ಬಿಜೆಪಿ ಮುಖಂಡರ ಪುತ್ರನನ್ನು ಕಾಂಗ್ರೆಸ್ಸಿಗೆ ಸೆಳೆದ ರಾಹುಲ್
ಡೆಹ್ರಾಡೂನ್, ಮಾರ್ಚ್ 17: ಬಿಜೆಪಿಯ ಹಿರಿಯ ನಾಯಕ ಬಿಸಿ ಖಂಡೂರಿ ಅವರ ಪುತ್ರ ಮನೀಶ್ ಖಂಡೂರಿ ಅವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಶನಿವಾರದಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಬಿಸಿ ಖಂಡೂರಿ ಅವರ ಕ್ಷೇತ್ರ ಪಾರಿ ಲೋಕಸಭಾ ಕ್ಷೇತ್ರದಿಂದಲೇ ಮನೀಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿರುವ ಸುದ್ದಿಯಿದೆ. ರಾಜಕೀಯಕ್ಕೆ ಬರುವ ಮುನ್ನ ಮೇಜರ್ ಜನರಲ್ ಆಗಿದ್ದ ಬಿಸಿ ಖಂಡೂರಿ ಅವರನ್ನು ಬಿಜೆಪಿ ಕಡೆಗಣಿಸಿದ್ದನ್ನು ಮರೆಯುವಂತಿಲ್ಲ ಎಂದು ರಾಹುಲ್ ಹೇಳಿದರು.
ರಾಷ್ಟೀಯ ಭದ್ರತಾ ದೃಷ್ಟಿಯಿಂದ ಬಿಸಿ ಖಂಡೂರಿ ಅವರು ಕೇಳಿದ ಪ್ರಶ್ನೆಯಿಂದಾಗಿ ಅವರನ್ನು ಸಂಸತ್ತಿನ ಸ್ಥಾನೀಯ ಸಮಿತಿ(ರಕ್ಷಣಾ) ಅಧ್ಯಕ್ಷ ಸ್ಥಾನದಿಂದಲೇ ಕೆಳಗಿಳಿಸಲಾಯಿತು ಎಂದರು.

ಬಿಸಿ ಖಂಡೂರಿ ಪ್ರತಿಕ್ರಿಯೆ: 2007 ಹಾಗೂ 2012ರಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿಯಾಗಿದ್ದ ನಿವೃತ್ತ ಆರ್ಮಿ ಅಧಿಕಾರಿ ಬಿಸಿ ಖಂಡೂರಿ ಅವರು ತಮ್ಮ ಪುತ್ರ ಮನೀಶ್ ಅವರು ಕಾಂಗ್ರೆಸ್ ಸೇರಿರುವುದಕ್ಕೆ ಯಾವುದೇ ಪ್ರತಿರೋಧವಿಲ್ಲ ಎಂದಿದ್ದಾರೆ.
ನನ್ನ ಮಗ ಸುಶಿಕ್ಷಿತನಾಗಿದ್ದಾನೆ. ಆತನ ಇಚ್ಛೆಯಂತೆ ನಿರ್ಧಾರ ಕೈಗೊಳ್ಳಬಹುದು. ಈ ಬಗ್ಗೆ ಪ್ರಶ್ನೆ ಏಕೆ ಕೇಳುತ್ತಿದ್ದೀರಿ?. ಆತ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಬದಲಾಯಿಸಿದ್ದರೆ ಬೇರೆ ಮಾತಾಗುತ್ತಿತ್ತು. ಇಂಜಿನಿಯರಿಂಗ್ ಪದವೀಧರನಾಗಿದ್ದು, ಯುಎಸ್ ನಿಂದ ಬಂದಿದ್ದು, ಇಲ್ಲಿ ಏನಾದರೂ ಉತ್ತಮ ಕಾರ್ಯ ಮಾಡುವ ಕನಸು ಹೊಂದಿದ್ದಾನೆ ಎಂದಿದ್ದಾರೆ.
ಈ ಬಾರಿ ಚುನಾವಣೆ ಸ್ಪರ್ಧಿಸಲ್ಲ. ಕಳೆದ 30 ವರ್ಷಗಳಿಂದ ರಾಜಕೀಯ ಜೀವನ ಕಂಡಿದ್ದೇನೆ. ಯುವ ಪೀಳಿಗೆಗೆ ಅವಕಾಶ ಸಿಗಲಿ ಎಂದು ಖಂಡೂರಿ ಹೇಳಿದರು.
ಮನೀಶ್ ಅವರ ಸೋದರಿ ರಿತು ಖಂಡೂರಿ ಅವರು ಯಮ್ಕೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿದ್ದು, ಇದು ಪಾರಿ ಲೋಕಸಭೆ ಕ್ಷೇತ್ರದಲ್ಲಿದೆ.












Click it and Unblock the Notifications