Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್
ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಡ್ ಶೋ ವೇಳೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಅವರಿಗೆ ಕ್ಷಣಕಾಲ ಭದ್ರತಾ ಭೀತಿ ಎದುರಾದ ಘಟನೆ ನಡೆದಿದೆ. ಪ್ರಚಾರದ ಹಾದಿಯಲ್ಲಿ ಅಭಿಮಾನಿಯೊಬ್ಬರು ಅವರ ಮೇಲೆ ಹೂವುಗಳನ್ನು ಎಸೆದಾಗ, ಗಾಬರಿಗೊಂಡ ವಿಜಯ್ ತಕ್ಷಣವೇ ಚಲಿಸುತ್ತಿದ್ದ ಸೈಕಲ್ನಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಆತಂಕ ಸೃಷ್ಟಿಸಿದ ಹೂವಿನ ಚೆಂಡು
ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ವಿಜಯ್ ಅವರು ಸೈಕಲ್ ಚಲಾಯಿಸುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಪಕ್ಷದ ಬೆಂಬಲಿಗರೊಬ್ಬರು ಪ್ರೀತಿಯಿಂದ ವಿಜಯ್ ಅವರ ಕಡೆಗೆ ಹೂವಿನ ಚೆಂಡನ್ನು ಎಸೆದರು. ವೇಗವಾಗಿ ತನ್ನತ್ತ ಬಂದ ವಸ್ತುವನ್ನು ಕಂಡು ಅದು ಸ್ಫೋಟಕವಿರಬಹುದು ಎಂದು ತಪ್ಪಾಗಿ ಭಾವಿಸಿದ ವಿಜಯ್, ಯಾವುದೇ ಯೋಚನೆ ಮಾಡದೆ ಸೈಕಲ್ನಿಂದ ಜಿಗಿದು ಹಿಂದೆ ಬರುತ್ತಿದ್ದ ಪ್ರಚಾರದ ವಾಹನದ ಕಡೆಗೆ ಧಾವಿಸಿದರು.

ಕೂಡಲೇ ವಿಜಯ್ ಅವರ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರೆದು ರಕ್ಷಣೆ ಒದಗಿಸಿದರು. ಆ ವಸ್ತು ನೆಲಕ್ಕೆ ಬಿದ್ದ ನಂತರ ಅದು ಬಾಂಬ್ ಅಲ್ಲ, ಹೂವಿನ ಚೆಂಡು ಎಂದು ತಿಳಿದುಬಂದಿದೆ. ಈ ಆಕಸ್ಮಿಕ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಜಯ್ ಅವರ ಸಮಯಪ್ರಜ್ಞೆ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು "ವಿಜಯ್ ಅವರು ಅದನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿಹೋದರು" ಎಂದು ಲೇವಡಿ ಮಾಡುತ್ತಿದ್ದರೆ, ಇನ್ನೂ ಕೆಲವರು ಸೂಪರ್ಸ್ಟಾರ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜನದಟ್ಟಣೆ ಇರುವ ಇಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮ ಇದು ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ.
ವಿಜಯ್ ಅವರ ಚುನಾವಣಾ ಪ್ರಚಾರದ ರ್ಯಾಲಿಗಳಲ್ಲಿ ಭದ್ರತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಸಾರ್ವಜನಿಕ ಸಭೆಗಳಲ್ಲಿ ಕಿಕ್ಕಿರಿದು ಸೇರುವ ಅಭಿಮಾನಿಗಳನ್ನು ನಿಯಂತ್ರಿಸುವುದು ಮತ್ತು ವಿಜಯ್ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಭದ್ರತಾ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿಂದಿನ ಕೆಲವು ಕಾರ್ಯಕ್ರಮಗಳಲ್ಲೂ ಇಂತಹ ಸಣ್ಣಪುಟ್ಟ ಗೊಂದಲಗಳು ಉಂಟಾಗಿದ್ದವು.
ಕನ್ಯಾಕುಮಾರಿಯಲ್ಲಿ ನಡೆದ ರೋಡ್ ಶೋನಲ್ಲಿ ವಿಜಯ್ ಅವರು ತಮ್ಮ ಪಕ್ಷದ ಆಡಳಿತ ವೈಖರಿಯ ಬಗ್ಗೆ ಮಹತ್ವದ ಭರವಸೆಗಳನ್ನು ನೀಡಿದರು. ಪ್ರಮುಖವಾಗಿ ಕೃತಕ ಬುದ್ಧಿಮತ್ತೆಗಾಗಿ (ಎಐ) ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವುದು ಮತ್ತು ಡಿಎಂಕೆ ಪಕ್ಷಕ್ಕೆ ತಾವು ಪ್ರಬಲ ಪೈಪೋಟಿ ನೀಡುವುದಾಗಿ ಅವರು ಘೋಷಿಸಿದ್ದಾರೆ. ಏಪ್ರಿಲ್ 23 ರಂದು ನಡೆಯಲಿರುವ ಚುನಾವಣೆಯ ಮೇಲೆ ಈ ಘಟನೆಯು ಯಾವುದೇ ಪ್ರಭಾವ ಬೀರಲಿದೆಯೇ ಎಂದು ಕಾದು ನೋಡಬೇಕಿದೆ.
Dei pudinga da avara…
— TVK Vijay Euphoria (@TVK_Euphoria) April 12, 2026
Vitta cycle laye chennai ponaalum poiruvaaru 😂 pic.twitter.com/O5NKc1tD3H












Click it and Unblock the Notifications