ಅಖಿಲೇಶ್ ಯಾದವ್ ಹೇಳಿಕೆಗೆ ನಗಬೇಕೋ, ಅಳಬೇಕೋ?
ನವದೆಹಲಿ, ಜೂ 13 (ಪಿಟಿಐ): ಸರಣಿ ಅತ್ಯಾಚಾರ ಪ್ರಕರಣ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆ ನೆನೆಗುದಿಗೆ ಬಿದ್ದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದರೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್ಯದಲ್ಲಿ ಕಾನೂನು ಹದೆಗೆಟ್ಟಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಅಖಿಲೇಶ್ ಮುತ್ತಿನಂತ ಮಾತನ್ನು ಉದುರಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಅದಕ್ಕಾಗಿಯೇ, ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆಂದು ಅಖಿಲೇಶ್ ತಮ್ಮ ಸರಕಾರದ ಕಾರ್ಯವೈಖರಿಯನ್ನು ತಾವೇ ಬೆನ್ನು ತಟ್ಟಿಕೊಂಡಿದ್ದಾರೆ. (ರೇಪ್ ಮಾಡಿ ಯುವತಿಯರನ್ನು ಮರಕ್ಕೆ ನೇಣುಹಾಕಿದರು)

ದೆಹಲಿಯಲ್ಲಿ ಗುರುವಾರ (ಜೂ 12) ಉತ್ತರಪ್ರದೇಶ ಸರಕಾರ ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅಖಿಲೇಶ್, ಯಾವುದೇ ಮುಖ್ಯಮಂತ್ರಿಗಳಿಗೆ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮೊದಲ ಆದ್ಯತೆ. ನಮ್ಮ ಸರಕಾರ ಕೂಡಾ ಅದಕ್ಕೆ ಪ್ರಾಮುಖ್ಯತೆ ನೀಡಿದೆ ಎಂದಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ವ್ಯವಸ್ಥೆ ಕೂಡಾ ನಿಯಂತ್ರಣದಲ್ಲಿದೆ. ನಾವು ಸರಿಯಾಗಿ ವಿದ್ಯುತ್ ನೀಡದೇ ಇದ್ದಲ್ಲಿ ಇಷ್ಟು ಪ್ರಮಾಣದಲ್ಲಿ ಉದ್ಯಮಗಳು ನಮ್ಮ ರಾಜ್ಯಕ್ಕೆ ಹರಿದು ಬರುತ್ತಿರಲಿಲ್ಲ. ಅಗಾಧ ಪ್ರಮಾಣದಲ್ಲಿ ಉದ್ಯಮಿಗಳು ಉತ್ತರ ಪ್ರದೇಶದ ಮೇಲೆ ಆಸಕ್ತಿ ತೋರುತ್ತಿರುವುದು ನಮ್ಮ ಕೆಲಸವನ್ನು ಪ್ರತ್ಯಕ್ಷವಾಗಿ ಬೆನ್ನುತಟ್ಟಿದಂತೆ ಎಂದು ಅಖಿಲೇಶ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಕೈಗಾರಿಕಾ ಕಾನೂನು ಇತರ ರಾಜ್ಯಗಳಿಗಿಂತ ಉದ್ಯಮ ಸ್ನೇಹಿಯಾಗಿದೆ ಮತ್ತು ಈಗ ಉದ್ಯಮಿಗಳು ಬಂಡವಾಳ ಹೂಡಲು ರಾಜ್ಯದಲ್ಲಿ ಮುಂದೆ ಬರುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಹೀಗೇ ಮುಂದುವರಿಯಲಿದೆ ಎಂದು ಅಖಿಲೇಶ್ ನುಡಿದಿದ್ದಾರೆ.
ಈ ಸಮಾವೇಶದಲ್ಲಿ ಎಸ್ಸೆಲ್ ಗ್ರೂಪ್ 20 ಸಾವಿರ ಕೋಟಿ ಬಂಡವಾಳ ಹೂಡಲು ಉತ್ತರಪ್ರದೇಶ ಸರಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ರಿಲಯನ್ಸ್ ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಚಿಂತನೆ ನಡೆಸಿದೆ. ಐಟಿಸಿ, ಅಮಿತಿ, ಫೋರ್ಟಿಸ್ ಸೋನಲಿಕಾ ಸಂಸ್ಥೆಗಳೂ ಸರಕಾರದ ಜೊತೆ ಒಡಂಬಡಿಕೆ ಪತ್ರಕ್ಕೆ ಸಹಿಹಾಕಿವೆ.












Click it and Unblock the Notifications