ಕೇರಳ ಪ್ರವಾಹ: ದುಡ್ಡು ಕೊಡ್ತೀವಿ ಅಂತ ಸೌದಿ ದೊರೆಗಳು ಸುಮ್ನೆ ಪಟಾಕಿ ಹಾರ್ಸಿದ್ದಾ?
ಪ್ರವಾಹ ಪೀಡಿತ ಕೇರಳಕ್ಕೆ ಮೋದಿ ಸರಕಾರ ನೀಡಿದ್ದು 600 ಕೋಟಿ, ಯುಎಇ ಸರಕಾರ ಕೊಡೋಕೆ ಮುಂದಾಗಿರುವುದು 700 ಕೋಟಿ. ಒಂದಾ ತಾನು ಕೊಡಬೇಕು, ಇಲ್ಲಾಂದ್ರೆ ಕೊಡೋಕೆ ಬಂದವರನ್ನ ತಡೆಯೋಗೆ ಹೋಗಬಾರದು.. ಹೀಗೆ.. ಸಾಮಾಜಿಕ ತಾಣದಲ್ಲಿ ಮೋದಿ ಸರಕಾರವನ್ನು ಅಣಕವಾಡಿದವರೇ ಹೆಚ್ಚು.
ಅಸಲಿಗೆ, ಯುಎಇ ಸರಕಾರ 700 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದು ಹೌದಾ? ಈ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾಗಿ ಅಲ್ಲಿನ ಸರಕಾರ ಉತ್ತರಿಸಿದೆ. ಕೇರಳಕ್ಕೆ ಎಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಯುಎಇ ರಾಯಭಾರಿ ಅಹಮದ್ ಅಲ್ಬಾನಾ ಹೇಳಿದ್ದಾರೆ.
ಏಳು ನೂರು ಕೋಟಿ ರೂಪಾಯಿಗಳ ನೆರವು ಕೊಡುತ್ತೇವೆಂದು ನಾವು ಹೇಳೇ ಇಲ್ಲ ಎಂದು ಯುಎಇ ಸರಕಾರ ಹೇಳಿದೆ. ಆದರೆ, ಅರಬ್ ಸರಕಾರ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರಕಾರ ಈ ನೆರವನ್ನು ಒಪ್ಪಿಕೊಳ್ಳಬೇಕೆಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ಹೇಳುವ ಮೂಲಕ ತಮ್ಮ ಹಿಂದಿನ ನಿಲುವಿಗೆ ಬದ್ದರಾಗಿದ್ದಾರೆ.

ಶುಕ್ರವಾರ (ಆ 24) ನವದೆಹಲಿಯ ದೂತಾವಾಸ ಕಚೇರಿಯಲ್ಲಿ ಮಾತನಾಡುತ್ತಿದ್ದ ಅಲ್ಬಾನಾ, ಪ್ರವಾಹ ಪೀಡಿತ ಕೇರಳಕ್ಕೆ ನೆರವಿನ ವಿಚಾರದಲ್ಲಿ ನಮ್ಮ ಸರಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಹೊರಬೀಳುತ್ತಿದ್ದಂತೇ ಸ್ಪಷ್ಟನೆ ನೀಡಿದ ಕೇರಳದ ಸಿಎಂ, ಅನಿವಾಸಿ ಉದ್ಯಮಿ ಯೂಸುಫ್ ಆಲಿ ಈ ನೆರವಿನ ಬಗ್ಗೆ ನನಗೆ ತಿಳಿಸಿದ್ದು ಎಂದು ಹೇಳಿದ್ದಾರೆ.
ಯುಎಇ ಸರಕಾರದ ಈ ಭಾರೀ ಮೊತ್ತದ ನೆರವಿನ ಬಗ್ಗೆ ಪತ್ರಿಕಾ ಹೇಳಿಕೆ ನೀಡಬಹುದೇ ಎಂದು ನಾನು ಯೂಸುಫ್ ಆಲಿ ಅವರನ್ನು ಕೇಳಿದ್ದೆ. ಯುಎಇ ಸರಕಾರ ನೆರವು ನೀಡಲು ಮುಂದಾಗಿರುವುದು ಖಚಿತ ಸುದ್ದಿ ಎಂದು ಆಲಿ ಹೇಳಿದ್ದರು ಎಂದು ಪಿಣರಾಯಿ, ದೂತಾವಾಸ ಕಚೇರಿಯ ಹೇಳಿಕೆಯ ನಂತರ ಮಾಧ್ಯಮದರನ್ನು ಉದ್ದೇಶಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.
ಬಕ್ರೀದ್ ಹಬ್ಬದ ಶುಭಾಶಯ ತಿಳಿಸಲು ಸೌದಿ ರಾಜರನ್ನು ಯೂಸುಫ್ ಆಲಿ ಭೇಟಿಯಾಗಲು ಹೋಗಿದ್ದಾಗ, ಅಲ್ಲಿನ ಸರಕಾರವೇ ಈ ನೆರವಿನ ಬಗ್ಗೆ ಅವರಿಗೆ ತಿಳಿಸಿತ್ತು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಜಗತ್ತಿನ ಮೂಲೆ ಮೂಲೆಗಳಿಂದ ನೆರವು ಹರಿದುಬರುತ್ತಿವೆ. ಆದರೆ, ಕೇಂದ್ರ ಸರ್ಕಾರವು ವಿದೇಶಗಳಿಂದ ಬರುವ ಆರ್ಥಿಕ ಸಹಾಯವನ್ನು ಒಪ್ಪಿಕೊಳ್ಳದಿರುವ ದೀರ್ಘಕಾಲದ ನೀತಿಗೆ ಬದ್ಧವಾಗಿರುವ ನಿರ್ಧಾರಕ್ಕೆ ಬಂದಿದೆ. ವಿದೇಶಗಳಿಂದ ಹಣ ಸಹಾಯ ಪಡೆದು ಮುಲಾಜಿಗೆ ಬೀಳುವ ಸನ್ನಿವೇಶವನ್ನು ತಪ್ಪಿಸಿಕೊಳ್ಳುವ ದೀರ್ಘಕಾಲದ ನೀತಿಗೆ ಬದ್ಧವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.












Click it and Unblock the Notifications