ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?
ನವದೆಹಲಿ, ಅಕ್ಟೋಬರ್ 27: ಕೇಂದ್ರ ಸರ್ಕಾರದಿಂದ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ತನಿಖೆ ಮಾಡಲು ಅದೇ ಕೇಂದ್ರವು ಸಿವಿಸಿ ಯನ್ನು ನೇಮಿಸಿದೆ.
ದೇಶದ ಗಮನಸೆಳೆದಿರುವ ಈ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮೇಲೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಮಾಡಿದ್ದ ಆರೋಪಗಳೇನು, ಸಿವಿಸಿ ತಂಡವು ಯಾವ ವಿಷಯದ ಬಗ್ಗೆ ತನಿಖೆ ಮಾಡಲಿದೆ ಎಂಬುದು ಉತೂಹಲ ಕೆರಳಿಸಿದೆ.
ಮೊದಲಿಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಮೇಲೆ ಲಂಚ ಪಡೆದ ಆರೋಪದ ಮೇಲೆ ತನಿಖೆಗೆ ಆದೇಶಿಸಿದರು. ಅಷ್ಟೆ ಅಲ್ಲದೆ ಎಫ್ಐಆರ್ ದಾಖಲಿಸುವಂತೆಯೂ ಹೇಳಿದರು. ಆ ನಂತರ ಇಬ್ಬರೂ ನಿರ್ದೇಶಕರನ್ನು ಕೇಂದ್ರ ಸರ್ಕಾರವು ಕಡ್ಡಾಯ ರಜೆಯ ಮೇಲೆ ಕಳುಹಿಸಿತು.

ವರ್ಮಾ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಅಸ್ಥಾನ
ತನ್ನ ಮೇಲೆ ಎಫ್ಐಆರ್ ದಾಖಲಿಸಲು ಮುಂದಾಗಿದ್ದ ವರ್ಮಾ ಮೇಲೆ ರಾಕೇಶ್ ಅಸ್ಥಾನಾ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಲೋಕ್ ವರ್ಮಾ, ರಾಕೇಶ್ ಅಸ್ಥಾನಾ ಮೇಲೆ ಹೊರಿಸಿದ್ದ ಆರೋಪಗಳನ್ನೇ ರಾಕೇಶ್ ಅಸ್ಥಾನ, ಅಲೋಕ್ ವರ್ಮಾ ಮೇಲೆ ಹೊರಿಸಿದ್ದಾರೆ.

ವರ್ಮಾ ಅವರಿಗೆ ಸತೀಶ್ ಸನಾ 2 ಕೋಟಿ ಕೊಟ್ಟಿದ್ದಾರಂತೆ
ರಾಕೇಶ್ ಅಸ್ಥಾನಾ ಮೊಯಿನ್ ಖುರೇಷಿ ಪ್ರಕರಣದಲ್ಲಿ ಸತೀಶ್ ಬಾಬು ಸನಾ ಅವರನ್ನು ಆರೋಪಿ ಮಾಡದಿರಲು ಲಂಚ ತೆಗೆದುಕೊಂಡಿದ್ದಾರೆ ಎಂದು ಅಲೋಕ್ ವರ್ಮಾ ಸಿಬಿಐ ತನಿಖೆ ನಡೆಸಿದ್ದರು. ಆದರೆ ಈಗ ರಾಕೇಶ್ ಅಸ್ಥಾನಾ ಸಹ ಇದೇ ಆರೋಪವನ್ನು ಅಲೋಕ್ ವರ್ಮಾ ವಿರುದ್ಧ ಮಾಡಿದ್ದಾರೆ. ಅದೇ ಸತೀಶ್ ಸನಾ ಬಳಿ 2 ಕೋಟಿ ಲಂಚವನ್ನು ಅಲೋಕ್ ವರ್ಮಾ ಪಡೆದುಕೊಂಡಿದ್ದಾರೆ ಎಂದು ಅಸ್ಥಾನಾ ಆರೋಪ ಮಾಡಿದ್ದಾರೆ.

ಇನ್ನೂ ಹಲವು ಆರೋಪ ಮಾಡಿರುವ ಅಸ್ಥಾನಾ
ಅದು ಮಾತ್ರ ಅಲ್ಲದೆ ತಪ್ಪು ಮಾಹಿತಿ ನೀಡುವುದು ಅಥವಾ ತನಿಖೆಯನ್ನು ತಪ್ಪು ದಾರಿಗೆ ಎಳೆಯುವುದು, ತನಿಖೆಯಲ್ಲಿ ಮೂಗು ತೂರಿಸುವುದು, ಲಂಚ ಪಡೆಯುವುದು ಹೀಗೆ ಒಟ್ಟು ಒಂಬತ್ತು ಆರೋಪಗಳನ್ನು ಅಸ್ಥಾನಾ ಅವರು ವರ್ಮಾ ಮೇಲೆ ಮಾಡಿದ್ದಾರೆ. ಸಿವಿಸಿಯು ಈ ಪ್ರಕರಣಗಳಲ್ಲಿ ಯಾವುದರ ಮೇಲೆ ತನಿಖೆ ಮಾಡಲಿದ್ದಾರೆ ಎಂಬುದು ಮುಖ್ಯ.

ಸಿವಿಸಿಗೆ ರಾಕೇಶ್ ಬರೆದಿದ್ದ ಪತ್ರದಲ್ಲಿ ಆರೋಪ
ರಾಕೇಶ್ ಅಸ್ಥಾನ ಸಿಬಿಐ ವಿಶೇಷ ನಿರ್ದೇಶಕ ಆಗಿದ್ದಾಗ ಸಿವಿಸಿಗೆ ಬರೆದ ಪತ್ರದಲ್ಲಿ ಸತೀಶ್ ಸನಾ ವರ್ಮಾಗೆ ಎರಡು ಕೋಟಿ ಲಂಚ ನೀಡಿದ್ದಾನೆ ಎಂದು ಬರೆದಿದ್ದಾರೆ. ಅಷ್ಟೆ ಅಲ್ಲ ಐಸಿಆರ್ಟಿಸಿ ಕೇಸಿನ (ಲಾಲೂ ಪ್ರಸಾದ್ ಪ್ರಕರಣ) ತನಿಖೆಯಿಂದ ನನ್ನನ್ನು ವಜಾ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಕಲ್ಲಿದ್ದಲು ಹಗರಣ ತನಿಖೆಯಿಂದಲೂ ಹೊರಕ್ಕೆ
ಅಷ್ಟೆ ಅಲ್ಲದೆ ವರ್ಮಾ ಅವರು ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ಸೂಚನೆಗಳನ್ನು ಬೇಕೆಂದೇ ನಿರ್ಲಕ್ಷಿಸಿದರು ಎಂದು ಸಹ ಸಿವಿಸಿಗೆ ಈ ಹಿಂದೆಯೇ ಪತ್ರದಲ್ಲಿ ತಿಳಿಸಿದ್ದರು. ಪಿ.ಚಿದಂಬರಂ ಆರೋಪಿಯಾಗಿರುವ ಐಎನ್ಎಕ್ಸ್ ಮೀಡಿಯಾ ತನಿಖೆಯಿಂದಲೂ ನನ್ನನ್ನು ಹೊರಗಿಟ್ಟಿದ್ದರು ಎಂದು ಅವರು ಪತ್ರದಲ್ಲಿ ಹೇಳಿದ್ದರು.

ವರ್ಮಾ ಮೇಲಿನ ಆರೋಪಗಳು ಆಧಾರ ರಹಿತ
ಅಸ್ಥಾನಾ ಅವರು ವರ್ಮಾ ಮೇಲೆ ಮಾಡಿರುವ ಆರೋಪಗಳು ಆಧಾರವಿಲ್ಲದ ನಿಷ್ಪ್ರಯೋಜಕ ಆರೋಪಗಳು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಅವರೇ ವರ್ಮಾ ಮೇಲಿನ ಆರೋಪಗಳು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

ಎರಡು ವಾರಗಳಲ್ಲಿ ವರದಿಗೆ ಕೋರ್ಟ್ ಸೂಚನೆ
ಸಿಬಿಐ ಪ್ರಕರಣವನ್ನು ಎರಡು ವಾರದ ಒಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸುಪ್ರಿಂ ಕೋರ್ಟ್ ಈಗಾಗಲೇ ಸಿವಿಸಿಗೆ ತಿಳಿಸಿದ್ದು, ಸಿವಿಸಿಯು ಸಿಬಿಐನ ಆಂತರಿಕ ಬೆಳವಣಿಗೆ, ವರ್ಮಾ ಮೇಲಿನ ಆರೋಪಗಳು, ವರ್ಮಾ ಅವರು ಅಸ್ಥಾನಾ ಮೇಲೆ ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸಲಿದ್ದಾರೆ.












Click it and Unblock the Notifications