ಕೂಸಿಗೆ ಮುನ್ನವೇ ಕುಲಾವಿ: ಮೋದಿ ವಿರುದ್ದ ಪಿಎಂ ರೇಸಿಗೆ ಮತ್ತೊಂದು ಹೆಸರು
Recommended Video

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಹೇಗಾದರೂ ಅಧಿಕಾರದಿಂದ ದೂರವಿಡಬೇಕು ಎನ್ನುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೋರಾಟಕ್ಕೆ ಹೆಜ್ಜೆಗೊಂದು ಕಲ್ಲು ಅಡ್ಡಿಬರುತ್ತಿದೆ.
2014ರ ಚುನಾವಣೆಯಲ್ಲಿ ಗೆದ್ದಷ್ಟು ಸುಲಭವಾಗಿ ಮುಂದಿನ ಚುನಾವಣೆ ಬಿಜೆಪಿಗೆ ಗೆಲ್ಲುವುದು ಸಲೀಸಲ್ಲ ಎನ್ನುವ ಸದ್ಯದ ರಾಜಕೀಯದ ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ಯಾರ್ಯಾರು ಜೊತೆಯಾಗಬೇಕು, ಜೊತೆಯಾದರೆ ಪ್ರಧಾನಿಯಾರಾಗಬೇಕು ಎನ್ನುವ ಚರ್ಚೆ ಈಗಾಗಲೇ ಆರಂಭವಾಗಿದೆ.
ಲೋಕಸಭಾ ಚುನಾವಣೆಗೂ ಮುನ್ನ ನಿರ್ಣಾಯಕ ಮೂರು ರಾಜ್ಯಗಳ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ) ಅಸೆಂಬ್ಲಿ ಚುನಾವಣೆ ವರ್ಷಾಂತ್ಯದಲ್ಲಿ ಎದುರಾಗಲಿರುವುದರಿಂದ, ರಾಜಕೀಯ ಗೇಂ ಪ್ಲಾನ್ ಅನ್ನು ಎಲ್ಲಾ ಪಕ್ಷಗಳು ಈಗಾಗಲೇ ಆರಂಭಿಸಿವೆ.
ಮೋದಿ ವಿರುದ್ದ, ಚುನಾವಣೆಗೆ ಮುನ್ನವೇ ಮೈತ್ರಿಮಾಡಿಕೊಳ್ಳಬೇಕೇ, ಅತಂತ್ರ ಫಲಿತಾಂಶ ಬಂದಾಗ ನೋಡಿಕೊಳ್ಳೋಣ ಎನ್ನುವ ನಿಲುವನ್ನು ಕೆಲವು ಬಿಜೆಪಿ ವಿರೋಧಿ ಪಕ್ಷಗಳು ಹೊಂದಿರುವುದರಿಂದ, ಎಲ್ಲರನ್ನು ಒಗ್ಗೂಡಿಸಿ ಚುನಾವಣೆ ಎದುರಿಸೋಣ ಎನ್ನುವ ರಾಹುಲ್ ಕನಸಿಗೆ ಸದ್ಯದ ಮಟ್ಟಿಗೆ ಹಿನ್ನಡೆಯಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಪಕ್ಷದ ಗೆಲುವಿನ ರಾಜಕೀಯ ತಂತ್ರಗಾರಿಕೆ ಹಣೆದಿದ್ದ ಪ್ರಶಾಂತ್ ಕಿಶೋರ್ ಅವರನ್ನು ಮುಂಬರುವ ಚುನಾವಣೆಗೂ ಬಿಜೆಪಿ ನಿಯೋಜಿಸುವ ಸಾಧ್ಯತೆಯಿದೆ. ಈ ನಡುವೆ, ಬಹುಜನ ಸಮಾಜ ಪಕ್ಷ 'ಬೆಹನ್ ಜೀ'ಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಿ, ಕಾರ್ಯಕರ್ತರಿಗೆ ಗ್ರೌಂಡ್ ವರ್ಕ್ ಮಾಡಲು ಸೂಚಿಸಿದೆ ಎನ್ನುವ ಮಾಹಿತಿಯಿದೆ.

ಒಂದೇ ಒಂದು ಸ್ಥಾನವನ್ನು ಹೊಂದದ ಬಿಎಸ್ಪಿ
ಗಮನಿಸಬೇಕಾದ ಅಂಶವೇನಂದರೆ, 545 ಸಂಸದರನ್ನು ಹೊಂದಿರುವ ಲೋಕಸಭೆಯಲ್ಲಿ ಒಂದೇ ಒಂದು ಸ್ಥಾನವನ್ನು ಹೊಂದದ ಬಿಎಸ್ಪಿಯ ನಾಯಕಿ ಮಾಯಾವತಿ, ಅತಂತ್ರ ಫಲಿತಾಂಶ ಬಂದರೆ, ತಾನು ಕೂಡಾ ಪಿಎಂ ಅಭ್ಯರ್ಥಿಗಳಲ್ಲಿ ಒಬ್ಬರು ಎಂದು ದಾಳ ಉರುಳಿಸಿದ್ದಾರೆ. ಈ ಸಂಬಂಧ, ಕಾರ್ಯಕರ್ತರೂ ಕಾರ್ಯೋನ್ಮುಖರಾಗಿದ್ದಾರೆ ಎನ್ನುವ ಸುದ್ದಿಯೂ ಇದೆ. ಹರಿದಾಡುತ್ತಿರುವ ಈ ಸುದ್ದಿಗೆ, ಮಾಯಾವತಿ ಅತ್ತ ನಿರಾಕರಿಸುತ್ತಲೋ ಇಲ್ಲ, ಹೌದು ಎನ್ನುತ್ತಲೂ ಇಲ್ಲ.

ಬಿಜೆಪಿಗೆ ಭರ್ಜರಿ ಸೋಲಿನ ರುಚಿಯನ್ನು ತೋರಿಸಿದ ಎಸ್ಪಿ-ಬಿಎಎಸ್ಪಿ
ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಉತ್ತರಪ್ರದೇಶ ಅತ್ಯಂತ ನಿರ್ಣಾಯಕವಾಗಿರುವುದರಿಂದ (80 ಕ್ಷೇತ್ರಗಳು), ಬಿಎಸ್ಪಿ ತೆಗೆದುಕೊಳ್ಳುವ ನಿರ್ಧಾರ ಮಹತ್ವನ್ನು ಪಡೆದುಕೊಂಡಿದೆ. ತನ್ನ ಕಟ್ಟಾ ವಿರೋಧಿ ಎಸ್ಪಿ ಜೊತೆ ಕೈಜೋಡಿಸಿ, ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಸೋಲಿನ ರುಚಿಯನ್ನು ಎಸ್ಪಿ-ಬಿಎಸ್ಪಿ ತೋರಿಸಿರುವುದರಿಂದ, ಇಲ್ಲಿ ನಡೆಯುವ ಮೈತ್ರಿ ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಪಕ್ಷಗಳಿಗೂ ಒಪ್ಪಿಗೆಯಾಗಬಹುದು. ಮಾಯಾವತಿ ದಲಿತ ನಾಯಕಿ ಬೇರೆ.

ಶರದ್ ಪವಾರ್ ಅವರ ಹೆಸರೂ ಪ್ರಧಾನಿ ಹುದ್ದೆಗೆ ಕೇಳಿಬರುತ್ತಿತ್ತು
ಈ ಹಿಂದೆ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಹೆಸರೂ ಪ್ರಧಾನಿ ಹುದ್ದೆಗೆ ಕೇಳಿಬರುತ್ತಿತ್ತು. ಎಲ್ಲರ ಜೊತೆ ಉತ್ತಮ ಸಂಬಂಧವನ್ನು ಪವಾರ್ ಇಟ್ಟುಕೊಂಡಿದ್ದರೂ, ಮಹಾರಾಷ್ಟ್ರದಲ್ಲಿ ಮಾತ್ರ ತಮ್ಮ ಅಸ್ತಿತ್ವವನ್ನು ಪಕ್ಷ ಹೊಂದಿರುವುದು ಇವರ ಪ್ರಧಾನಿ ಕನಸಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಸದ್ಯ, ಎನ್ಸಿಪಿ ಏಳು ಸಂಸದರನ್ನು ಹೊಂದಿದೆ. ಶಿವಸೇನೆ, ಬಿಜೆಪಿ ಜೊತೆ ಸಂಬಂಧ ಮುರಿದುಕೊಂಡರೆ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಲಲು ಹಿಂಜರಿಯುವುದಿಲ್ಲ ಎಂದು ಈಗಾಗಲೇ ಎನ್ಸಿಪಿ ಮುಖಂಡರು ಹೇಳಿಕೆಯನ್ನು ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಗೈರಾಗಿದ್ದರು
ಎಲ್ಲರನ್ನು ಒಗ್ಗೂಡಿಸಲು ವರ್ಷದ ಆರಂಭದಲ್ಲಿ ಶರದ್ ಪವಾರ್ ಔತಣಕೂಟವೊಂದನ್ನು ಆಯೋಜಿಸಿದ್ದರು. ಅದರಲ್ಲಿ ಮಮತಾ ಬ್ಯಾನರ್ಜಿ ಗೈರಾಗಿದ್ದರು. ರಾಹುಲ್ ಗಾಂಧಿಯನ್ನು ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ಮಮತಾ ಸುತರಾಂ ಒಪ್ಪುತ್ತಿಲ್ಲ ಎನ್ನುವ ಸುದ್ದಿಯಿತ್ತು. ಸೋನಿಯಾ ಗಾಂಧಿ ಜೊತೆ ಉತ್ತಮ ಬಾಂಧವ್ಯವನ್ನು ಮಮತಾ ಹೊಂದಿದ್ದರೂ, ರಾಹುಲ್ ಗಿಂತ ಅನುಭವಿ ಮತ್ತು ಹಿರಿಯ ಮುಖಂಡರು ಮೈತ್ರಿಕೂಟದಲ್ಲಿ ಇರುವುದರಿಂದ ರಾಹುಲ್ ಆಯ್ಕೆಗೆ ಸದ್ಯದ ಮಟ್ಟಿಗೆ ಮಮತಾ ಒಪ್ಪುವ ಸಾಧ್ಯತೆ ಕಮ್ಮಿ.

ಮುಂದಿನ ದಿನಗಳಲ್ಲಿ ಎಷ್ಟು ಸೇರಿಸಬೇಕಾಗುತ್ತೋ, ಕಳೆಯಬೇಕಾಗುತ್ತೋ
ಇದೇ ರೀತಿಯ ನಿಲುವನ್ನು ಸಿಪಿಐ(ಎಂ) ಮುಖಂಡ ಸೀತಾರಾಂ ಯಚೂರಿ ಕೂಡಾ ಹೊಂದಿದ್ದಾರೆ. ಎಡರಂಗ, ತೃತೀಯ ರಂಗವೇ ಬಲಿಷ್ಠವಾಗಿರುವಾಗ, ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಬಿಂಬಿಸುವುದಕ್ಕೆ ಯಚೂರಿ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ಮೋದಿ ವಿರುದ್ದ ಪ್ರಧಾನಿ ಹುದ್ದೆಗೆ ಸದ್ಯ, ರಾಹುಲ್ ಗಾಂಧಿ, ಮಾಯಾವತಿ ಮತ್ತು ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಎಷ್ಟು ಸೇರಿಸಬೇಕಾಗುತ್ತೋ, ಕಳೆಯಬೇಕಾಗುತ್ತೋ, ಕಾದು ನೋಡಬೇಕಿದೆ.











Click it and Unblock the Notifications