ಉತ್ತರಾಖಂಡ್ ಪ್ರವಾಹ: ಮತ್ತೆ ಮೂವರ ಶವ ಪತ್ತೆ, ಮೃತರ ಸಂಖ್ಯೆ 53ಕ್ಕೆ ಏರಿಕೆ
ಡೆಹ್ರಾಡೂನ್,ಫಡಬ್ರವರಿ 15:ಉತ್ತರಾಖಂಡ್ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಇಂದು ಮತ್ತೆ ಮೂವರ ಶವ ಪತ್ತೆಯಾಗಿದೆ.ಅವಶೇಷಗಳ ಅಡಿಯಿಂದ ಸೋಮವಾರ ಮೂರು ದೇಹಗಳನ್ನು ಹೊರತೆಗೆಯಲಾಗಿದೆ.ಚಮೋಲಿ ಜಿಲ್ಲೆಯ ಆದಿತಿ ಸುರಂಗಹಾಗೂ ಎನ್ಟಿಪಿಸಿಯ ತಪೋವನ ವಿಷ್ಣುಗಢಯೋಜನೆ ಪ್ರದೇಶದಿಂದ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.
ತಪೋವನ ಎಸ್ಎಫ್ಟಿಯಲ್ಲಿ ಶನಿವಾರ ಕೊರೆಯುವ ಕಾಮಗಾರಿ ಪೂರ್ಣಗೊಳಿಸಲಾಗಿತ್ತು, ಅಲ್ಲದೆ ಒಳಗೆ ಸಿಲುಕಿದವರ ಪತ್ತೆಗಾಗಿ ಕ್ಯಾಮರಾ ಅಳವಡಿಸುವ ಪ್ರಯತ್ನವು ಕೆಸರು ತುಂಬಿದ ನೀರಿನಿಂದಾಗಿ ವಿಫಲವಾಗಿತ್ತು.

ಕೆಸರು ತುಂಬಿದ ಸುರಂಗ
ಕೆಸರು ತುಂಬಿದ ಸುರಂಗದಲ್ಲೀಗ ಉತ್ಖನನ ಮಾಡುವ ಯಂತ್ರದಿಂದ ಮಾತ್ರ ರಕ್ಷಣಾಕಾರ್ಯಾಚರಣೆ ನಡೆಸಲು ಸಾಧ್ಯ, ಕ್ಯಾಮರಾ ಅಥವಾ ಪೈಪ್ ಲಗತ್ತಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ವಾತಿ ಮಾಹಿತಿ ನೀಡಿದ್ದಾರೆ.

ಭಾನುವಾರ 6 ದೇಹಗಳು ಪತ್ತೆಯಾಗಿದ್ದವು
ವಾರದ ಹಿಂದೆ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ನಿನ್ನೆ ಭಾನುವಾರ ತಪೋವನ್ ಸುರಂಗದಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ. ರೈನಿ ಗ್ರಾಮದಲ್ಲಿ ಏಳು ಮಂದಿಯ ಶವ ಸಿಕ್ಕಿವೆ. ಇದರೊಂದಿಗೆ ಈವರೆಗೆ ಸಿಕ್ಕಿರುವ ಮೃತ ದೇಹಗಳ ಸಂಖ್ಯೆ 53ಕ್ಕೆ ಏರಿದೆ. ಇವುಗಳ ಪೈಕಿ 24 ಮಂದಿಯನ್ನ ಗುರುತು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಇವರು ಬದುಕಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ. ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ
ಕಳೆದ ಭಾನುವಾರದಂದು ಚಮೋಲಿ ಜಿಲ್ಲೆಯಲ್ಲಿ ಧೌಲಿಗಂಗಾ ನದಿಯ ಹಿಮಬಂಡೆ ಸ್ಫೋಟಗೊಂಡ ಪರಿಣಾಮ ಗಂಗಾ ನದಿಯ ಉಪನದಿಗಳಾದ ಧೌಲಿಗಂಗಾ ಮತ್ತು ಅಲಕನಂದ ನೀರು ಉಕ್ಕೇರಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ನದಿ ಪಾತ್ರದ ಅನೇಕ ಪ್ರದೇಶಗಳಿಗೆ ಪ್ರವಾಹ ನುಗ್ಗಿತ್ತು. ಸಾಧ್ಯವಾದಷ್ಟೂ ಬೇಗ ನದಿ ಪಾತ್ರದ ಪ್ರದೇಶಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ಆಗಲಿಲ್ಲ. ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮುಖ್ಯಮಂತ್ರಿಗಳು 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ವಿದ್ಯುತ್ ಯೋಜನೆಯೇ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ
ತಪೋವನ್ನಲ್ಲಿ ಎನ್ಟಿಪಿಸಿಯಿಂದ 520 ಮೆಗಾ ವ್ಯಾಟ್ನ ಬೃಹತ್ ವಿದ್ಯುತ್ ಯೋಜನೆ ನಡೆಯುತ್ತಿತ್ತು. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇಲ್ಲಿ ಮಡುಗಟ್ಟಿರುವ ಕೆಸರನ್ನ ಹೊರಗೆಳೆಯುವಾಗ ನಿನ್ನೆ ಹಲವು ಶವಗಳು ಸಿಕ್ಕಿವೆ. ಇಲ್ಲಿ ಇನ್ನೂ 39 ಮಂದಿ ಸಿಲುಕಿರುವ ಶಂಕೆ ಇದೆ. ಕೆಸರು ಸಂಪೂರ್ಣವಾಗಿ ಹೊರಹಾಕಿದ ಬಳಿಕ ಚಿತ್ರಣ ಸ್ಪಷ್ಟವಾಗಲಿದೆ.

ಕೆಸರು ಹೊರಹಾಕಲಾಗುತ್ತಿದೆ
ಕೆಸರು ಹೊರಹಾಕಲು ವಿವಿಧ ತಂತ್ರಗಳನ್ನ ಉಪಯೋಗಿಸಲಾಗುತ್ತಿದೆ. ಸುರಂಗದ ಮೊದಲ 125 ಮೀಟರ್ನಷ್ಟು ದೂರದ ಪ್ರದೇಶದಲ್ಲಿ ಜೆಸಿಬಿ ಮೂಲಕ ಕೆಸರು ಹೊರಹಾಕಲಾಗಿದೆ. ಆದರೆ, ಆ ಬಳಿಕ ಸುರಂಗ ಕಿರಿದಾಗುತ್ತಿರುವುದರಿಂದ ಸಣ್ಣ ಯಂತ್ರಗಳ ಮೂಲಕ ಕೆಸರು ಹೊರಹಾಕಲಾಗುತ್ತಿದೆ. ಈ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.












Click it and Unblock the Notifications