ಗುಜರಾತ್: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಮೊದಲ ಬಲಿ, ಮಹಿಳೆ ಸಾವು
ಗಾಂಧಿನಗರ, ನವೆಂಬರ್ 8: ಗುಜರಾತ್ನ ಆನಂದ್ ಬಳಿ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹರಿದು 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ಗುಜರಾತ್ನ ಆನಂದ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರನ್ನು ಬಲಿಯಾದವರನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಎಮ್ಮೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್; ಮುಂದೇನಾಯ್ತು ಎಮ್ಮೆಯ ಗತಿ, ರೈಲಿನ ಸ್ಥಿತಿ!?
ಅಹಮದಾಬಾದ್ನ ನಿವಾಸಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್, ಆನಂದ್ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ವೇಳೆ ಆನಂದ್ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ಸಂಜೆ 4.37 ಕ್ಕೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರೈಲು ಗಾಂಧಿನಗರ ರಾಜಧಾನಿಯಿಂದ ಮುಂಬೈ ಸೆಂಟ್ರಲ್ಗೆ ತೆರಳುತ್ತಿದ್ದು, ಇದು ಆನಂದ್ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಒಂದು ತಿಂಗಳಿನಲ್ಲಿ ಮೂರು ಬಾರಿ ವಂದೇ ಭಾರತ್ ಅಪಘಾತ
ಸೆಪ್ಟೆಂಬರ್ 30 ರಂದು ಗಾಂಧಿನಗರ ರಾಜಧಾನಿ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲಿನ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಆದರೆ ಅಂದಿನಿಂದ ವಂದೇ ಭಾರತ್ ರೈಲು ಹಲವು ಬಾರಿ ಅಪಘಾತದ ವಿಚಾರಕ್ಕೆ ಸುದ್ದಿ ಮಾಡಿದೆ. ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ ಮೂರು ಬಾರಿ ವಂದೇ ಭಾರತ್ ರೈಲು ಜಾನುವಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆಗಳು ವರದಿಯಾಗಿವೆ.
ವಂದೇ ಭಾರತ್ ರೈಲು ಅಪಘಾತ ಯಾವಾಗ ಆಗಿದೆ?
* ಅಕ್ಟೋಬರ್ 6 ರಂದು ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ನಾಲ್ಕು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, ಅದರ ಮುಂಭಾಗದ ಫಲಕಕ್ಕೆ ಹಾನಿಯಾಗಿತ್ತು.
* ಮರುದಿನವೇ ಅಂದರೆ ಅಕ್ಟೋಬರ್ 7ರಂದು ಇದೇ ಆನಂದ್ ರೈಲು ನಿಲ್ದಾಣದ ಬಳಿಯೇ ಹಸುವಿಗೆ ಡಿಕ್ಕಿ ಹೊಡೆದಿತ್ತು.
* ಅಂಥದ್ದೇ ಮತ್ತೊಂದು ಘಟನೆಯು ಗುಜರಾತ್ನ ಅತುಲ್ ರೈಲು ನಿಲ್ದಾಣದ ಬಳಿ ನಡೆದಿದ್ದು, ಇಲ್ಲಿ ರೈಲು ಗೂಳಿಗೆ ಡಿಕ್ಕಿ ಹೊಡೆದಿತ್ತು.
ವಂದೇ ಭಾರತ್ ರೈಲಿನ ದುರಸ್ತಿ ಹೇಗೆ ನಡೆಯುತ್ತೆ?
ಮುಂಬೈ ಸೆಂಟ್ರಲ್ ಡಿಪೋದಲ್ಲಿ ಮುಂಭಾಗದ ಕೋಚ್ನ ನೋಸ್ ಕೋನ್ ಕವರ್ ಅನ್ನು ಹೊಸದರೊಂದಿಗೆ ಬದಲಾಯಿಸಲಾಯಿತು. ಯಾವುದೇ ಹೆಚ್ಚುವರಿ ತೊಂದರೆ ಇಲ್ಲದೆ ರೈಲು ಮತ್ತೆ ಸೇವೆ ಪ್ರಾರಂಭಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ," ಎಂದು ವೆಸ್ಟರ್ನ್ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದರು.
ಗಾಂಧಿನಗರ-ಮುಂಬೈ ರೈಲು ವಂದೇ ಭಾರತ್ ಸರಣಿಯಲ್ಲಿ ಮೂರನೇಯದ್ದು!
ಕಳೆದ ಸೆಪ್ಟೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಅಂದಿನಿಂದ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಸಂಚಾರ ಶುರುವಾಯಿತು. ಈ ಮಾರ್ಗದಲ್ಲಿ ಆರಂಭಿಸಿರುವ ರೈಲು ವಂದೇ ಭಾರತ್ ಸರಣಿಯ ಮೂರನೇ ರೈಲಾಗಿದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅದೇ ರೈಲಿನಲ್ಲಿ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣಕ್ಕೆ ಪ್ರಯಾಣಿಸಿದ್ದರು.