ಕೊರೊನಾ 3ನೇ ಅಲೆ ಎದುರಿಸಲು ಮಹತ್ವದ ಸಲಹೆ ನೀಡಿದ WHO ವಿಜ್ಞಾನಿ
ನವದೆಹಲಿ, ಜೂನ್ 8: ಭಾರತ ಕೊರೊನಾವೈರಸ್ನ ಎರಡನೇ ಅಲೆಯ ಹಿಡಿತದಿಂದ ನಿಧಾನಕ್ಕೆ ತಪ್ಪಿಸಿಕೊಳ್ಳುತ್ತಿದೆ. ಈ ಮಧ್ಯೆ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಈ ವಿಚಾರವಾಗಿ ಭಾರತಕ್ಕೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಭಾರತ ವೈರಸ್ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ ಡಾ.ಸೌಮ್ಯ ಸ್ವಾಮಿನಾಥನ್. ಅಪಾಯಕಾರಿ ರೂಪಾಂತರಿಗಳನ್ನು ಪತ್ತೆಹಚ್ಚುವುದು, ಸಂಶೋಧನೆಗಳನ್ನು ನಡೆಸುವುದು ಮತ್ತು ಅಂಕಿಅಂಶಗಳ ವಿಶ್ಲೇಷಣೆ ಮಾಡುವುದು ಮೂರನೇ ಅಲೆಯನ್ನು ಎದುರಿಸಲು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇವುಗಳನ್ನು ಕೈಗೊಳ್ಳುವುದು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಜವಾಬ್ಧಾರಿ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ವುಹಾನ್ ಲ್ಯಾಬ್ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್ ಅಧ್ಯಯನದ ಅಂತಿಮ ತೀರ್ಮಾನ
"ಪರೀಕ್ಷೆಯ ಪ್ರಮಾಣ, ಪರೀಕ್ಷೆಯ ಪಾಸಿಟಿವಿಟಿ ಪ್ರಮಾಣ ಮತ್ತು ಈ ರೀತಿಯ ಇತರ ಪ್ರಮುಖ ಅಂಕಿಅಂಶಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿಗಾವಹಿಸಬೇಕು. ಗ್ರಾಮೀಣ ಭಾಗಗಳಲ್ಲಿಯೂ ಕೊರೊನಾ ಚಿಕಿತ್ಸಾ ಕೇಂದ್ರಗಳ ಸೇವೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಯಾಕೆಂದರೆ ವೈರಸ್ನ ಹರಡುವಿಕೆ ನಗರ ಭಾಗಗಳಿಂದ ಗ್ರಾಮೀಣ ಭಾಗಗಳಿಗೆ ಹಬ್ಬುವ ಸಾಧ್ಯತೆಯಿರುತ್ತದೆ" ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯ ಅಂಕಿಅಂಶಗಳು ಕೂಡ ಮೂರನೇ ಅಲೆಯ ಸಿದ್ಧತೆಗೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಂಶೋಧನೆಗಳು ಅಗತ್ಯ
"ಮೂರನೇ ಅಲೆಯ ಆರಂಭವಾಗುವುದಕ್ಕೂ ಮುನ್ನ ರೂಪಾಂತರವಾಗಿರುವ ವೈರಸ್ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ, ದಾಖಲೆಗಳ ಪರಿಶೀಲನೆ ಮತ್ತು ವಿಶ್ಲೇಷಣೆಗಳ ಅಗತ್ಯವಿರುತ್ತದೆ. ಹರಡುವಿಕೆಯಲ್ಲಿ ಅವುಗಳ ವರ್ತನೆ ಹೇಗಿರುತ್ತದೆ, ವೈದ್ಯಕೀಯ ತೀವ್ರತೆ ಎಷ್ಟಿರುತ್ತದೆ ಮತ್ತು ಲಸಿಕೆಯ ಸ್ಪಂದಿಸುವಿಕೆ ಹೇಗಿದೆ ಎಂಬುದನ್ನು ಇವುಗಳಿಂದ ಕಂಡುಕೊಳ್ಳಬಹುದು. ಎರಡನೇ ಬಾರಿ ವೈರಸ್ಗೆ ತುತ್ತಾಗಿರುವ ವಿಚಾರವಾಗಿಯೂ ಲಭ್ಯವಿರುವ ದತ್ತಾಂಶಗಳ ಬಗ್ಗೆಯೂ ಸಾಕಷ್ಟು ವಿಶ್ಲೇಷಣೆಗಳ ಅಗತ್ಯವಿದೆ. ಏಕೆಂದರೆ ಜನರು ಎಷ್ಟು ಸಮಯದವರೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದು ಕೂಡ ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ.
ಇನ್ನು ಇದೇ ಸಂದರ್ಭದಲ್ಲಿ ಮೊದಲ ಅಲೆಯಲ್ಲಿ ವೈರಸ್ನ ಪ್ರಮಾಣ ಏರಿಕೆ ಕಂಡಿದ್ದ ನಗರಗಳು ಎರಡನೇ ಅಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿವೆ ಎಂಬುದನ್ನು ಕೂಡ ಡಾ. ಸೌಮ್ಯ ಸ್ವಾಮಿನಾಥನ್ ಪ್ರಸ್ತಾಪಿಸಿದ್ದಾರೆ. ಭಾರತದಲ್ಲಿ ಮೊದಲಿಗೆ ಪತ್ತೆಯಾದ ಡೆಲ್ಟಾ ಮಾದರಿಯ ಕೊರೊನಾ ರೂಪಾಂತರ ಈ ಹಿಂದೆ ಸೋಂಕಿಗೆ ತುತ್ತಾಗಿದ್ದವರನ್ನು ಮತ್ತೊಮ್ಮೆ ಸೋಂಕಿತರನ್ನಾಗಿ ಮಾಡಿತೇ? ಅವರಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕಡಿಮೆಯಾಯಿತೇ? ಅಥವಾ ಈ ಮಾದರಿ ಮೊದಲ ಅಲೆಯಲ್ಲಿ ಸೋಂಕಿಗೆ ತುತ್ತಾಗದವರನ್ನು ಮಾತ್ರವೇ ಕಾಡಿದೆಯೇ? ಇವುಗಳನ್ನು ನಾವು ಅಧ್ಯಯನದ ಮೂಲಕ ಕಂಡುಕೊಳ್ಳಬೇಕಿದೆ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.
ಕಡಿಮೆ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕು
ಮುಂದುವರಿದು ಮಾತನಾಡಿದ ಅವರು ಭಾರತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುವಂತೆ ನೊಡಿಕೊಳ್ಳಬೇಕು ಎಂದಿದ್ದಾರೆ. "ಹೆಚ್ಚಿನ ರಾಷ್ಟ್ರಗಳು ಕೊರೊನಾವೈರಸ್ ಪ್ರಮಾಣವನ್ನು ನಿಯಂತ್ರಣ ಮಾಡಿದ್ದು ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆಯನ್ನು ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅಧಿಕಾರಿಗಳು ಕೊರೊನಾ ರೋಗಿಗಳನ್ನು ಪತ್ತೆಹಚ್ಚಿದ ಬಳಿಕ ಅವರ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಡಾ. ಸೌಮ್ಯ ಸ್ವಾಮಿನಾಥನ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಮತ್ತು ಹದಿಹರೆಯದ ಯುವಕ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಲಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ ಎಂದಿದ್ದಾರೆ. ಹಾಗಿದ್ದರೂ ವೈರಸ್ನ ತೀವ್ರತೆಯನ್ನು ಮಕ್ಕಳು ಎದುರಿಸುವ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲ ಎಂದಿದ್ದಾರೆ. ಹೀಗಾಗಿ ಮಕ್ಕಳ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಶೇಕಡಾ 70-80ರಷ್ಟು ಜನರಿಗೆ ಲಸಿಕೆ
ಇನ್ನು ಸ್ವಾಭಾವಿಕವಾಗಿ ವೈರಸ್ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯವನ್ನು ಪಡೆಯುವ ಹರ್ಡ್ ಇಮ್ಯೂನಿಟಿ ಪಡೆಯಲು ನಿಖರವಾಗಿ ಎಷ್ಟು ಪ್ರಮಾಣದ ಅಗತ್ಯವಿದೆ ಎಂದು ಸ್ಪಷ್ಟತೆಯಿಲ್ಲ. ಆದರೆ ಇಡೀ ವಿಶ್ವದ ಜನಸಂಖ್ಯೆಯ 70-80 ಶೇಕಡಾ ಜನರು ಲಸಿಕೆ ಹಾಕಿಸಿಕೊಂಡಾಗ ಹರ್ಡ್ ಇಮ್ಯೂನಿಟಿ ಪಡೆಯಬಹುದು ಎಂದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಲಸಿಕೆ ಪ್ರಮಾಣ ಬಹಳ ಕಡಿಮೆ ಮಟ್ಟದಲ್ಲಿದೆ. ಬಹುಶಃ ಅದು ಐದು ಶೇಕಡಾಗಿಂತಲೂ ಕಡಿಮೆಯಿದೆ ಎಂದು ಅವರು ಹೇಳಿದ್ದಾರೆ.
ಲಸಿಕೆ ಹಂಚಿಕೆಯಲ್ಲಿ ದೊಡ್ಡ ವ್ಯತ್ಯಾಸ
"ನೀವು ಹೆಚ್ಚಿನ ಆದಾಯವನ್ನು ಹೊಂದಿರುವ ರಾಷ್ಟ್ರಗಳು ಹಾಗೂ ಕಡಿಮೆ ಆದಾಯಗಳನ್ನು ಹೊಂದಿರುವ ರಾಷ್ಟ್ರಗಳನ್ನು ಗಮನಿಸಿದರೆ ಲಸಿಕೆ ಹಂಚಿಕೆಯ ವ್ಯತ್ಯಾಸ ತಿಳಿಯುತ್ತದೆ. ವಿಶ್ವದ ಸರಾಸರಿ ಇಲ್ಲಿ ದೊಡ್ಡ ವಿಚಾರವಾಗುವುದಿಲ್ಲ. ಕೆಲ ರಾಷ್ಟ್ರಗಳು 40-60 ಶೇಕಡಾ ಲಸಿಕೆಯನ್ನು ಹಾಕಿಸಿಕೊಂಡಿವೆ. ಇದೇ ಸಂದರ್ಭದಲ್ಲಿ ಇಳಿದ ಕೆಲ ದೇಶಗಳು ಒಂದು ಶೇಕಡಾವನ್ನು ಕೂಡ ಹಾಕಿಸಿಕೊಂಡಿಲ್ಲ. ಈಗ ನಾವು ಈ ವರ್ಷಾಂತ್ಯದಲ್ಲಿ ಪ್ರತಿ ರಾಷ್ಟ್ರಗಳ 30 ಶೇಕಡಾ ಜನಸಂಖ್ಯೆ ಲಸಿಕೆಯನ್ನು ಪೂರ್ತಿಗೊಳಿಸಿರಬೇಕು ಹಾಗೂ ಮುಂದಿನ ವರ್ಷದ ಮಧ್ಯಂತರದಲ್ಲಿ 60 ಶೇಕಡಾ ಸಂಪೂರ್ಣವಾಗಿರಬೇಕು ಎಂಬ ಭರವಸೆಯನ್ನು ಹೊಂದಿದ್ದೇವೆ" ಎಂದು ಸೌಮ್ಯ ಸ್ವಾಮಿನಾಥನ್ ಹೇಳಿಕೆ ನೀಡಿದ್ದಾರೆ.