Chandrayaan-3: ‘ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದ ಪ್ರಗತಿ’
ರಾಮೇಶ್ವರ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲೇ ತನ್ನದೇ ಛಾಪು ಮೂಡಿಸುತ್ತಿದ್ದು, ಜಗತ್ತಿನ ಶಕ್ತಿಶಾಲಿ ದೇಶಗಳು ಕೂಡ ಭಾರತದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಮುಂದೆ ಬರುತ್ತಿವೆ. ಅದ್ರಲ್ಲೂ ಇತ್ತೀಚೆಗೆ ಉಡಾವಣೆಯಾದ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಇಸ್ರೋ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇದೇ ಕೇಂದ್ರ ಗೃಹ ಸಚಿವರು ಕೂಡ ಇದೇ ಮಾತನ್ನ ಪುನರುಚ್ಚರಿಸಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ನೆರೆಯ ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ 'ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಮೆಮೊರಿಸ್ ನೆವರ್ ಡೈ' ಬುಕ್ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಶಾ, ಮಾಜಿ ರಾಷ್ಟ್ರಪತಿ ಹಾಗೂ ಅಪ್ರತಿಮ ವಿಜ್ಞಾನಿ, ದಿವಂಗತ ಕಲಾಂ ಅವರ ದೂರದೃಷ್ಟಿಯಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ದೇಶದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದಿವಂಗತ ಕಲಾಂ ಅವರ ಕೊಡುಗೆಯನ್ನು ಅಮಿತ್ ಶಾ ಸ್ಮರಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ
ಹಾಗೇ ಪಿಎಂ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ವಿದ್ಯಾರ್ಥಿಗಳು, ಯುವ ಜನಾಂಗ ಮತ್ತು ನವೋದ್ಯಮಗಳಿಗೆ ಮುಕ್ತ ಅವಕಾಶ ಸಿಗುತ್ತಿದೆ ಎಂದರು. ಅಬ್ದುಲ್ ಕಲಾಂ ಅವರ ಬಾಹ್ಯಾಕಾಶ ವಿಜ್ಞಾನದ ಸಾಧನೆಗಳ ಕನಸುಗಳು ಪ್ರಧಾನಿ ಮೋದಿ ಅವರ ಅವಿಷ್ಕಾರ ಮತ್ತು ಹೊಸ ಉಪಕ್ರಮದಿಂದ ನನಸಾಗಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಭಾರತ ಒಂದು ಹೆಜ್ಜೆ ಮುಂದೆ ಇಡುತ್ತಿದೆ ಎಂದರು. ಇತ್ತೀಚೆಗಷ್ಟೇ ಭಾರತ 'ಚಂದ್ರಯಾನ-3' ನೌಕೆಯನ್ನ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
ಇನ್ನು ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ದೇಶವು 55 ಬಾಹ್ಯಾಕಾಶ ನೌಕೆ ಮಿಷನ್, 50 ಉಡಾವಣಾ ವಾಹಕ ಮಿಷನ್ ಸೇರಿದಂತೆ 11 ವಿದ್ಯಾರ್ಥಿಗಳ ಉಪಗ್ರಹಗಳ ಮಿಷನ್ ಸಕ್ಸಸ್ ಆಗಿದೆ. ಒಂದೇ ಸಮಯಕ್ಕೆ ಪಿಎಲ್ಎಲ್ವಿ-ಸಿ37 ರಾಕೆಟ್ ಮೂಲಕ 104 ಉಪಗ್ರಹಗಳನ್ನು ಉಡ್ಡಯನ ಮಾಡಿರುವ ಸಾಧನೆಯನ್ನು ಕೂಡ ಗೃಹ ಸಚಿವ ಅಮಿತ್ ಶಾ ಉಲ್ಲೇಖಿಸಿದರು. ಒಟ್ನಲ್ಲಿ ಭಾರತ ಬಾಹ್ಯಾಕಾಶ ಲೋಕದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದು, ಈ ಸಾಧನೆ ಇದೇ ರೀತಿ ಮುಂದುವರಿಯಲಿ ಎಂಬುದೇ ಪ್ರತಿಯೊಬ್ಬರ ಆಶಯವಾಗಿದೆ.

ಯಶಸ್ವಿಯಾಗಿ ಮುನ್ನುಗ್ಗುತ್ತಿದೆ 'ಚಂದ್ರಯಾನ-3'!
'ಚಂದ್ರಯಾನ-3' ಬಾಹ್ಯಾಕಾಶ ನೌಕೆ 1,27,609 ಕಿಮೀ x 228 ಕಿಮೀ ಕಕ್ಷೆಗೆ ತಲುಪಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್ನ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಕೆಲ ದಿನಗಳ ಹಿಂದಷ್ಟೇ ಬಾಹ್ಯಾಕಾಶ ನೌಕೆಯ ಕಕ್ಷೆ ಏರಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಮುಂದಿನ ಫೈರಿಂಗ್, ಟ್ರಾನ್ಸ್ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 ಹಾಗೂ ಬೆಳಗ್ಗೆ 1 ಗಂಟೆ ನಡುವೆ ನಡೆಸಲು ಯೋಜಿಸಲಾಗಿದೆ. ಇದೇ ವೇಳೆ ಮತ್ತೊಂದು ಕಾರ್ಯದಲ್ಲೂ ಇಸ್ರೋ ಯಶಸ್ಸು ಕಂಡಿದೆ.
ದಕ್ಷಿಣ ಧ್ರುವ ಪ್ರದೇಶದ ಅಧ್ಯಯನಕ್ಕೆ ಸಿದ್ಧತೆ
ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಹಲವು ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗುತ್ತಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರ ಚಂದ್ರ. ಇದೇ ಕಾರಣಕ್ಕೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿತ್ತು ಭಾರತ.












Click it and Unblock the Notifications