕಾರಿ ಭಾಷಣಗಳು ದಂಗೆಗೆ ಕಾರಣವಾದವು. ಆಗ, ಅಲ್ಲಿನ ಸರ್ಕಾರದ ಗೋರಖ್ ಪುರದಲ್ಲಿ ಕರ್ಫ್ಯೂ ಹೇರಿತ್ತು. ಆದರೆ, ಆದಿತ್ಯಾನಾಥ್ ಅವರು ಕರ್ಫ್ಯೂ ಜಾರಿಯಲ್ಲಿದ್ದಾಗಲೇ ಧರಣಿ ಮಾಡಿದರು. ಆ ವೇಳೆ, ಅವರ ಕೆಲ ಅನುಯಾಯಿಗಳು ಕೆಲವು ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದರೆಂಬ ಆರೋಪಗಳಿವೆ. ಆದರೆ, ಕರ್ಫ್ಯೂ ಮುರಿದ ಕಾರಣಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದರು. ಇದು ಮತ್ತಷ್ಟು ಗಲಭೆಗೆ ಕಾರಣವಾಗಿ, ಗೋರಖ್ ಪುರ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಏರುಪೇರಾಗಿತ್ತು.
ಪಾಕಿಸ್ತಾನ ವಿರುದ್ಧ ವಾಗ್ದಾಳಿ
ಕಳೆದ ವರ್ಷ ಜನವರಿ 6ರಂದು ನಡೆದಿದ್ದ ಪಠಾಣ್ ಕೋಟ್ ದಾಳಿಯ ನಂತರ, ಪಾಕಿಸ್ತಾನದ ವಿರುದ್ಧ ಗುಡುಗಿದ್ದ ಆದಿತ್ಯನಾಥ, ''ಪಠಾಣ್ ಕೋಟ್ ಮೇಲಿನ ದಾಳಿಯು ಸೈತಾನನಾದರೂ ಒಳ್ಳೆಯವನಾಗಿ ಬದಲಾಗಬಹುದು. ಆದರೆ, ಪಾಕಿಸ್ತಾನ ಎಂದಿಗೂ ಬದಲಾಗುವುದಿಲ್ಲ'' ಎಂದಿದ್ದರು.