ಈರುಳ್ಳಿ, ಬೆಳ್ಳುಳ್ಳಿ ಬಲವಂತವಾಗಿ ತಿನ್ನಿಸಿದ್ದಕ್ಕೆ ಗಂಡ, ಅತ್ತೆಯ ವಿರುದ್ಧ ಕೇಸ್
ಅಹ್ಮದಾಬಾದ್, ಜುಲೈ 14 : ಧರ್ಮಗುರು ಸ್ವಾಮಿನಾರಾಯಣನ ಕಟ್ಟಾ ಹಿಂಬಾಲಕಿಯಾಗಿರುವ 25 ವರ್ಷದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಅತ್ತೆಯ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದು ಹೆಚ್ಚಿನ ವರದಕ್ಷಿಣೆ ಕೇಳಿದ್ದಕ್ಕೂ ಅಲ್ಲ, ಬದಲಿಗೆ ಆಕೆಗೆ ಗಂಡ ಮತ್ತು ಅತ್ತೆ ಬಲವಂತವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನಿಸಿದ್ದಾರಂತೆ! ಆಕೆ ನಂಬುವ ಸ್ವಾಮಿನಾರಾಯಣ ಪಂಥದಲ್ಲಿ ಇದು ನಿಷಿದ್ಧ. ಆ ಎರಡನ್ನು ಬಿಟ್ಟು ಏನು ಬೇಕಾದರೂ ಸಸ್ಯಾಹಾರ ತಿನ್ನಲು ಆಕೆ ಸಿದ್ಧ.
ಉಳ್ಳಾಗಡ್ಡಿ ಮತ್ತು ಬೆಳ್ಳುಳ್ಳಿ ಇರುವ ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ತನ್ನ ಗಂಡ ಮತ್ತು ಅತ್ತೆ ತನಗೆ ಮನಬಂದಂತೆ ಥಳಿಸಿದ್ದಾರೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಅವರು ದೂರಿದ್ದಾರೆ. ಅಲ್ಲದೆ, ತನ್ನ ತಾಯಿಯೊಂದಿಗೂ ಮಾತನಾಡುವುದನ್ನು ನಿಷೇಧಿಸಿದ್ದಾರೆ ಎಂದು ದೂರಿದ್ದಾರೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ಬಿಡುವುದು ವೈಯಕ್ತಿಕ ಆಯ್ಕೆಯ ಪ್ರಶ್ನೆ. ಎಷ್ಟೋ ಮನೆಗಳಲ್ಲಿ ಕೂಡ ಇವು ನಿಷಿದ್ಧ ಕೂಡ. ಬೇಕಿದ್ದರೆ ಗಂಡ, ಅತ್ತೆ ಕಾಂದಾ ಬಜ್ಜಿ, ಈರುಳ್ಳಿ ಚಟ್ನಿ, ಸವಿಗೆ ತಂಬೂಳಿ ಮಾಡಿಕೊಂಡು ಜಡಿಯಲಿ. ಆದರೆ, ಆಕೆ ಇವೆರಡನ್ನು ತಿನ್ನಲೇಬೇಕೆಂದು ಗಂಡ ಮತ್ತು ಅತ್ತೆಗೆ ಏಕಿಷ್ಟು ಹಠ?
ನಾಲ್ಕು ವರ್ಷಗಳ ಹಿಂದೆ ತನ್ನ ಸಹೋದರನ ಸ್ನೇಹಿತನಾಗಿ ಗಂಡನನ್ನು ಪ್ರೇಮಿಸಿ ಮದುವೆಯಾದ ಪಟೇಲ್ ಸಮುದಾಯಕ್ಕೆ ಸೇರಿದವರಾಗಿರುವ ಮಹಿಳೆ ಸ್ವಾಮಿನಾರಾಯಣನ ಭಕ್ತೆ. ಆತನನ್ನು ಪರಿಪರಿಯಾಗಿ ಪೂಜಿಸುತ್ತಾರೆ. ಆತ ಪಾನ್ ಶಾಪ್ ಇಟ್ಟುಕೊಂಡಿದ್ದು, ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದಾರೆ.
ಮಾಡಿದ್ದುಣ್ಣೋ ಮಾರಾಯ ಎಂಬಂತೆ ರೋನಕ್ ಪಟೇಲ್ ಮತ್ತು ಅತ್ತೆಯ ವಿರುದ್ಧ, ಮಹಿಳೆಯ ಮೇಲೆ ಬಲವಂತವಾಗಿ ದಬ್ಬಾಳಿಕೆ ನಡೆಸಿದ್ದಕ್ಕಾಗಿ, ಕೌಟುಂಬಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಮತ್ತು ಬೆದರಿಕೆ ಒಡ್ಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.












Click it and Unblock the Notifications