ದ್ರೌಪತಿ ಮೇಲೆ ಕೌರವ ಕಾರ್ಯಕರ್ತರ ಹಲ್ಲೆ - ಆರೋಪ
ಕೋಲ್ಕತ್ತಾ, ಏ.15: ನಟಿ ಕಮ್ ರಾಜಕಾರಣಿ, ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೋಲ್ಕತ್ತಾದಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣಾ ಪ್ರಚಾರಕ್ಕೆ ತೆರಳುವಾಗ ಟಿಎಂಸಿ ಕಾರ್ಯಕರ್ತರು ರೂಪಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಎಲಿಪೋರ್ ಮಾರುಕಟ್ಟೆ ಪ್ರದೇಶದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ರೂಪಾ ಗಂಗೂಲಿ ಮೇಲೆ ಹಲ್ಲೆ ನಡೆಸಿ ಅವರಿದ್ದ ಕಾರು ಕೂಡ ಜಖಂ ಮಾಡಲಾಗಿದೆ. ರೂಪಾ ಗಂಗೂಲಿ ಕಾರಿನ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ.[ರೀಲ್ ನಿಂದ ರಿಯಲ್ ಮಹಾಭಾರತಕ್ಕೆ ರೂಪಾ ಗಂಗೂಲಿ]

ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿಯ ದ್ರೌಪದಿ ಪಾತ್ರದಿಂದ ಜನಪ್ರಿಯರಾದ ರೂಪಾ ಗಂಗೂಲಿ ಅವರು ಈಗ ಬಿಜೆಪಿಗೆ ಸೇರಿ ಪೂರ್ಣ ಪ್ರಮಾಣವಾಗಿ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಗಲಾಟೆ ನಡೆದಿದ್ದೇಕೆ? : ಈ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲು ಅನುಮತಿ ಕೋರಲಾಗಿತ್ತು. ಪೊಲೀಸರು ಕೂಡಾ ಅನುಮತಿ ನೀಡಿದ್ದರು. ಹೀಗಾಗಿ ಅಲ್ಲಿದ್ದ ಟಿಎಂಸಿ ಬಾವುಟವನ್ನು ತೆಗೆದು ಚುನಾವಣಾ ಪ್ರಚಾರ ಕಾರ್ಯಕ್ಕೆ ಮುಂದಾದಾಗ ಟಿಎಂಸಿ ಕಾರ್ಯಕರ್ತರು ನನ್ನ ವಿರುದ್ಧ ತಿರುಗಿಬಿದ್ದರು ಎಂದು ರೂಪಾ ಗಂಗೂಲಿ ಗೋಳು ತೋಡಿಕೊಂಡಿದ್ದಾರೆ. ಚುನಾವಣೆಗೂ ಮುನ್ನ ಸೋಲಿನ ಭೀತಿ ಎದುರಿಸುತ್ತಿರುವ ಟಿಎಂಸಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಕಿಡಿಕಾರಿದ್ದಾರೆ. (ಪಿಟಿಐ)












Click it and Unblock the Notifications