ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ತಮಿಳುನಾಡಿಗೆ ನವೆಂಬರ್ 23 ವರೆಗೂ ಕಾವೇರಿ ನೀರು ಬಿಡಲೇಬೇಕು!
ನವದೆಹಲಿ, ನವೆಂಬರ್ 03: ಕಾವೇರಿ ವಿಚಾರವಾಗಿ ಕರ್ನಾಟಕದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದರೂ ತಮಿಳುನಾಡಿಗೆ ಮತ್ತೆ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದ್ದು, ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.
ಹೌದು, ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಪ್ರಶ್ನಿಸಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋದ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿಹಿಡಿರುವ ಪ್ರಾಧಿಕಾರ, ನವೆಂಬರ್ 23ರ ವರೆಗೆ ತಮಿಳುನಾಡಿಗೆ ನಿತ್ಯ 2600 ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಸೂಚನೆ ನೀಡಿದೆ.

ಈಗಾಗಲೇ ಕರ್ನಾಟಕದಲ್ಲಿ ಉತ್ತಮ ಮಳೆಯಾಗದ ಹಿನ್ನಲೆ ಹಲವು ಜಲಾಶಯಗಳು ಬರಿದಾಗಿದ್ದು, ಇದರೊಂದಿಗೆ ಪತ್ರಿ ಬಾರೀ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದ್ದು, ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸೂಚನೆ ನೀಡಿತ್ತು. ಸಭೆಯ ಬಳಿಕ ಮಾಹಿತಿ ನೀಡಿದ ಎಸಿಎಸ್ ರಾಕೇಶ್ ಸಿಂಗ್, ನವೆಂಬರ್ 23 ರ ತನಕ 2600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು ಎಂದು ಹೇಳಿದ್ದಾರೆ.
ಇನ್ನೂ ನವೆಂಬರ್ 15ವರೆಗೂ ರಾಜ್ಯದಿಂದ ತಮಿಳುನಾಡಿಗೆ ನಿತ್ಯ 2,600 ಕ್ಯುಸೆಕ್ ನೀರು ಹರಿಸಬೇಕು. ಕಾವೇರಿ ನದಿ ಪಾತ್ರದ ಎಲ್ಲಾ ನಾಲ್ಕು ಜಲಾಶಯಗಳಿಗೆ ಒಳಹರಿವು ಬಹುತೇಕ ಶೂನ್ಯವಾಗಿರುವ ಸ್ಥಿತಿಯಲ್ಲಿ ಸಿಡಬ್ಲ್ಯೂಎಂಎ ನಿರ್ಣಯ ಕರ್ನಾಟಕದ ಪಾಲಿಗೆ ಆತಂಕ ಹೆಚ್ಚಿಸಿದೆ. ಈಗಾಗಲೇ ರಾಜ್ಯದಲ್ಲಿ ಮಳೆಯಿಲ್ಲದೇ ಹಲವು ಜಲಾಶಯಗಳು ಖಾಲಿ ಖಾಲಿಯಾಗಿದೆ. ಈ ಸಂದರ್ಭದಲ್ಲಿ ನೀರನ್ನು ನೆರೆ ರಾಜ್ಯಕ್ಕೆ ಹರಿಸುವ ಅನಿವಾರ್ಯತೆ ರಾಜ್ಯಕ್ಕೆ ಸೃಷ್ಟಿಯಾಗಿರುವುದು ಆತಂಕದ ವಿಷಯವಾಗಿದೆ.












Click it and Unblock the Notifications