ಎನ್ಡಿಎ ಪ್ರವೇಶಿಸಲು ದಶಕಗಳಿಂದ ಮಹಿಳೆಯರು ಕಂಡಿದ್ದ ಕನಸು ನನಸು
ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ನ್ಯಾಷನಲ್ ಡಿಫೆನ್ಸ್ ಅಕಾಡೆಮಿ)ಗೆ ಪ್ರತಿ ವರ್ಷವೂ ಪರೀಕ್ಷೆ ನಡೆಯುತ್ತದೆ.
ಅದರಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬುದು ತುಂಬಾ ವರ್ಷಗಳಿಂದ ಮಹಿಳೆಯರ ಬೇಡಿಕೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಅದರ ಬಗ್ಗೆ ಸಾಕಷ್ಟು ಹೋರಾಟಗಳು ನಡೆಯುತ್ತಿವೆ.
ಆ ಚರ್ಚೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಿಂದೆ ಸುಪ್ರೀಂಕೋರ್ಟ್ಗೆ ಎನ್ಡಿಎಯಲ್ಲಿ ಮಹಿಳೆಯರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಇಂದು ವಿಚಾರಣೆ ಸಂದರ್ಭದಲ್ಲಿ ಈ ವರ್ಷದಿಂದಲ್ಲ ಮುಂದಿನ ವರ್ಷದಿಂದ ಅವಕಾಶ ಕೊಡುತ್ತೇವೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿತ್ತು.
ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈವರ್ಷದಿಂದಲೇ ಅವಕಾಶ ನೀಡಲು ಏನು ಸಮಸ್ಯೆ, ಈ ವರ್ಷದಿಂದಲೇ ಎನ್ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಿ ಎಂದು ಹೇಳಿದೆ.
ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಪರೀಕ್ಷೆ ಸಂಬಂಧ ಕುಶ್ ಕಲ್ರಾ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿ, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಚಿನ್ಮಯ್ ಪ್ರದೀಪ್ ಶರ್ಮಾ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ಪೀಠ, ಮೇ 2022 ರಲ್ಲಿ ಪರೀಕ್ಷೆಗೆ ಹಾಜರಾದರೆ ಜೂನ್ 2023 ರಲ್ಲಿ ಪ್ರವೇಶಾತಿ ನಡೆಯುತ್ತದೆ. ನಾವು ಒಂದು ವರ್ಷದವರೆಗೆ ವಿಳಂಬ ಮಾಡಲು ಸಾಧ್ಯವಿಲ್ಲ. ನಾವು ಹುಡುಗಿಯರಿಗೆ ಭರವಸೆ ನೀಡಿದ್ದೇವೆ. ನಾವು ಈಗ ಆ ಭರವಸೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಈ ವರ್ಷವೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಆದೇಶಿಸಿದೆ.
ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ಅತ್ಯುತ್ತಮ ಪ್ರತಿಕ್ರಿಯಾ ತಂಡವಾಗಿದ್ದು, ಎನ್ಡಿಎಯಲ್ಲಿ ವಿಳಂಬವಿಲ್ಲದೆ ಮಹಿಳೆಯರ ಸೇರ್ಪಡೆಗೆ ಹಾದಿ ಸುಗಮಗೊಳಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಆಶಿಸುತ್ತೇವೆ. ಇದಕ್ಕಾಗಿ ಯುಪಿಎಸ್ಸಿ ಸಹಯೋಗದೊಂದಿಗೆ ರಕ್ಷಣಾ ಇಲಾಖೆಯಿಂದ ಅಗತ್ಯವಾದ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದೆ.
ಸಮಸ್ಯೆಗಳು ಅರ್ಥವಾಗುತ್ತದೆ. ಆದರೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ನಿಮಗಿದೆ. ಫಲಿತಾಂಶಗಳನ್ನು ನೋಡಿ, ಯೋಜನೆ ಮುಂದುವರೆಸುವ ಕುರಿತು ನಿರ್ಧಾರ ಕೈಗೊಳ್ಳಬಹುದು. ಆಕಾಂಕ್ಷಿಗಳೇ ಪರೀಕ್ಷೆ ಬರೆಯಲು ಮುಂದೆ ಬರುತ್ತಿರುವಾಗ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಮನವಿಯನ್ನು ಪರಿಗಣಿಸುವುದು ಕಷ್ಟವಾಗುತ್ತದೆ,
ಸಶಸ್ತ್ರ ಸೇವೆಗಳು ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸಿವೆ. ತುರ್ತುಪರಿಸ್ಥಿತಿಗಳನ್ನು ಎದುರಿಸುವುದು ಅವರ ತರಬೇತಿಯ ಒಂದು ಭಾಗವಾಗಿದೆ. ಹೀಗಾಗಿ ಈಗಾಗಲೇ ನೀಡಲಾಗಿರುವ ಆದೇಶವನ್ನು ಹಿಂಪಡೆಯುವುದು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
17 ವರ್ಷದ ಅನನ್ಯ ಶರ್ಮಾ ಭಾರತೀಯ ಸೇನೆ ಸೇರಲು ಉತ್ಸುಕರಾಗಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸುಲಭದ ತುತ್ತಲ್ಲ. ಸಾವಿರಾರು ಮಂದಿ ಅರ್ಜಿ ಸಲ್ಲಿಸಲಿದ್ದಾರೆ. ''ಯಾವ ದಾರಿಯನ್ನು ನಾನು ತೆರಳಬೇಕು ಎಂದು ಯೋಚಿಸಿದಾಗ ನನ್ನ ಕಣ್ಣಿಗೆ ಕಂಡಿದ್ದು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇದೀಗ ಸುಪ್ರೀಂಕೋರ್ಟ್ನ ತೀರ್ಪಿನಿಂದ ಕೊಂಚ ನಿರಾಳತೆ ಇದೆ'' ಎನ್ನುತ್ತಾರೆ ಅನನ್ಯ ಶರ್ಮಾ.
ಅನನ್ಯ ಶರ್ಮಾ ಅವರ ಸಂಬಂಧಿ ಸೇನೆಯಲ್ಲಿ ಇದ್ದು ವೀರಮರಣ ಹೊಂದಿದಾಗ ಆಕೆ ಇನ್ನೂ ಚಿಕ್ಕವಳು, ಅವರ ಅಂಕಲ್ಗೆ ಅಶೋಕ ಚಕ್ರ ಬಿರುದನ್ನು ನೀಡಿ ಗೌರವಿಸಲಾಗಿತ್ತು. ಹೀಗೆ ಎಷ್ಟೋ ಕುಟುಂಬದಲ್ಲಿನ ಹೆಣ್ಣು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ, ಅಂಥವರಿಗೆ ಸೇನೆಗೆ ಸೇರಲು ಅವಕಾಶ ಒದಗಿಬಂದಂತಾಗಿದೆ.