BSNL ಮುಚ್ಚುವ ಸುದ್ದಿ: ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆ
ನವದೆಹಲಿ, ಜೂನ್ 27: ಸರಕಾರೀ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ (ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್) ಮುಚ್ಚುವ ಸುದ್ದಿಯ ಬಗ್ಗೆ ಕೇಂದ್ರ ದೂರಸಂಪರ್ಕ ಖಾತೆಯ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಈ ಎರಡೂ ಸಂಸ್ಥೆಗಳನ್ನು ಮುಚ್ಚುವ ಯಾವ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ, ಬದಲಿಗೆ, ಸಂಸ್ಥೆಯನ್ನು ಲಾಭದತ್ತ ತರುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಅಹಮದಾಬಾದ್ ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಮತ್ತು ಡಿಲಾಯಟ್ ಸಂಸ್ಥೆಗಳಿಗೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಪುನರ್ ರಚನೆಗೆ ಮತ್ತು ಈ ಕ್ಷೇತ್ರದಲ್ಲಿನ ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆ ನೀಡಲು ಪ್ಲ್ಯಾನ್ ಸಿದ್ದಪಡಿಸಲು ಸೂಚಿಸಲಾಗಿದೆ.

ಈ ಎರಡು ಸಂಸ್ಥೆಗಳು ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಷ್ಟದಲ್ಲಿರುವ ಈ ಎರಡು ಸಂಸ್ಥೆಗಳು ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಸಚಿವರು ಹೇಳಿದ್ದಾರೆ.
ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸಿದ ನಂತರ, ಇತರ ಎಲ್ಲಾ ಖಾಸಗಿ ಸಂಸ್ಥೆಗಳು ಹಿನ್ನಡೆಯನ್ನು ಅನುಭವಿಸುತ್ತಿದೆ. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳಿಗೆ ಹೆಚ್ಚಿನ ಹೊಡೆತ ಬಿದ್ದಿದೆ.
ಲೋಕಸಭೆಯಲ್ಲಿ ಸಲ್ಲಿಸಲಾದ 2018-19ರ ಅಂಕಿಅಂಶಗಳ ಪ್ರಕಾರ, ಬಿಎಸ್ಎನ್ಎಲ್ ಸಂಸ್ಥೆಯ ಮಾರುಕಟ್ಟೆ ಶೇರ್, ಶೇ. 9.63ರಿಂದ 10.72ಕ್ಕೆ ಏರಿದ್ದರೆ, ಎಂಟಿಎನ್ಎಲ್ ಶೇರ್, ಶೇ. 7.37 ರಿಂದ 6.95ಕ್ಕೆ ಇಳಿದಿದೆ.












Click it and Unblock the Notifications