ಸಿಂಹಾಚಲಂ ದೇವಸ್ಥಾನದ ಹುಂಡಿಯಲ್ಲಿ ₹ 100 ಕೋಟಿ ಚೆಕ್ ಹಾಕಿದ ಭಕ್ತ: ಆಮೇಲೆ ಆಗಿದ್ದೇನು?
ವಿಶಾಖಪಟ್ಟಣಂ ಸಿಂಹಾಚಲ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು 100 ಕೋಟಿ ರೂಪಾಯಿ ಚೆಕ್ ಹಾಕಿದ್ದಾರೆ. ಇದು ದೇವಾಲಯದ ಸುದೀರ್ಘ ಇತಿಹಾಸದಲ್ಲಿ ಹಿಂದೆಂದೂ ಕಾಣದ ಘಟನೆಯಾಗಿದ್ದು, ಚೆಕ್ ನೋಡಿ ದೇವಸ್ಥಾನದ ಸಿಬ್ಬಂದಿ ಶಾಕ್ ಆಗಿದ್ದರು.
ಈ ಅನಿರೀಕ್ಷಿತ ಘಟನೆಯಿಂದಾಗಿ ದೇವಸ್ಥಾನದ ಸಿಬ್ಬಂದಿ ಮೇಲಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಅಷ್ಟು ದೊಡ್ಡ ಮೊತ್ತದ ಚೆಕ್ನ ಮೂಲವನ್ನು ಪತ್ತೆಹಚ್ಚಲು ಮುಂದಾದರು. ದೇವಸ್ಥಾನದ ಅಧಿಕಾರಿಗಳು ಚೆಕ್ ಅನ್ನು ಸಂಬಂಧಪಟ್ಟ ಬ್ಯಾಂಕ್ಗೆ ಕಳುಹಿಸಿದಾಗ ಇನ್ನೊಂದು ಶಾಕ್ ಕಾದಿತ್ತು, ಚೆಕ್ ಕೊಟ್ಟ ಭಕ್ತನ ಬ್ಯಾಂಕ್ ಖಾತೆಯಲ್ಲಿ ಕೇವಲ 17 ರೂಪಾಯಿ ಮಾತ್ರ ಇತ್ತು.

ಚೆಕ್ನ ಫೋಟೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಚೆಕ್ನಲ್ಲಿ ಬೊಡ್ಡೆಪಲ್ಲಿ ರಾಧಾಕೃಷ್ಣ ಎನ್ನುವ ವ್ಯಕ್ತಿ ಸಹಿ ಹಾಕಿದ್ದರು. ಎಂವಿಪಿ ಡಬಲ್ ರೋಡ್ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದರು. ಚೆಕ್ನಲ್ಲಿ ಆರಂಭದಲ್ಲಿ 10 ರೂಪಾಯಿ ಎಂದು ಬರೆದಿದ್ದು, ನಂತರ ಅದನ್ನು 100 ಕೋಟಿಗೆ ಬದಲಾಯಿಸಿರುವುದು ದೇವಸ್ಥಾನದ ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿದೆ.
ಪ್ರಕರಣ ದಾಖಲಿಸಲು ಅವಕಾಶ
ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಸೇರಿದ ಚೆಕ್ನಲ್ಲಿ ಭಕ್ತ ದಿನಾಂಕವನ್ನು ಬರೆದಿಲ್ಲ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಕ್ತ ಖಾತೆದಾರನೆಂದು ಚೆಕ್ ತೋರಿಸುತ್ತದೆ. ದೇವಸ್ಥಾನದ ಅಧಿಕಾರಿಗಳು ಹುಂಡಿಯಲ್ಲಿ ಚೆಕ್ ಅನ್ನು ಕಂಡು ಅದನ್ನು ಕಾರ್ಯನಿರ್ವಾಹಕ ಅಧಿಕಾರಿಗೆ ಕೊಟ್ಟಿದ್ದಾರೆ. ಏನೋ ತಪ್ಪಾಗಿದೆ ಎಂದು ಗ್ರಹಿಸಿದ ಅಧಿಕಾರಿ, ಇದು ನಿಜವಾಗಿಯೂ 100 ಕೋಟಿ ಚೆಕ್ ಆಗಿದೆಯೇ ಎಂದು ಸಂಬಂಧಿಸಿದ ಬ್ಯಾಂಕ್ ಶಾಖೆಯೊಂದಿಗೆ ಪರಿಶೀಲಿಸಲು ಅಧಿಕಾರಿಗಳಿಗೆ ಕೇಳಿದರು. ಚೆಕ್ ನೀಡಿದವರ ಖಾತೆಯಲ್ಲಿ ಕೇವಲ 17 ರೂಪಾಯಿ ಇದೆ ಎಂದು ಬ್ಯಾಂಕ್ ಅಧಿಕಾರಿಗಳು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಚೆಕ್ ಹುಂಡಿಯಲ್ಲಿ ಹಾಕಿದ ದಾನಿಗಳನ್ನು ಗುರುತಿಸಲು ದೇವಸ್ಥಾನದ ಅಧಿಕಾರಿಗಳು ಬ್ಯಾಂಕ್ಗೆ ಪತ್ರ ಬರೆಯಲು ಯೋಜಿಸುತ್ತಿದ್ದಾರೆ. ದಾನಿಯು ದೇವಾಲಯದ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದರೆ, ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಲು ದೇವಸ್ಥಾನಕ್ಕೆ ಅವಕಾಶ ಇದೆ.
ಭಕ್ತನ ಈ ಕೆಲಸ ಕಂಡು ಅಂತರ್ಜಾಲದಲ್ಲಿ ಹಲವು ಕಾಮೆಂಟ್ಗಳನ್ನು ಹುಟ್ಟುಹಾಕಿದೆ. ಕೆಲವರು, ಭಕ್ತ ದೇವರಿಗೆ ಕೋಪ ಬರಿಸಿದ್ದಾನೆ ಎಂದು ಕಾಮೆಂಟ್ ಮಾಡಿದ್ದು, ಇನ್ನೂ ಕೆಲವರು ತನ್ನ ಕೋರಿಕೆ ಈಡೇರಿಸುವಂತೆ ದೇವರಿಗೆ ಅಡ್ವಾನ್ಸ್ ನೀಡಿರಬಹುದು ಎಂದು ಹೇಳಿದ್ದಾರೆ.
ವಿಶಾಖಪಟ್ಟಣಂನ ಸಿಂಹಾಚಲಂ ಬೆಟ್ಟದ ಮೇಲಿರುವ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.












Click it and Unblock the Notifications