ರಾಮ್ ರಹೀಮ್ ನ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು?
ಡೇರಾ ಸಚ್ಛಾ ಸೌಧದ ರಾಮ್ ರಹೀಮ್ ಸಿಂಗ್ ಗೆ ಇಪ್ಪತ್ತು ವರ್ಷ ಜೈಲೂಟ ಗ್ಯಾರಂಟಿ ಅಂತಾಗಿದೆ. ಈಗಿರುವ ಪ್ರಶ್ನೆ ಏನೆಂದರೆ, ಸೌಧದ ಮುಂದಿನ ಉತ್ತರಾಧಿಕಾರಿ ಯಾರು? ಇಷ್ಟು ದೊಡ್ಡ ಸಾಮ್ರಾಜ್ಯದ ಲಗಾಮು ಯಾರ ಕೈಗೆ ಸಿಗಲಿದೆ ಎಂಬುದು.
ವಿಪಸ್ಸನ ಇನ್ಸಾನ್ ಹೆಸರು ರೇಸಿನಲ್ಲಿ ಕಾಣಿಸಿಕೊಂಡಿರುವ ಮುಖ್ಯ ಹೆಸರು. ಈಕೆ ಜತೆಗೆ ಬಾಬಾನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಹೆಸರು ಹರಿದಾಡುತ್ತಿದೆ. ಇಬ್ಬರೂ ತಮ್ಮನ್ನು ತಾವು 'ಗುರು ಬ್ರಹ್ಮಚಾರಿ' ಎಂದು ಕರೆದುಕೊಳ್ಳುತ್ತಾರೆ.
ಹನಿಪ್ರೀತ್ ಅಥವಾ ಪ್ರಿಯಾಂಕಾ ತನೇಜಾ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ನಟಿ, ನಿರ್ದೇಶಕಿ- ಸಂಪಾದಕಿ ಹೀಗೇ ಬಣ್ಣಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾದ ನಂತರ ಬಾಬಾ ಜತೆಗೆ ಕಾಣಿಸಿಕೊಂಡವರು ಇದೇ ಹನಿಪ್ರೀತ್.

ಪಂಚ್ ಕುಲದಿಂದ ಹೆಲಿಕಾಪ್ಟರ್ ನಲ್ಲಿ ರೋಹ್ಟಕ್ ಜೈಲಿಗೆ ಬಾಬಾ ಹೋಗುವಾಗ ಜತೆಗೆ ಬ್ಯಾಗ್ ಹಿಡಿದು ಹೋಗಿದ್ದು ಸಹ ಹನಿಪ್ರೀತ್.
ಇನ್ನು ಮೂವತ್ತೈದು ವರ್ಷದ ವಿಪಸ್ಸನ ಕಾಲೇಜು ಬಿಟ್ಟ ನಂತರ ಸೀದಾ ಬಂದಿದ್ದು ಡೇರಾಗೆ. ಬಾಬಾ ನಂತರದ ಸ್ಥಾನ ಈಕೆಯದಾಗಿತ್ತು.
ರಾಮ್ ರಹೀಮ್ ಗೆ ಹರ್ಜೀತ್ ಕೌರ್ ಎಂಬಾಕೆ ಜತೆಗೆ ಮದುವೆಯಾಗಿ, ಈ ದಾಂಪತ್ಯಕ್ಕೆ ಚರಣ್ ಪ್ರೀತ್, ಅಮರ್ ಪ್ರೀತ್ ಎಂಬಿಬ್ಬರು ಹೆಣ್ಣುಮಕ್ಕಳು, ಜಸ್ಮೀತ್ ಎಂಬ ಗಂಡುಮಗ ಇದ್ದಾರೆ. ಮಕ್ಕಳಿಗೆಲ್ಲ ಮದುವೆಯಾಗಿದೆ.
ಜಸ್ಮೀತ್ ಇನ್ಸಾನ್ ವ್ಯಾಪಾರ ಮಾಡುತ್ತಿದ್ದು, ಹತ್ತು ವರ್ಷದ ಹಿಂದೆಯೇ ರಾಮ್ ರಹೀಮ್ ನ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ ಎಂದು ವರದಿಯಾಗಿದೆ. ಜಸ್ಮೀತ್ ಮದುವೆಯಾಗಿರುವುದು ಕಾಂಗ್ರೆಸ್ ಮುಖಂಡರೊಬ್ಬರ ಮಗಳನ್ನು. ಮೇಲ್ನೋಟಕ್ಕೆ ಹೇಳುವುದಾದರೆ ಜಸ್ಮೀತ್ ಗೆ ಡೇರಾದ ಹಿರಿಯರ ಬೆಂಬಲವಿದೆ.











Click it and Unblock the Notifications