ಮೋದಿ ವಿರೋಧಿಗಳನ್ನೆಲ್ಲ ಒಗ್ಗೂಡಿಸುತ್ತಿರುವ ನಾಯ್ಡು ಈಗ ಪ್ರಧಾನಿ ಹುದ್ದೆಗೆ ಹತ್ತಿರವೆ?
Recommended Video
ಮೋದಿ ನಾಯಕತ್ವದ ವಿರುದ್ಧ ನಿಲ್ಲುವಂಥವರು ಪ್ರತಿ ಪಕ್ಷದಿಂದ ಯಾರೂ ಇಲ್ಲ. ಮೋದಿ ವರ್ಸಸ್ ರಾಹುಲ್ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಚರ್ಚೆಯಾದರೂ ಆ ಬಗ್ಗೆ ಅಂಥ ಆಸಕ್ತಿಯೇನೂ ಇದ್ದಂತೆ ಕಾಣುತ್ತಿಲ್ಲ. ಇನ್ನು ಸೋಮವಾರದಂದು ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ಮೋದಿ ವಿರುದ್ಧ ರಚನೆ ಮಾಡಿಕೊಳ್ಳಬೇಕು ಅಂದುಕೊಂಡಿರುವ ಮೈತ್ರಿಕೂಟದ ಮೊದಲ ಗಂಭೀರ ಪ್ರಯತ್ನದಂತೆ ಈ ಭೇಟಿ ಬಿಂಬಿತವಾಗಿದೆ. ಮತ್ತು ಅಂಥದ್ದೊಂದು ಮೈತ್ರಿ ವಾಸ್ತವದಲ್ಲಿ ಸಾಧ್ಯವಿದೆ ಎಂಬುದನ್ನು ಧ್ವನಿಸುತ್ತಿದೆ. ಆದರೂ ಕೆಲವರು ಈ ನಡೆಯನ್ನು ನೋಡುತ್ತಿರುವ ರೀತಿ ಬೇರೆ. ಚಂದ್ರಬಾಬು ನಾಯ್ಡು ಈ ಪ್ರಯತ್ನವೆಲ್ಲ ತೆಲಂಗಾಣ ಹಾಗೂ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡೇ ಮಾಡುತ್ತಿರುವುದು ಎಂಬ ಅಭಿಪ್ರಾಯ ಇದೆ.
ಆಂಧ್ರದಲ್ಲಿ ಸಿಬಿಐಗೆ ನಿರ್ಬಂಧ: ಚಂದ್ರಬಾಬು ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇನು?
ಒಂದು ವೇಳೆ ನಾಯ್ಡು ಅವರ ಲೆಕ್ಕಾಚಾರ ಅದೇ ಆಗಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ. ಅದರಿಂದ ಯಾವ ಸಮಸ್ಯೆಯೂ ಇಲ್ಲ. ಏಕೆಂದರೆ ಮುಂದಿನ ವರ್ಷವೇ ಲೋಕಸಭೆ ಚುನಾವಣೆ ಕೂಡ ಇರುವುದರಿಂದ ಅಷ್ಟು ಹೊತ್ತಿಗೆ ಒಂದು ವೇದಿಕೆಯಂತೂ ಸಿದ್ಧವಾಗಿರಲಿ ಎಂಬುದು ಚಂದ್ರಬಾಬು ನಾಯ್ಡು ಲೆಕ್ಕಾಚಾರ ಇರಬಹುದು.
ನಾಯ್ಡು ಮುಂಚೂಣಿಗೆ ಬಂದ ಮೇಲೆ ಖದರ್ ಬದಲಾಯಿತು
ಪ್ರಧಾನಿ ಮೋದಿ ಅವರ ಪ್ರಬಲ ಟೀಕಾಕಾರರಾದ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಮಟ್ಟದಲ್ಲಿ ರಚನೆ ಆಗುವ ಬಿಜೆಪಿ ವಿರುದ್ಧದ ಮೈತ್ರಿ ಕೂಟದಲ್ಲಿ ಸೇರಲು ಉತ್ಸುಕರಾಗಿದ್ದಾರೆ. ಹೀಗೆ ಬಿಜೆಪಿ ವಿರುದ್ಧ ಇರುವ ರಾಜಕೀಯ ಪಕ್ಷಗಳನ್ನೆಲ್ಲ ಒಗ್ಗೂಡಿಸುವ ಪಾತ್ರವನ್ನು ತಾನು ನಿರ್ವಹಿಸುತ್ತಿದ್ದೇನೆ ಎಂದು ನಾಯ್ಡು ಹೇಳಿದ್ದಾರೆ. ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡ- ಕುಮಾರಸ್ವಾಮಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ರನ್ನು ಕೂಡ ಈಗಾಗಲೇ ನಾಯ್ಡು ಭೇಟಿ ಆಗಿದ್ದಾರೆ. ಮುಂದಿನ ಜನವರಿ ಹತ್ತೊಂಬತ್ತನೇ ತಾರೀಕು ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ಸಭೆಯಲ್ಲಿ ಕೂಡ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಬೇರೆ ಸಂದರ್ಭದಲ್ಲಿ ಆಗಿದ್ದರೆ ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಎಷ್ಟು ಸಂಖ್ಯೆ ಆಗಬಹುದು? ಈ ಮೈತ್ರಿ ಕೂಟದ ತಾಕತ್ತು ಬಹಳ ಸೀಮಿತ ಎನ್ನಬಹುದಿತ್ತು. ಆದರೆ ನಾಯ್ಡು ಈ ಮೈತ್ರಿಕೂಟದ ಮುಂಚೂಣಿಯಲ್ಲಿ ನಿಂತಿರುವುದರಿಂದ ಲೆಕ್ಕಾಚಾರವೇ ಬದಲಾಗಿದೆ. ಬಲವಾದ ಮೈತ್ರಿಕೂಟ ರಚನೆ ಆಗಬೇಕು ಎಂಬ ನಿರೀಕ್ಷೆ ಆಶಾದಾಯಕವಾಗಿ ಕಾಣುತ್ತಿದೆ.
ಚಂದ್ರಬಾಬು ನಾಯ್ಡು-ಮಮತಾ ಸಭೆ: ಮೊದಲ ಸಂದೇಶ ಬಿಜೆಪಿಗಲ್ಲ, ರಾಹುಲ್ಗೆ!
ತಂತ್ರಜ್ಞಾನ ಅಳವಡಿಸಿದ ಮೊದಲ ರಾಜಕಾರಣಿ
ಹೀಗೆ ಆಶಾದಾಯಕವಾಗಿ ಕಾಣಲು ಏನು ಕಾರಣಗಳು ಅಂದರೆ, ಚಂದ್ರಬಾಬು ನಾಯ್ಡು ಅವರಿಗೆ ಇರುವ ವರ್ಚಸ್ಸು. ಯಾವ ಮೋದಿ ಅವರಿಗೆ ತಂತ್ರಜ್ಞಾನ ಬಹಳ ಅಚ್ಚುಮೆಚ್ಚು ಎನ್ನುತ್ತಿದ್ದಾರೋ ಅದಕ್ಕೂ ಎಷ್ಟೋ ಸಮಯಕ್ಕೆ ಮುಂಚೆ ನಾಯ್ಡು ತಮ್ಮ ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು, ಆ ಕಾರಣಕ್ಕೆ ಬಹಳ ಖ್ಯಾತಿ ಪಡೆದಿದ್ದರು. ಅವಿಭಜಿತ ಆಂಧ್ರಪ್ರದೇಶದ ಸಿಇಒ ಚಂದ್ರಬಾಬು ನಾಯ್ಡು ಎನ್ನಲಾಗುತ್ತಿತ್ತು. ಅರವತ್ತೆಂಟು ವರ್ಷದ ನಾಯ್ಡು ಅವರು ಮಮತಾ, ಮಾಯಾವತಿ, ಅಖಿಲೇಶ್ ಗಿಂತಲೂ ದೇಶದಲ್ಲಿ ಎಲ್ಲ ಕಡೆ ಸಲ್ಲುವಂಥ ನಾಯಕರು. ಅದರಲ್ಲೂ ದಕ್ಷಿಣ ಭಾರತದಲ್ಲಿ ಚಂದ್ರಬಾಬು ನಾಯ್ಡು ಪ್ರಭಾವ ದಟ್ಟವಾಗಿದೆ. ಅದು ಉಳಿದ ನಾಯಕರಲ್ಲಿ ಇಲ್ಲ. ಇನ್ನು ಈಗಷ್ಟೇ ಬಿಜೆಪಿಯು ಹೆಜ್ಜೆಯೂರಲು ಯತ್ನಿಸುತ್ತಿರುವ ದಕ್ಷಿಣ ಭಾರತದಲ್ಲಿ ಪ್ರಬಲವಾಗಿ ಬೇರು ಬಿಟ್ಟಿದ್ದಾರೆ ಚಂದ್ರಬಾಬು ನಾಯ್ಡು.
ಮೋದಿ ಹಾಗೂ ನಾಯ್ಡು ಮಧ್ಯೆಯ ಸಾಮ್ಯತೆ
ಮಾಯಾವತಿ ಮತ್ತು ಅಖಿಲೇಶ್ ರನ್ನು ಜಾತಿ ತಕ್ಕಡಿಯಲ್ಲಿ ಇಟ್ಟು ತೂಗುವಂತೆ ನಾಯ್ಡು ಅಲ್ಲ. ಅವರಿಗೆ ಅದರ ಅಗತ್ಯವಿಲ್ಲ. ಅಥವಾ ಅದನ್ನು ಮೀರಿದ್ದಾರೆ. ಹೇಗೆ ಮೋದಿಯವರು ಹಿಂದುಳಿದ ವರ್ಗದ ನಾಯಕ ಎಂಬ ಅಸ್ಮಿತೆ ಎರಡನೇ ಆದ್ಯತೆಯಾಗಿ, ಅವರ ಅಭಿವೃದ್ಧಿ ಆಲೋಚನೆಗಳೇ ಮುನ್ನೆಲೆಗೆ ಬರುತ್ತವೋ ಅದೇ ರೀತಿಯ ನಾಯಕತ್ವ ಗುಣ ಇರುವವರು ನಾಯ್ಡು. ತಮ್ಮ ಆಡಳಿತ ವೈಖರಿ ಕಾರಣಕ್ಕೆ ಹೆಸರು ಪಡೆದವರು. ಈ ಹಿಂದೆ ಗುಜರಾತ್ ನಲ್ಲಿ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರಿಗೆ ಹೆಸರು ತಂದುಕೊಟ್ಟಿದ್ದು ಆಡಳಿತ ನಡೆಸುವ ರೀತಿಯೇ. ಒಂದು ವೇಳೆ ಇಡೀ ಭಾರತ ನರೇಂದ್ರ ಮೋದಿಗೆ ಪರ್ಯಾಯವಾಗಿ ನಾಯಕತ್ವ ಹುಡುಕುವುದಾದರೆ ಆ ಎಲ್ಲ ಗುಣಗಳು ಕಾಣಿಸುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಉಳಿದ ನಾಯಕರಿಗಿಂತ ಬಹಳ ಸೂಕ್ತ ವ್ಯಕ್ತಿ ಎಂಬಂತೆ ಕಾಣಿಸುತ್ತಾರೆ.
ಗೌಡ, ಸ್ವಾಮಿ ಭೇಟಿಯೊಂದಿಗೆ ಮಹಾಮೈತ್ರಿ ದಂಡಯಾತ್ರೆ ಆರಂಭಿಸಿದ ನಾಯ್ಡು
ರಾಹುಲ್ ನಾಯಕತ್ವ ವಹಿಸುವುದು ಹಲವರಿಗೆ ಬೇಕಿಲ್ಲ
ಒಂದು ವೇಳೆ ನಾಯ್ಡು ಮುನ್ನೆಲೆಗೆ ಬರುವುದಾದರೆ ಮೈತ್ರಿ ರಚನೆಗೆ ನೆರವು ನೀಡುವ ಪಾತ್ರದಲ್ಲಿ ಕಾಂಗ್ರೆಸ್ ನಿಲ್ಲುತ್ತದೆ. ಈ ಬೆಳವಣಿಗೆಯು ಮೋದಿ ವಿರೋಧಿ ಗುಂಪಿಗೆ ಅನುಕೂಲಕರ ಬೆಳವಣಿಗೆ. ಏಕೆಂದರೆ, ಹಲವು ಪ್ರಾದೇಶಿಕ ಪಕ್ಷಗಳ ಪಾಲಿಗೆ ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷ. ಆದ್ದರಿಂದ ಮೋದಿ ವಿರೋಧಿ ಗುಂಪಿನ ಎಲ್ಲರನ್ನೂ ಒಂದು ವೇದಿಕೆಯಲ್ಲಿ ನಾಯ್ಡು ಅವರೇ ತಂದರೆ ಅಡೆತಡೆಗಳೆಲ್ಲ ದೂರ ಮಾಡಿದಂತೆ ಆಗುತ್ತದೆ. ಜತೆಗೆ ಪ್ರಾದೇಶಿಕ ಪಕ್ಷದ ನಾಯಕರೊಬ್ಬರು ರಾಷ್ಟ್ರ ಮಟ್ಟದ ಮೈತ್ರಿಕೂಟ ರಚನೆಯಲ್ಲಿ ಮುಂಚೂಣಿ ವಹಿಸುವುದು ವಿಶಿಷ್ಟವಾದ ಪ್ರಯತ್ನ. ಈ ಹಿಂದೆ ಕೂಡ ಇಂಥ ಪ್ರಯತ್ನದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು (ಕಾಂಗ್ರೆಸ್-ಬಿಜೆಪಿ) ಪ್ರಮುಖ ಪಾತ್ರ ವಹಿಸಿಲ್ಲ. ಇನ್ನು ಪ್ರಾದೇಶಿಕ ಪಕ್ಷಗಳ ಪೈಕಿ ಹಲವರಿಗೆ ರಾಹುಲ್ ಗಾಂಧಿ ನಾಯಕತ್ವ ವಹಿಸುವುದು ಬೇಕಿಲ್ಲ. ಆಡಳಿತಗಾರ- ರಾಜಕಾರಣಿ ಚಂದ್ರಬಾಬು ನಾಯ್ಡು ಅವರೇ ಮೋದಿ ವಿರೋಧಿ ಬಣದ ಸೂಕ್ತ ನಾಯಕರಂತೆ ಕಾಣುತ್ತಾರೆ.
ಎನ್ ಟಿಆರ್ ಅಳಿಯ ಈಗ ಕಾಂಗ್ರೆಸ್ ದೋಸ್ತಿ, ಏನಾಯ್ತು ತೆಲುಗರ ಸ್ವಾಭಿಮಾನ?
ಟಿಡಿಪಿಯ ಹಳೇ ರಣತಂತ್ರವೇ ಮತ್ತೆ ಚಾಲ್ತಿಗೆ
ಕೆಲ ತಿಂಗಳ ತನಕ ಎನ್ ಡಿಎ ಮೈತ್ರಿಕೂಟದ ಭಾಗವಾಗಿದ್ದ ಟಿಡಿಪಿ-ಚಂದ್ರಬಾಬು ನಾಯ್ಡು ಹೀಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದ್ಯಾಕೆ ಹೀಗೆ ಎಂಬುದು ಕೂಡ ಹಲವರಿಗೆ ಅರ್ಥ ಆಗುತ್ತಿಲ್ಲ. ಅಂದಹಾಗೆ ಟಿಡಿಪಿ ಹುಟ್ಟಿಕೊಂಡಿದ್ದು ನಾಯ್ಡು ಮಾವ ಎನ್.ಟಿ.ರಾಮ ರಾವ್ ರಿಂದ. ತೆಲುಗರ ಅಸ್ಮಿತೆ- ಪ್ರತಿಷ್ಠೆಯ ದ್ಯೋತಕವಾಗಿ ಅವರು ಟಿಡಿಪಿ ಸ್ಥಾಪಿಸಿದ್ದರು. ಕಾಂಗ್ರೆಸ್ ನ ವಿರುದ್ಧ ಆರಂಭವಾಗಿದ್ದ ಪಕ್ಷ ಅದಾಗಿತ್ತು. ಇದೀಗ ಅದೇ ಶಕ್ತಿ ಬಿಜೆಪಿ ವಿರುದ್ಧ ಧ್ವನಿ ಎತ್ತಿದೆ. ಇನ್ನು ರಾಜಕಾರಣದ ವಿಚಾರಕ್ಕೆ ಬಂದರೆ ಮೋದಿಗಿಂತ ಹಿರಿಯ ಹಾಗೂ ಅನುಭವಿ ನಾಯಕರು ನಾಯ್ಡು. ಇದನ್ನೇ ಮುಖ್ಯವಾಗಿ ಮನಗಂಡಿರುವ ಚಂದ್ರಬಾಬು ನಾಯ್ಡು, ತಮ್ಮ ಪಕ್ಷದ ಹಳೆ ರಣತಂತ್ರವನ್ನು ಮತ್ತೆ ಅನ್ವಯಿಸುತ್ತಿದ್ದಾರೆ. ಮೋದಿ ಯುಗದ ಆರಂಭಕ್ಕೂ ಮುನ್ನ ಟಿಡಿಪಿ ಪ್ರಾಮುಖ್ಯ ಗಳಿಸಿದ್ದನ್ನು ಮತ್ತೊಮ್ಮೆ ನೆನಪಿಸುವಂಥ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆದ್ದರಿಂದ ಸದ್ಯದ ಸನ್ನಿವೇಶದಲ್ಲಿ ಮೋದಿ ವರ್ಸಸ್ ರಾಹುಲ್ ಎಂಬುದಕ್ಕಿಂತ ಮೋದಿ ವರ್ಸಸ್ ನಾಯ್ಡು ಎಂಬುದು ಹೆಚ್ಚು ವಾಸ್ತವಿಕವಾಗಿ ಕಾಣುತ್ತಿದೆ.