ಹೊಸ ಸರಕಾರ ರಚನೆ ಸಾಧ್ಯತೆ ತಳ್ಳಿ ಹಾಕಿದ ಓಮರ್ ಅಬ್ದುಲ್ಲಾ
ಕಾಶ್ಮೀರ, ಜೂನ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದಿದೆ. ಹೀಗಾಗಿ ಅಲ್ಲಿ ಮೊಹಬೂಬಾ ಮುಫ್ತಿ ಸರಕಾರ ಪತನವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸರಕಾರ ರಚಿಸುವ ಸಂಬಂಧ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಮತ್ತು ಯಾರನ್ನೂ ನಾವು ಸಂಪರ್ಕಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್. ವೋಹ್ರಾ ಅವರನ್ನು ಭೇಟಿಯಾಗಿ ಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಓಮರ್, "ನಾನು ರಾಜ್ಯಪಾಲರನ್ನು ಭೇಟಿಯಾದೆ. 2014ರಲ್ಲಿ ಸರಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ಜನಮತವನ್ನು ಪಡೆದಿರಲಿಲ್ಲ ಎಂದು ಅವರಿಗೆ ಹೇಳಿದೆ. 2018ರಲ್ಲೂ ನಮಗೆ ಜನಮತವಿಲ್ಲ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ನಾವು ಯಾರನ್ನೂ ಸಂಪರ್ಕಿಸುತ್ತಲೂ ಇಲ್ಲ," ಎಂಬುದಾಗಿ ಮಾಹಿತಿ ನೀಡಿದ್ದಾರೆ.
"ಸರಕಾರ ರಚಿಸುವಷ್ಟು ಬಹುಮತ ಯಾವುದೇ ಪಕ್ಷಕ್ಕೆ ಇಲ್ಲ ಎಂಬುದಾಗಿ ನಾನು ರಾಜ್ಯಪಾಲರಿಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅವರು ರಾಜ್ಯಪಾಲರ ಆಳ್ವಿಯನ್ನು ಹೇರಲೇಬೇಕಾಗಿದೆ," ಎಂದು ವಿವರ ನೀಡಿದರು.

ಇದೇ ವೇಳೆ ರಾಜ್ಯಪಾಲರ ಆಳ್ವಿಕೆ ದೀರ್ಘ ಅವಧಿವರೆಗೆ ಇರಬಾರದು ಎಂದು ನಾವು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಇದರಾಚೆಗೆ ಸರಕಾರವನ್ನು ಆಯ್ಕೆ ಮಾಡುವ ಅಧಿಕಾರ ಜನರಿಗಿದೆ. ಹೊಸದಾಗಿ ಚುನಾವಣೆ ನಡೆಯಬೇಕು ಮತ್ತು ನಾವು ಜನರ ಅಭಿಪ್ರಾಯವನ್ನು ಮನ್ನಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications