2022ರ ಹೊತ್ತಿಗೆ ಭಯೋತ್ಪಾದನೆ, ನಕ್ಸಲಿಸಂ ಸಮಸ್ಯೆ ಔಟ್: ರಾಜ್ ನಾಥ್
ನವದೆಹಲಿ, ಆಗಸ್ಟ್ 19: ದೇಶದ ನಾಗರಿಕರ ನೆಮ್ಮದಿ ಹಾಳುಗೆಡವಿರುವ ಉಗ್ರವಾದಿತನ, ನಕ್ಸಲಿಸಂ ಹಾಗೂ ಈಶಾನ್ಯ ಭಾರತಗಳಲ್ಲಿ ನೆರೆ ದೇಶಗಳ ಪ್ರಜೆಗಳ ಒಳನುಸುಳುವಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ದೇಶವನ್ನು ಮುಕ್ತವಾಗಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಆಶ್ವಾಸನೆ ಕೊಟ್ಟಿದ್ದಾರೆ.
ಲಖ್ನೋದಲ್ಲಿ ಏರ್ಪಡಿಸಲಾಗಿದ್ದ ಸಂಕಲ್ಪ್ ಸೇ ಸಿದ್ದ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಲ್ಲಿ ಕಾಶ್ಮೀರ ಸಮಸ್ಯೆ, ನಕ್ಸಲಿಸಂ ಸಮಸ್ಯೆ, ಒಳನುಸುಳುವಿಕೆ ಸಮಸ್ಯೆಗಳು ಪ್ರಮುಖವಾದವು. 2022ರ ಹೊತ್ತಿಗೆ ಈ ಸಮಸ್ಯೆಗಳಿಗೆ ಮಂಗಳ ಹಾಡಲು ನಿರ್ಧರಿಸಲಾಗಿದೆ. ಆ ಹೊತ್ತಿಗೆ ಹೊಸ ಭಾರತವೊಂದನ್ನು ಕಟ್ಟಲೂ ನಿರ್ಧರಿಸಲಾಗಿದೆ'' ಎಂದು ಅವರು ತಿಳಿಸಿದರು.

ಇದೇ ವೇಳೆ, ಸ್ವಚ್ಛ ಭಾರತದ ಬಗ್ಗೆ ಮಾತನಾಡಿದ ಅವರು, ''ಭಾರತದ ಅಭಿವೃದ್ಧಿಗೆ ಧೋತಕವಾಗಿರುವ ಸ್ವಚ್ಛ ಭಾರತವನ್ನು ನಾವೆಲ್ಲರೂ ಕೈಗೊಳ್ಳಬೇಕು'' ಎಂದು ಸಲಹೆ ನೀಡಿದರು.
ನರೇಂದ್ರ ಮೋದಿಯವರು ದೇಶದ 70ನೇ ಸ್ವಾತಂತ್ರೋತ್ಸವದಂದು ಇನ್ನು ಐದು ವರ್ಷಗಳಲ್ಲಿ ಹೊಸ ಭಾರತ ಕಟ್ಟುವ ಭರವಸೆ ನೀಡಿದ್ದಾರೆ. ಹಾಗಾಗಿ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಹೊತ್ತಿನಲ್ಲಿ ಈ ಕನಸು ಸಾಕಾರವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.












Click it and Unblock the Notifications