Vande Bharat Express: ಇನ್ಮುಂದೆ ಈ ರೈಲು ಪ್ರಯಾಣಿಕರಿಗೆ 500ml ಮಾತ್ರ ಉಚಿತ ನೀರು.!-ಕಾರಣ ಏನು?
ಐಷಾರಾಮಿ, ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಮೊದಲಿಗೆ ಭಾರತೀಯ ರೈಲ್ವೆಯಿಂದ 1 ಲೀಟರ್ ನೀರಿನ ಬಾಟಲಿಯನ್ನು ಕೊಡಲಾಗುತ್ತಿತ್ತು. ಇದೀಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ನೀರಿನ ಹಾಹಾಕಾರವೂ ಶುರುವಾಗಿದೆ. ಆದ್ದರಿಂದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಹಾಗಾದರೆ ಮಾಹಿತಿ ಇಲ್ಲಿದೆ.
ರಾಜಧಾನಿ, ಶತಾಬ್ದಿ, ವಂದೇ ಭಾರತ್ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ 1 ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಇದೀಗ ರೈಲ್ವೇ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ 500 ಮಿಲಿ ಬಾಟಲಿಯನ್ನು ನೀಡಲು ನಿರ್ಧರಿಸಿದೆ.

ರೈಲುಗಳಲ್ಲಿ ಕುಡಿಯುವ ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಪ್ರತಿ ಪ್ರಯಾಣಿಕರಿಗೆ 500 ಮಿಲಿಯ ಒಂದು ರೈಲ್ ನೀರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಯನ್ನು ನೀಡಲಾಗುವುದು ಎಂದು ರೈಲ್ವೆ ನಿರ್ಧಾರ ಮಾಡಿದೆ.
ಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯ ಇರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದ್ದು, ಇದಕ್ಕೆ ಪ್ರಯಾಣಿಕರಿಂದ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದಾಗಿದೆ.
ವಂದೇ ಭಾರತ್ ಪ್ರಾರಂಭವಾಗಿದ್ದು ಯಾವಾಗ?: 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದು, ಪ್ರಸ್ತುತ ದೇಶದ 40ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 15, 2019ರಂದು, ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರು ಮೊದಲ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಈ ರೈಲುಗಳು ಅತೀ ವೇಗದಲ್ಲಿ ಚಲಿಸುತ್ತವೆ ಮತ್ತು ವೈಫೈ ಸಂಪರ್ಕ ಸೇರಿದಂತೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.
ವಿಶೇಷ ರೈಲು ಬೋಗಿಗಳ ಹೆಚ್ಚಳ
ಇದೀಗ ಬೇಸಿಗೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರುಗಳಿಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಹೆಚ್ಚಿನವರು ರೈಲಿನಲ್ಲಿಯೇ ಪ್ರಯಾಣ ಮಾಡುವವರೇ ಆಗಿರುತ್ತಾರೆ. ಈ ದೃಷ್ಟಿಯಿಂದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಈ ಮಾರ್ಗಗಳಲ್ಲಿ ಸಂಚರಿಸಲಿರುವ ವಿಶೇಷ ರೈಲುಗಳ ಬೋಗಿಗಳನ್ನು ಹೆಚ್ಚಳ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನಿಂದ ವಿಶಾಖಪಟ್ಟಣಂ ಹಾಗೂ ಹುಬ್ಬಳ್ಳಿಯಿಂದ ಅಹಮದಾಬಾದ್ ನಡುವೆ ಈ ವಿಶೇಷ ರೈಲುಗಳು ಸಂಚಾರ ಮಾಡಲಿದೆ. ಇವುಗಳ ಸಂಚಾರದ ದಿನ, ಸಮಯದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅಲ್ಲದೆ, ಕೆಲವು ಬೇಸಿಗೆ ರೈಲುಗಳ ಅವಧಿಯನ್ನು ವಿಸ್ತರಣೆ ಕೂಡ ಮಾಡಲಾಗಿದೆ. ಕರ್ನಾಟಕದ ಹಲವು ರೈಲುಗಳಿಗೆ ಬೇಡಿಕೆ ಹೆಚ್ಚು ಇರುವ ಹಿನ್ನೆಲೆ ಮೈಸೂರು-ಬೆಳಗಾವಿ, ಮೈಸೂರು-ಬಾಗಲಕೋಟೆ ಹಾಗೂ ಮೈಸೂರು-ಚಾಮರಾಜನಗರ ಸೇರಿ 6 ರೈಲುಗಳಿಗೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ.
* ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (08549/08550) ರೈಲು ಏಪ್ರಿಲ್ 27ರಿಂದ ಜೂನ್ 29ರವರೆಗೆ ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು ನಡುವೆ 10 ಟ್ರಿಪ್ ಸಂಚಾರ ಮಾಡಲಿದೆ. ರೈಲು ಸಂಖ್ಯೆ 08549 ವಿಶಾಖಪಟ್ಟಣಂ ನಿಲ್ದಾಣದಿಂದ ಮಧ್ಯಾಹ್ನ 13:15 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 07:30ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
* ರೈಲು ಸಂಖ್ಯೆ 08550 ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಬೆಳಿಗ್ಗೆ 08:50 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 03:10ಕ್ಕೆ ವಿಶಾಖಪಟ್ಟಣಂ ನಿಲ್ದಾಣ ತಲುಪಲಿದೆ. ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ದುವ್ವಾಡ, ರಾಜಮಂಡ್ರಿ, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟ, ಕಟಪಾಡಿ, ಜೋಲಾರ್ ಪೆಟ್ಟೈ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿ-ತ್ರಿ ಟೈಯರ್, 11 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್ ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
* ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (07311/07312) ರೈಲು ಏಪ್ರಿಲ್ 28ರಿಂದ ಮೇ 26ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಅಹಮದಾಬಾದ್ ನಡುವೆ 5 ಟ್ರಿಪ್ ಸಂಚಾರ ಮಾಡಲಿದೆ ರೈಲು ಸಂಖ್ಯೆ 07311 ಹುಬ್ಬಳ್ಳಿಯಿಂದ ಪ್ರತಿ ಭಾನುವಾರ ಸಾಯಂಕಾಲ 7:30ಕ್ಕೆ ಹೊರಟು, ಮರುದಿನ ಸಾಯಂಕಾಲ 7:20ಕ್ಕೆ ಅಹಮದಾಬಾದ್ ನಿಲ್ದಾಣಕ್ಕೆ ಆಗಮಸಲಿದೆ.
* ರೈಲು ಸಂಖ್ಯೆ 07312 ಅಹಮದಾಬಾದ್ ನಿಲ್ದಾಣದಿಂದ ಪ್ರತಿ ಸೋಮವಾರ ರಾತ್ರಿ 9:25ಕ್ಕೆ ಹೊರಟು, ಮರುದಿನ ಸಾಯಂಕಾಲ 7:45ಕ್ಕೆ ಎಸ್ಎಸ್ಎಸ್ ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ಜಂ. ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿ ತ್ರಿ ಟೈಯರ್, 8 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಬ್ರೇಕ್ ವ್ಯಾನ್/ಲಗೇಜ್ & ವಿಕಲಚೇತನ ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ.
ಆರು ರೈಲುಗಳಿಗೆ ಹೆಚ್ಚುವರಿ ಬೋಗಿ: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನಿಗದಿತ ದಿನಾಂಕಗಳಂದು ಈ ಕೆಳಗಿನ ಆರು ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಯನ್ನು ಅಳವಡಿಕೆ ಮಾಡಲಾಗುತ್ತದೆ. ಮಾಹಿತಿ ಕೆಳಗಡೆ ನೀಡಲಾಗಿದೆ ಗಮನಿಸಿ.
ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ
* ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸ್ ಪ್ರೆಸ್ ರೈಲು ಏಪ್ರಿಲ್ 24 ರಿಂದ ಮೇ 1ರವರೆಗೆ
* ರೈಲು ಸಂಖ್ಯೆ 06233 ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ
* ರೈಲು ಸಂಖ್ಯೆ 06234 ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ
* ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ
* ರೈಲು ಸಂಖ್ಯೆ17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 26 ರಿಂದ ಮೇ 3ರವರೆಗೆ
* ರೈಲು ಸಂಖ್ಯೆ17301 ಮೈಸೂರು-ಬೆಳಗಾವಿ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 27 ರಿಂದ ಮೇ 4 ರವರೆಗೆ.
ಒಟ್ಟಿನಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಬರುತ್ತಿದೆ. ಹಾಗೆಯೇ ಇದೀಗ ಮತ್ತೊಂದು ಸಿಹಿಸುದ್ದಿಯನ್ನು ನೀಡಿದ್ದು, ರಾಜ್ಯದ ಈ 6 ರೈಲುಗಳ ಬೋಗಿಗಳನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.












Click it and Unblock the Notifications