2ಜಿ ಹಗರಣ : 'ಸುಳ್ಳು ವರದಿ ನೀಡಿದ ವಿನೋದ್ ರೈ ಕ್ಷಮೆಯಾಚಿಸಲಿ'
ನವದೆಹಲಿ, ಡಿಸೆಂಬರ್ 21 : 2ಜಿ ತರಂಗಗುಚ್ಛ ಹಗರಣವನ್ನು ಬಯಲಿಗೆಳೆದಿದ್ದ ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ಅವರ ವಿರುದ್ಧ ತಿರುಗಿಬಿದ್ದಿರುವ ಯುಪಿಎ ಶಾಸಕರು, ವಿನೋದ್ ರೈ ಕೂಡಲೆ ಕ್ಷಮೆ ಕೇಳಬೇಕೆಂಬು ದುಂಬಾಲು ಬಿದ್ದಿವೆ.
1.76 ಲಕ್ಷ ಕೋಟಿ ರುಪಾಯಿ - ಇದು 2ಜಿ ತರಂಗಗುಚ್ಛ ಹಗರಣದ ಮೊತ್ತ. ಹೆಚ್ಚೂ ಕಡಿಮೆ ಕರ್ನಾಟಕದ ವರ್ಷದ ಬಜೆಟ್ಟಿನಷ್ಟು. ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಸರಕಾರವಿದ್ದಾಗ, ಡಿಎಂಕೆ ಪಕ್ಷದ ನಾಯಕ, ಮಾಜಿ ಟೆಲಿಕಾಂ ಸಚಿವ ಎ ರಾಜಾ ಮತ್ತಿತರರ ಮೇಲೆ ವಿನೋದ್ ರೈ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.

ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಒಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದರೆ, ಮತ್ತೆರಡನ್ನು ಸಿಬಿಐ ತನಿಖೆ ನಡೆಸಿತ್ತು. ಈ ಮೂರು ಪ್ರಕರಣಗಳಲ್ಲಿ ಎ ರಾಜಾ, ಕನ್ನಿಮೋಳಿ ಮತ್ತಿತರ ಆರೋಪಿಗಳು ನಿರ್ದೋಷಿಗಳಾಗಿದ್ದಾರೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಓ ಪಿ ಸೈನಿ ಅವರು ತೀರ್ಪು ನೀಡಿದ್ದಾರೆ.
ಲೈಸೆನ್ಸ್ ನೀಡಲು ಮತ್ತು 2ಜಿ ತರಂಗಗುಚ್ಛ ಹಂಚಿಕೆಯ ಹಗರಣ, ಯುಪಿಎ ಸರಕಾರವಿದ್ದಾಗ 2008ರಲ್ಲಿಯೇ ಬಯಲಾಗಿತ್ತು. ಆದರೆ, ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ವರದಿ ನೀಡಿದ ಮೇಲೆ 2010ರಲ್ಲಿ ಬೃಹದಾಕಾರ ಪಡೆದುಕೊಂಡಿತ್ತು. ಈ ಪ್ರಕರಣದಲ್ಲಿ ಡಿಎಂಕೆ ಪಕ್ಷದ ಕನ್ನಿಮೋಳಿ ಫಲಾನುಭವಿಯಾಗಿ 213 ಕೋಟಿ ರುಪಾಯಿ ನುಂಗಿದ್ದಾರೆ ಎಂದೂ ಆರೋಪಿಸಲಾಗಿತ್ತು.
ವಿನೋದ್ ರೈ ಮೇಲೆ ತಿರುಗಿಬಿದ್ದಿರುವ ಕಾಂಗ್ರೆಸ್ ನಾಯಕ, ವಕೀಲ ಕಪಿಲ್ ಸಿಬಲ್ ಅವರು, "ನಾನು ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದೆ. ಇಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ, ದೇಶಕ್ಕೆ ಯಾವುದೇ ನಷ್ಟವಾಗಿಲ್ಲ ಇದು ಹಗರಣ ಅಲ್ಲವೇ ಅಲ್ಲ ಎಂದು. ಅದೀಗ ರುಜುವಾತಾಗಿದೆ" ಎಂದು ಆರೋಪಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ದೇಶದ ಭಾರೀ ದೊಡ್ಡ ಹಗರಣ ಎಂದು ಬಿಂಬಿಸಲಾಗುತ್ತಿದ್ದ 2ಜಿ ತರಂಗಗುಚ್ಛ ಹಗರಣದ ಆರೋಪ ಯಾವತ್ತೂ ನಿಜವಾಗಿರಲಿಲ್ಲ. ಆದರೆ, ವಿನೋದ್ ರೈ ಮತ್ತು ಬಿಜೆಪಿ ನಾಯಕರು ಸುಳ್ಳು ಹಬ್ಬಿಸುತ್ತಲೇ ಬಂದರು ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications