'ಎಡ-ಬಲ ಎರಡನ್ನೂ ನಾಶ ಮಾಡುತ್ತೇವೆ': ತ್ರಿಪುರದಲ್ಲಿ ಟಿಎಂಸಿ
ಅಗರ್ತಾಲ, ಅಕ್ಟೋಬರ್ 31: ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯ ರ್ಯಾಲಿಯು ಕೊನೆಗೂ ಭಾನುವಾರ ನಡೆದಿದೆ. ಈ ರ್ಯಾಲಿಯಲ್ಲಿ ಮಾಜಿ ಪಶ್ಚಿಮ ಬಂಗಾಳ ಸಚಿವ ರಾಜೀಬ್ ಬಾನರ್ಜಿ ಹಾಗೂ ತ್ರಿಪುರ ಬಿಜೆಪಿ ಶಾಸಕ ಆಶೀಶ್ ದಾಸ್ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ನಾವು ತ್ರಿಪುರದಲ್ಲಿ ಎಡ-ಬಲ ಎರಡನ್ನೂ ನಾಶ ಮಾಡುತ್ತೇವೆ. ಬಂಗಾಳದಂತೆ ತ್ರಿಪುರಾ ಆಗಲಿದೆ," ಎಂದು ಹೇಳಿದರು. "ಬಿಜೆಪಿ ಎಂಬ ವೈರಸ್ಗೆ ಒಂದೇ ಒಂದು ಲಸಿಕೆ ಇದೆ. ಆ ಲಸಿಕೆಯ ಹೆಸರು ಮಮತಾ ಬ್ಯಾನರ್ಜಿ," ಎಂದು ಕೂಡಾ ಅಭಿಷೇಕ್ ಬ್ಯಾನರ್ಜಿ ಹೇಳಿದರು.
"ಈಗ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್, ಫ್ಲಾಫ್ ದೇವ್. ಅವರು ತ್ರಿಪುರದ ಜನರ ಭಾವನೆಯೊಂದಿಗೆ ಆಟವಾಡಿದರು. ಆಡಳಿತದ ವಿಚಾರಕ್ಕೆ ಬಂದಾಗ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಸಂಪೂರ್ಣ ಅಸಮರ್ಥ ಎಂಬುವುದನ್ನು ಸಾಬೀತು ಮಾಡಿದ್ದಾರೆ," ಎಂದು ಟೀಕೆ ಮಾಡಿದ್ದಾರೆ.

"ವಿಪ್ಲವ್ ಕುಮಾರ್ ದೇವ್ಗೆ ಯಾವುದರ ಬಗ್ಗೆ ಭಯ. ಟಿಎಂಸಿ ಇಲ್ಲಿ ಇರುವುದಕ್ಕೆ ಅವರು ಯಾಕೆ ಅಷ್ಟೊಂದು ಆತಂಕ ಪಡುತ್ತಾರೆ. ವಿಪ್ಲವ್ ಕುಮಾರ್ ದೇವ್ ಈ ರಾಜ್ಯದ ಜನರಿಗಾಗಿ ಏನನ್ನು ಮಾಡಿಲ್ಲ. ಈಗ ಜನರಿಗೆ ಇಲ್ಲಿ ಬದಲಾವಣೆ ಬೇಕಾಗಿದೆ. ಆದರೆ ವಿಪ್ಲವ್ ಕುಮಾರ್ ದೇವ್ ನಮ್ಮನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ," ಎಂದು ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪ ಮಾಡಿದರು.
ಮೊದಲ ಬಾರಿಗೆ ಟಿಎಂಸಿಯ ರ್ಯಾಲಿಯು ಸೆಪ್ಟೆಂಬರ್ 15 ರಂದು ಆಯೋಜನೆ ಮಾಡಲಾಗಿತ್ತು. ಆದರೆ ಈ ರ್ಯಾಲಿಗೆ ಅನುಮತಿಯನ್ನು ನಿರಾಕರಿಸಲಾಗಿತ್ತು. "ಈ ದಿನದಂದೇ ಬೇರೆ ಪಕ್ಷವೂ ರ್ಯಾಲಿಯನ್ನು ನಡೆಸುತ್ತಿದೆ," ಎಂದು ಕಾರಣ ನೀಡಿ ಟಿಎಂಸಿಯ ರ್ಯಾಲಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಬಳಿಕ ಸೆಪ್ಟೆಂಬರ್ 16 ಕ್ಕೆ ರ್ಯಾಲಿ ನಡೆಸಲು ಟಿಎಂಸಿಗೆ ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಅದಕ್ಕೂ ಕೂಡಾ ಅನುಮತಿಯನ್ನು ನೀಡಿರಲಿಲ್ಲ. ಬಳಿಕ ಸೆಪ್ಟೆಂಬರ್ 23 ರಂದು ರ್ಯಾಲಿಯನ್ನು ನಡೆಸಲು ನಿರ್ಧಾರ ಮಾಡಲಾಗಿತ್ತು. ಈ ಅನುಮತಿ ವಿಚಾರವು ಕೊನೆಯದಾಗಿ ಕೋರ್ಟ್ ಮೆಟ್ಟಲು ಕೂಡಾ ಏರಿದೆ. ಈ ಸಂದರ್ಭದಲ್ಲಿ ಸರ್ಕಾರವು ಕೊರೊನಾ ವೈರಸ್ ಸೋಂಕಿನ ಪರಿಸ್ಥಿತಿಯ ಬಗ್ಗೆ ಕಾರಣವನ್ನು ನೀಡಿತ್ತು. "ಕಾನೂನುಬಾಹಿರ ಸಭೆ"ಯನ್ನು ನಿಷೇಧಿಸುವ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 144 ಅನ್ನು ವಿಧಿಸಿದೆ.
ಬಳಿಕ ಭಾನುವಾರ ಟಿಎಂಸಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅಗರ್ತಲಾದ ರವೀಂದ್ರ ಭವನದ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ನಿಟ್ಟಿನಲ್ಲಿ ಟಿಎಂಸಿ ತೃಣಮೂಲ ಕಾಂಗ್ರೆಸ್ ಪರವಾಗಿ ರಾಜ್ಯ ಪೊಲೀಸರಿಂದ ಅನುಮತಿ ಕೋರಿತ್ತು. ಆದರೆ ಪೊಲೀಸರು ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾವಣೆ ಮಾಡುವಂತೆ ಹೇಳಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ದೂರಿದ್ದಾರೆ. ಈ ವಿಚಾರದಲ್ಲಿ ಟಿಎಂಸಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದು ಭಾನುವಾರ ಬೆಳಗ್ಗೆ ರ್ಯಾಲಿಗೆ ಕೋರ್ಟ್ ಕೆಲವು ನಿರ್ಬಂಧಗಳ ಮೂಲಕ ಅವಕಾಶ ನೀಡಿದೆ.
ಕೋರ್ಟ್ನ ಆದೇಶದಲ್ಲಿ ಏನಿದೆ?
ಕೋರ್ಟ್ನಲ್ಲಿ ಆದೇಶದಲ್ಲಿ ಕೋರ್ಟ್ ಈ ರ್ಯಾಲಿಯಲ್ಲಿ 500 ಮಂದಿಯ ಭಾಗವಹಿಸುವಿಕೆಗೆ ಮಾತ್ರ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಬೇರೆ ಎಲ್ಲಾ ಕಾರ್ಯಕ್ರಮಗಳನ್ನು ನಿರ್ಷೇಧ ಮಾಡಲಾಗಿದೆ. ಹಳೆಯ ಕೇಂದ್ರ ಕಾರಾಗೃಹ ಮತ್ತು ನೇತಾಜಿ ಶಾಲೆಯ ಮೈದಾನದಲ್ಲಿ ಮಾತ್ರ ಕಾರು ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಪೊಲೀಸರು ಹಾಜರಾಗುವವರ ಸಂಖ್ಯೆಯನ್ನು ಚೆಕ್ಪೋಸ್ಟ್ನಲ್ಲಿ ಲೆಕ್ಕ ಹಾಕಬೇಕು. ಇದು 500 ಮಂದಿಯನ್ನು ಮೀರುವಂತಿಲ್ಲ. ಎಲ್ಲಾ ಚೆಕ್ಪೋಸ್ಟ್ನಲ್ಲಿ ಪೊಲೀಸರೊಂದಿಗೆ ಟಿಎಂಸಿ ನಾಯಕರು ಕೂಡಾ ಇದ್ದು, ಹಾಜರಾತಿಯನ್ನು ಪರಿಶೀಲನೆ ಮಾಡಬೇಕು.
(ಒನ್ಇಂಡಿಯಾ ಸುದ್ದಿ)











Click it and Unblock the Notifications