ಭಾರತದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗಲು ಈ ತಪ್ಪುಗಳೇ ಕಾರಣ!
ಬೆಂಗಳೂರು, ಜೂನ್.12: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರತವು ವಿಶ್ವದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಕಳೆದ ನಾಲ್ಕು ತಿಂಗಳ ಹಿಂದೆ ದೇಶದ ಪರಿಸ್ಥಿತಿ ಹೀಗೆ ಇರಲಿಲ್ಲ. ದೇಶದಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಐವತ್ತು ಸಾವಿರವಿದ್ದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ.
Recommended Video
ಜಾಗತಿಕ ಮಟ್ಟದಲ್ಲಿ 76,63,678 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಮಹಾಮಾರಿಗೆ 4,25,593 ಮಂದಿ ಬಲಿಯಾಗಿದ್ದಾರೆ. 38,81,210 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
ಕೊರೊನಾ ಸಮುದಾಯಕ್ಕೆ ಹರಡುತ್ತಿದೆಯಾ: ಐಸಿಎಂಆರ್ ಮಹತ್ವದ ರಿಪೋರ್ಟ್
ಭಾರತದಲ್ಲಿ 3,06,270 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, 8,723 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 1,52,748 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 1,44,777 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಭಾರತದಲ್ಲಿ ಪ್ರತಿನಿತ್ಯ 1 ಲಕ್ಷ ಜನರಿಗೆ ವೈದ್ಯಕೀಯ ಪರೀಕ್ಷೆ
ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ 135 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೀಗೆ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದಕ್ಕೆ ರಾಜ್ಯಗಳು ಅನುಸರಿಸುತ್ತಿರುವ ಕೊರೊನಾ ವೈರಸ್ ತಪಾಸಣಾ ವಿಧಾನವೇ ಕಾರಣ ಎಂದು ಹೇಳಲಾಗುತ್ತಿದೆ.
ರಾಜ್ಯಗಳಲ್ಲಿ ಕೊರೊನಾ ವೈರಸ್ ತಪಾಸಣೆಯಲ್ಲಿ ತಪ್ಪು!
ಭಾರತದಲ್ಲಿ ಕೆಲವು ರಾಜ್ಯಗಳು ಕೊರೊನಾ ವೈರಸ್ ತಪಾಸಣೆಯಲ್ಲು ಕೆಲವು ತಪ್ಪುಗಳನ್ನು ಮಾಡುತ್ತಿವೆ. ಗುಜರಾತ್ ನಂತಾ ರಾಜ್ಯಗಳಲ್ಲಿ ಕೆಲವೇ ಕೆಲವು ಜನರನ್ನು ಮಾತ್ರ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಕೊವಿಡ್-19 ತಪಾಸಣೆ ವಿಚಾರದಲ್ಲಿ ಕೆಳಗಿನಿಂದ ಐದನೇ ಸ್ಥಾನದಲ್ಲಿದೆ. ಬಡರಾಜ್ಯಗಳು ಎಂದೇ ಗುರುತಿಸಿಕೊಂಡಿರುವ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಒಡಿಶಾ ರಾಜ್ಯಗಳು ತೀರಾ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಈ ರಾಜ್ಯಗಳ ನಂತರದ ಸ್ಥಾನದಲ್ಲಿ ಗುಜರಾತ್ ಗುರುತಿಸಿಕೊಂಡಿದೆ.
ಗುಜರಾತ್ ನಲ್ಲಿ ಕೊವಿಡ್-19 ತಪಾಸಣಾ ಅಂಕಿ-ಸಂಖ್ಯೆ
ಗುಜರಾತ್ ನಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಕೇವಲ 84 ಜನರಿಗೆ ಮಾತ್ರ ಕೊರೊನಾ ವೈರಸ್ ಸೋಂಕು ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದು ಅಂಕಿ-ಅಂಶಗಳು ಸಾಬೀತುಪಡಿಸಿದೆ. ಈ ವಿಚಾರದಲ್ಲಿ ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್ ಗಢ ರಾಜ್ಯಗಳೇ ಉತ್ತಮ ಸ್ಥಿತಿಯಲ್ಲಿವೆ. ವೈದ್ಯಕೀಯ ತಪಾಸಣೆಯಲ್ಲಿನ ವಿಳಂಬದಿಂದ ಸೋಂಕಿತರ ಪತ್ತೆ ಹಾಗೂ ಗುಣಮುಖ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗುವ ಅಪಾಯವಿದೆ.
ಸೋಂಕಿತರ ಸಂಪರ್ಕದಲ್ಲಿರುವವರ ಬಗ್ಗೆ ನಿರ್ಲಕ್ಷ್ಯಧೋರಣೆ
ಕೊರೊನಾ ವೈರಸ್ ಸೋಂಕಿತರ ಸಂಬಂಧಿಕರು ಮತ್ತು ಸಂಪರ್ಕದಲ್ಲಿ ಇರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಅಗತ್ಯವಿದ್ದು, ಕೆಲವು ರಾಜ್ಯಗಳು ಈ ವಿಚಾರದಲ್ಲಿ ಎಡವುತ್ತಿವೆ. ಸೋಂಕಿತರ ಸಂಬಂಧಿಕರ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿಯೇ ಇಂದು ಸೋಂಕಿತರ ಸಂಖ್ಯೆ ಪ್ರತಿನಿತ್ಯ ಇಮ್ಮಡಿಯಾಗುತ್ತಿದೆ ಎಂದು ಅಂಕಿ-ಅಂಶಗಳಲ್ಲಿ ತಿಳಿದು ಬರುತ್ತಿದೆ.
ಕೊವಿಡ್-19 ಅಪಾಯದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್
ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದವರ ಪೈಕಿ ಅತಿಹೆಚ್ಚು ಶೇಕಡಾವರಿ ಜನರಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಶೇ.100ರಲ್ಲಿ 15.3ರಷ್ಟು ಜನರಿಗೆ ಸೋಂಕು ದೃಢಪಟ್ಟರೆ, ದೆಹಲಿಯಲ್ಲಿ ಶೇ.11.99ರಷ್ಟು ಜನರಿಗೆ ಸೋಂಕು ಪಕ್ಕಾ ಆಗುತ್ತಿದೆ. ಗುಜರಾತ್ ನಲ್ಲಿ 100 ಪೈಕಿ 8 ಮಂದಿಗೆ ಸೋಂಕು ಪತ್ತೆಯಾಗುತ್ತಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 100 ಜನ ತಪಾಸಣೆಗೆ ಒಳಗಾದವರ ಪೈಕಿ 1.48ರಷ್ಟು ಜನರಲ್ಲಿ ಸೋಂಕು ದೃಢಪಟ್ಟಿರುವ ಬಗ್ಗೆ ಅಂಕಿ-ಅಂಶಗಳು ತಿಳಿಸುತ್ತಿವೆ.
ಕೊರೊನಾ ವೈರಸ್ ತಪಾಸಣೆ ಪ್ರಮಾಣದಲ್ಲಿ ಏರಿಕೆಯಿಲ್ಲ
ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಎಡವುತ್ತಿರುವ ರಾಜ್ಯಗಳ ಮೂರನೇ ತಪ್ಪು ಏನೆಂದರೆ ವೈದ್ಯಕೀಯ ತಪಾಸಣಾ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಇದರಿಂದ ಸೋಂಕಿತರ ಸಂಖ್ಯೆಯು ಪ್ರತಿನಿತ್ಯ ಏರಿಕೆಯಾಗುತ್ತಿದೆ. ದೆಹಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ವೈದ್ಯಕೀಯ ತಪಾಸಣೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ. ಬದಲಿಗೆ ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ 14,000 ಸಾವಿರ ಜನರನ್ನು ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಿದರೆ, ದೆಹಲಿ ಮತ್ತು ಗುಜರಾತ್ ನಲ್ಲಿ ದಿನಕ್ಕೆ ಕೇವಲ 6,000 ಜನರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.