ಗುಜರಾತ್ ಚುನಾವಣೆಯಲ್ಲಿ ಯು.ಟಿ.ಖಾದರ್ ಹವಾ
Recommended Video

ಗುಜರಾತ್, ಡಿಸೆಂಬರ್ 08 : ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್ ಅವರು ಗುಜರಾತ್ ನ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ, ಹೈಕಮಾಂಡ್ ಆದೇಶದಂತೆ ಗುಜರಾತ್ ನಲ್ಲಿ ಕಾಂಗ್ರೆಸ್ ಪರ ಬೂತ್ ಮಟ್ಟದ ಪ್ರಚಾರ ಕಾರ್ಯದಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಂಡಿದ್ದಾರೆ ಯು.ಟಿ.ಖಾದರ್.
ಕಳೆದ ಒಂದು ವಾರದಿಂದಲೂ ಗುಜರಾತ್ ನಲ್ಲಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿರುವ ಕರ್ನಾಟಕ ರಾಜ್ಯ ಸಚಿವ ಯು.ಟಿ.ಖಾದರ್ ಅವರು ದೊಡ್ಡ ರ್ಯಾಲಿಗಳಿಗೆ ಬದಲಾಗಿ ಬೂತ್ ಮಟ್ಟದ, ತಾಲ್ಲೂಕು ಮಟ್ಟದ ಸಭೆಗಳು, ಪ್ರಚಾರ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಆಜ್ಞೆ ಮೇರೆಗೆ ಗುಜರಾತ್ ಗೆ ತೆರಳಿರುವ ಅವರು ತಮಗೆ ವಹಿಸಿರುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ವಿಶೇಷವಾಗಿ ಮುಸ್ಲೀಮರು ಹೆಚ್ಚಿಗಿರುವ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿರುವ ಯು.ಟಿ.ಖಾದರ್ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಇಂದಿರಾ ಕ್ಯಾಂಟೀನ್, ಶಾದಿಭಾಗ್ಯ ಮುಂತಾದ ಯೋಜನೆಗಳನ್ನು ಅಲ್ಲಿನ ಸ್ಥಳೀಯರ ಗಮನಕ್ಕೆ ತಂದು ಕಾಂಗ್ರೆಸ್ಗೆ ಮತ ನೀಡುವಂತೆ ಕೋರುತ್ತಿದ್ದಾರೆ.
ಯುವಕರಾಗಿರುವ ಯು.ಟಿ.ಖಾದರ್ ಅವರು ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವ ಕಾರಣ ಹೈಕಮಾಂಡ್ ಅವರನ್ನು ಚುನಾವಣಾ ಪ್ರಚಾರಕ್ಕೆ ಆಯ್ಕೆ ಮಾಡಿದೆ ಹಾಗೂ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯುವ ಉದ್ದೇಶವೂ ಇದರ ಹಿಂದಿದೆ.
ಹೈಕಮಾಂಡ್ ಆದೇಶವನ್ನು ಪಾಲಿಸುತ್ತಿರುವ ಯು.ಟಿ.ಖಾದರ್ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವುದರಿಂದ ರಾಹುಲ್ ಅವರಿಗೆ ಇನ್ನಷ್ಟು ಹತ್ತಿರವಾದಂತಾಗಿದೆ. ಎಐಸಿಸಿ ಅಧ್ಯಕ್ಷ ಗಾದಿಗೆ ಏರಲಿರುವ ರಾಹುಲ್ ಗಾಂಧಿ ಅವರು ಯುವ ಪಡೆಯನ್ನು ತಯಾರು ಮಾಡುತ್ತಿದ್ದು, ಕೃಷ್ಣಭೈರೇಗೌಡ, ರಮ್ಯಾ, ರಿಜ್ವಾನ್ ಅರ್ಷದ್ ಅವರ ಜೊತೆಗೆ ಯು.ಟಿ.ಖಾದರ್ ಅವರೂ ರಾಹುಲ್ ಅವರ ತಂಡದಲ್ಲಿದ್ದಾರೆ ಎನ್ನಲಾಗಿದೆ.












Click it and Unblock the Notifications