ಸೋನಿಯಾಗೆ ಆಘಾತ: ಕಾಂಗ್ರೆಸ್, ಎಡಪಕ್ಷಗಳಿಗೆ 'ನನ್ನ ದಾರಿ ನನಗೆ ಎಂದ' ಮಮತಾ ಬ್ಯಾನರ್ಜಿ
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ, ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದದ ಹೋರಾಟದ ಕಾವು ಸ್ವಲ್ಪ ಕಮ್ಮಿಯಾಗುತ್ತಿದೆ. ಕಾಂಗ್ರೆಸ್ ಪಕ್ಷ ಆರಂಭದಲ್ಲಿ ತೋರಿದ ಆಕ್ರಮಣಕಾರಿ ಧೋರಣೆಯ ವೇಗ ಹಿಂದಿನಂತಿಲ್ಲ.
ಎಲ್ಲಾ ವಿರೋಧ ಪಕ್ಷಗಳು ಒಂದಾಗಿ, ಈ ಮಸೂದೆಯ ವಿರುದ್ದ ಹೋರಾಡಬೇಕು ಎನ್ನುವ ಎನ್ಡಿಯೇತರ ಪಕ್ಷಗಳ ನಿಲುವಿನಲ್ಲಿ ಬಿರುಕು ಮೂಡಿಸಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ, ಪಶ್ಚಿಮ ಬಂಗಾಳದ ಫೈರ್ ಬ್ರಾಂಡ್ ಸಿಎಂ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆ.
ವಿವಿಧ ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್ ವಿಚಾರದಲ್ಲೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ದ ಹರಿಹಾಯ್ದಿದಿದ್ದ ಮಮತಾ ಈಗ, ಪೌರತ್ವ ವಿಚಾರದ ಹೋರಾಟದಲ್ಲೂ ನನ್ನ ದಾರಿ ನನಗೆ ಎಂದಿದ್ದಾರೆ.
ಭಾರತ್ ಬಂದ್ ವೇಳೆ ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರಗಳು ನಡೆದಿದ್ದವು. ಇದಕ್ಕೆ, ಮಮತಾ, ನೇರವಾಗಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಕಾರಣ ಎಂದು ದೂರಿದ್ದರು.

ಅಂತರ ಕಾಯ್ದುಕೊಂಡ ತೃಣಮೂಲ ಕಾಂಗ್ರೆಸ್
ಪೌರತ್ವ ತಿದ್ದುಪಡಿ ಮಸೂದೆಯ ಹೋರಾಟದಲ್ಲಿ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸಲು, ಸೋನಿಯಾ ಆದಿಯಾಗಿ ಯುಪಿಎ ಮೈತ್ರಿಕೂಟ ಮತ್ತು ಎಡಪಕ್ಷಗಳ ಹಿರಿಯ ಮುಖಂಡರು ಪ್ರಯತ್ನಿಸಿದ್ದರು. ಆದರೆ, ಪ್ರಮುಖ ಪಾತ್ರ ವಹಿಸಬಲ್ಲ ತೃಣಮೂಲ ಕಾಂಗ್ರೆಸ್ ಇದರಿಂದ ಅಂತರ ಕಾಯ್ದುಕೊಂಡಿದೆ.

ಸೋನಿಯಾ ಕರೆದ ವಿಪಕ್ಷ ನಾಯಕರ ಸಭೆ
ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಆಗಿರುವ ಪೌರತ್ವ ತಿದ್ದುಪಡಿ ಮಸೂದೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಚರ್ಚಿಸಲು, ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ, ವಿಪಕ್ಷಗಳ ಸಭೆಯನ್ನು ದೆಹಲಿಯಲ್ಲಿ, ಇದೇ ಬರುವ ಸೋಮವಾರ (ಜ 13) ಕರೆದಿದ್ದಾರೆ.

ಸೋನಿಯಾ ಕರೆದಿರುವ ಸಭೆಗೆ ಮಮತಾ ಬಹಿಷ್ಕಾರ
ಆದರೆ, ಯುಪಿಎ ಮೈತ್ರಿಕೂಟದಡಿ ತನ್ನ ಪಕ್ಷವನ್ನು ಗುರುತಿಸಿಕೊಳ್ಳಲು ಬಯಸದ ಮಮತಾ ಬ್ಯಾನರ್ಜಿ, ಸೋನಿಯಾ ಕರೆದಿರುವ ಸಭೆಯನ್ನು ಬಹಿಷ್ಖರಿಸುವುದಾಗಿ ಹೇಳಿದ್ದಾರೆ. "ದೆಹಲಿಯಲ್ಲಿ ಕರೆಯಲಾಗಿರುವ ಸಭೆಗೆ ಹಾಜರಾಗುವುದಿಲ್ಲ"ಎಂದು ನೇರವಾಗಿ ಮಮತಾ ಹೇಳಿದ್ದಾರೆ.

24 ಪರಗಣ ಜಿಲ್ಲೆಯಲ್ಲಿ ಭಾರೀ ರ್ಯಾಲಿ
ಸಿಎಎ ವಿರೋಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಭಾರೀ ರ್ಯಾಲಿಯನ್ನು ನಡೆಸಿದ್ದರು. ಪೌರತ್ವ ವಿರುದ್ದದ ಹೋರಾಟದ ವಿಚಾರದಲ್ಲಿ, ತೃಣಮೂಲ ಕಾಂಗ್ರೆಸ್, ತನ್ನ ಹೋರಾಟದ ರೂಪುರೇಷೆಯನ್ನು ತಾನೇ ರೂಪಿಸುತ್ತಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ, ಮಮತಾ ಅಂತರ ಕಾಯ್ದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. (ಚಿತ್ರ:ಪಿಟಿಐ)

ರಾಜಕೀಯ ಅಸ್ತಿತ್ವವಿಲ್ಲದವರು, ಬಂದ್ ಎನ್ನುವ ನಾಟಕವನ್ನು ಮಾಡುತ್ತಾರೆ
"ರಾಜ್ಯಗಳಲ್ಲಿ ರಾಜಕೀಯ ಅಸ್ತಿತ್ವವಿಲ್ಲದವರು, ಬಂದ್ ಎನ್ನುವ ನಾಟಕವನ್ನು ಮಾಡುತ್ತಾ, ಈ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಾಳು ಮಾಡುತ್ತಿದ್ದಾರೆ. "ಭಾರತ್ ಬಂದ್ ಅನ್ನು ಕೇಂದ್ರದ ಆರ್ಥಿಕ ನೀತಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರವ್ಯಾಪಿ ಎನ್ಆರ್ಸಿ ವಿರುದ್ಧ ಕರೆಯಲಾಗಿದೆ, ಆದರೆ ತಮ್ಮ ಪಕ್ಷ ಮತ್ತು ಸರ್ಕಾರವು ಯಾವುದೇ ರೀತಿಯ ಮುಷ್ಕರದ ವಿರುದ್ಧವಾಗಿದೆ" ಎಂದು, ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ದ ಕಿಡಿಕಾರಿದ್ದರು. (ಚಿತ್ರ:ಪಿಟಿಐ)












Click it and Unblock the Notifications