ಉತ್ತರಾಖಂಡ ಚುನಾವಣೆ: ಉಚ್ಛಾಟಿತ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿಜೆಪಿ ಸೇರ್ಪಡೆ ಸಾಧ್ಯತೆ
ಡೆಹ್ರಾಡೂನ್, ಜನವರಿ 27: ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದ್ದು, ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಅವರು ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಬುಧವಾರ ಕಿಶೋರ್ ಉಪಾಧ್ಯಾಯ ಅವರನ್ನು ತನ್ನ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ವಜಾಗೊಳಿಸಿದ್ದು, ಅವರು "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ' ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದೇವೆಂದರ್ ಯಾದವ್ ಅವರು ಕಿಶೋರ್ ಉಪಾಧ್ಯಾಯ ಅವರಿಗೆ ಬರೆದ ಪತ್ರದಲ್ಲಿ, ಹಲವು ಎಚ್ಚರಿಕೆಗಳ ನಂತರ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ನ ಎಲ್ಲಾ ಸ್ಥಾನಗಳಿಂದ ಉಪಾಧ್ಯಾಯ ಅವರನ್ನು ತೆಗೆದುಹಾಕಿದ್ದರಿಂದ ವಜಾ ಕ್ರಮವನ್ನು ನಿರೀಕ್ಷಿಸಲಾಗಿತ್ತು. ಉಪಾಧ್ಯಾಯ ಅವರಿಗೆ ಬರೆದ ಪತ್ರದಲ್ಲಿ ದೇವೇಂದ್ರ ಯಾದವ್ ಅವರು ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ "ಕೈಜೋಡಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

"ಬಿಜೆಪಿ ನಾಯಕತ್ವದ ದುರಾಡಳಿತ ಮತ್ತು ಸರ್ವಾಂಗೀಣ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಕೋಪವಿದೆ. ಸವಾಲನ್ನು ಎದುರಿಸಲು ಮತ್ತು ಉತ್ತರಾಖಂಡದ ದೇವಭೂಮಿಗೆ ಅದರ ಜನರೊಂದಿಗೆ ಸೇವೆ ಸಲ್ಲಿಸುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಹೋರಾಟವನ್ನು ದುರ್ಬಲಗೊಳಿಸುವ ಮತ್ತು ಜನರ ಉದ್ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ನೀವು ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ನಡೆಸುತ್ತಿದ್ದೀರಿ ಎಂದು ದೇವೆಂದರ್ ಯಾದವ್ ಹೇಳಿದ್ದಾರೆ.
2002 ಮತ್ತು 2007ರಲ್ಲಿ ತೆಹ್ರಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ಮಾಜಿ ಶಾಸಕ, ಕಿಶೋರ್ ಉಪಾಧ್ಯಾಯ ಅವರು 2014ರಿಂದ 2017 ರವರೆಗೆ ಕಾಂಗ್ರೆಸ್ನ ಉತ್ತರಾಖಂಡ ಘಟಕದ ಅಧ್ಯಕ್ಷರಾಗಿದ್ದರು. ಈ ತಿಂಗಳ ಆರಂಭದಲ್ಲಿ ಅವರು ಉತ್ತರಾಖಂಡಕ್ಕೆ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದರು. ಇದು ಉಪಾಧ್ಯಾಯ ಬಿಜೆಪಿ ಪಕ್ಷಕ್ಕೆ ಸೇರುವ ಸಾಧ್ಯತೆಯ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿತ್ತು.

ರಿತು ಭೂಷಣ್ ಖಂಡೂರಿ ಕಣಕ್ಕೆ
ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬಿಜೆಪಿ ಬುಧವಾರ ಮತ್ತೆ ಒಂಬತ್ತು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಖಂಡೂರಿ ಅವರ ಪುತ್ರಿ ರಿತು ಭೂಷಣ್ ಖಂಡೂರಿ ಅವರನ್ನು 2017ರಲ್ಲಿ ಬಿಜೆಪಿಯಿಂದ ಹರಕ್ ಸಿಂಗ್ ರಾವತ್ ಗೆದ್ದಿದ್ದ ಕೋಟ್ದ್ವಾರ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಸದ್ಯ ಹರಕ್ ಸಿಂಗ್ ರಾವತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
59 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಿತು ಭೂಷಣ್ ಖಂಡೂರಿ ಅವರ ಹೆಸರು ಇರಲಿಲ್ಲ, ಕಳೆದ ಚುನಾವಣೆಯಲ್ಲಿ ಅವರು ಗೆದ್ದಿದ್ದ ಕ್ಷೇತ್ರವಾದ ಯಮಕೇಶ್ವರದಿಂದ ಪಕ್ಷವು ಬೇರೆ ನಾಯಕನಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ರಿತು ಭೂಷಣ್ ಖಂಡೂರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಊಹಾಪೋಹಗಳಿಗೆ ಶಕ್ತಿ ತುಂಬಿತ್ತು. ಆದರೆ ಕ್ಷೇತ್ರ ಬದಲಾವಣೆ ಮಾಡಲಾಗಿದೆ.
ಒಂದೇ ಹಂತದಲ್ಲಿ ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.
Recommended Video
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.












Click it and Unblock the Notifications