ಬಜೆಟ್ ಮಂಡಿಸಲಿರುವ ಜೇಟ್ಲಿ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ
ಬೆಂಗಳೂರು, ಜನವರಿ 30 : ವಿತ್ತ ಸಚಿವ ಅರುಣ್ ಜೇಟ್ಲಿಯವರು ಫೆಬ್ರವರಿ 1ರಂದು, ಗುರುವಾರ ಮಂಡಿಸಲಿರುವ ಕೇಂದ್ರ ಆಯವ್ಯಯ ಹಲವಾರು ವಿಷಯಗಳಿಂದ ಮಹತ್ವದ್ದಾಗಿರಲಿದೆ. ಜೇಟ್ಲಿಯವರು ರುಪಾಯಿಯನ್ನು ಯಾವ್ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಮತ್ತು ಹೇಗೆ ಹಂಚಲಿದ್ದಾರೆ ಎಂಬುದು ಸರ್ವರ ಕುತೂಹಲಕ್ಕೆ ಕಾರಣವಾಗಿದೆ.
ಸರಕು ಮತ್ತು ಸೇವಾ ತೆರಿಗೆಯನ್ನು ನಾಲ್ಕು ಹಂತಗಳಲ್ಲಿ ಜಾರಿ ತಂದ ನಂತರ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದ್ದರೆ, 2019ರಲ್ಲಿ ಲೋಕಸಭೆ ಚುನಾವಣೆ ಜರುಗಲಿರುವುದರಿಂದ ನರೇಂದ್ರ ಮೋದಿ ಅವರ ಸರಕಾರ ಮಂಡಿಸುತ್ತಿರುವ ಕಡೆಯ ಮತ್ತು ಪೂರ್ಣಮಟ್ಟದ ಬಜೆಟ್ ಕೂಡ ಇದಾಗಿರಲಿದೆ.
ಒನ್ಇಂಡಿಯಾದಲ್ಲಿ ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್
ಹಲವಾರು ನಿರೀಕ್ಷೆಗಳ ಭಾರ ಹೊತ್ತುಕೊಂಡು ಅರುಣ್ ಜೇಟ್ಲಿಯವರು ಬಜೆಟ್ ಮಂಡಿಸಲಿದ್ದಾರೆ. ದೇಶ ಪ್ರಗತಿಯತ್ತ ಮುಂದೆ ಸಾಗಬೇಕಾಗಿರುವುದರಿಂದ ಇದು ಅತ್ಯಂತ ಜನಪ್ರಿಯ ಬಜೆಟ್ ಆಗಿರುವುದಿಲ್ಲ ಎಂಬ ಸೂಚನೆಯನ್ನು ದೇಶದ ಜನತೆಗೆ ಈಗಾಗಲೆ ರವಾನಿಸಲಾಗಿದೆ. ಆದರೆ, ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡೂ ಅವರು ಬಜೆಟ್ ಮಂಡಿಸಬೇಕಾದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅರುಣ್ ಜೇಟ್ಲಿಯವರಿಗೆ ಮುಕ್ತ ಹಸ್ತ ನೀಡಿದ್ದು, ತಾವು ಯಾವುದೇ ರೀತಿಯಲ್ಲಿ ತಲೆಹಾಕುವುದಿಲ್ಲ ಎಂದು ಮಾತು ಕೊಟ್ಟಿದ್ದಾರೆ. ಬಜೆಟ್ ಕಾರ್ಪೋರೇಟ್ ಜಗತ್ತಿಗೆ, ವ್ಯಾಪಾರಿಗಳಿಗೆ ವರದಾನವಾಗುತ್ತೋ, ಶ್ರೀಸಾಮಾನ್ಯನಿಗೆ ಮಾರಕವಾಗುತ್ತೋ? ಜೇಟ್ಲಿಯವರ ಮನದಲ್ಲಿ ಏನಿದೆಯೋ ಬಲ್ಲವರು ಯಾರು?
ಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳು
ನರೇಂದ್ರ ಮೋದಿಯವರ ಸರಕಾರದಲ್ಲಿ ಐದನೇ ಬಾರಿ ಬಜೆಟ್ ಮಂಡಿಸುತ್ತಿರುವ, ಕಳಂಕರಹಿತರಾಗಿ ಪ್ರಬುದ್ಧ ರಾಜಕಾರಣವನ್ನು ಮಾಡುತ್ತಿರುವ ಅರುಣ್ ಜೇಟ್ಲಿಯವರ ಬಗ್ಗೆ ಕೆಲ ಸಂಗತಿಗಳನ್ನು ನೋಡೋಣ ಬನ್ನಿ.
ಹುಟ್ಟಿದ್ದು ದೆಹಲಿಯಲ್ಲಿ, ಹಿಂದೂ ಕುಟುಂಬದಲ್ಲಿ
ಅರುಣ್ ಜೇಟ್ಲಿಯವರು ಹುಟ್ಟಿದ್ದು 1952ರ ಡಿಸೆಂಬರ್ 28ರಂದು, ಪಂಜಾಬಿ ಹಿಂದೂ ಕುಟುಂಬದಲ್ಲಿ ನವದೆಹಲಿಯಲ್ಲಿ. ಅರವತ್ತೈದು ವಸಂತಗಳನ್ನು ಕಂಡಿರುವ ಜೇಟ್ಲಿಯವರು ಮಾಡಿದ್ದು ಬಿಕಾಂ, ಎಲ್ಎಲ್ಬಿ. ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿ ಅಧ್ಯಕ್ಷರಾಗಿದ್ದ ಅವರು, ಎಮರ್ಜೆನ್ಸಿ ಸಮಯದಲ್ಲಿ 19 ತಿಂಗಳು ಜೈಲಲ್ಲಿದ್ದು ಬಂದವರು. ಜಯಪ್ರಕಾಶ್ ನಾರಾಯಣ ಅವರೊಂದಿಗೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಧುಮುಕಿದವರು.
ಹಲ್ವಾ ಸಮಾರಂಭದಲ್ಲಿ ಪಾಲ್ಗೊಂಡ ಜೇಟ್ಲಿ, ಬಜೆಟ್ ಮುದ್ರಣ ಆರಂಭ
ಹಲವಾರು ಖಾತೆಗಳ ಹೊಣೆ ಜೇಟ್ಲಿ ಮೇಲೆ
ಇದೇ ಮೊದಲ ಬಾರಿ (ಮೋದಿ ಸರಕಾರದಲ್ಲಿ) ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರೆ, ದಶಕದ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರ ರಚಿಸಿದ್ದಾಗ ಕಾನೂನು ಮತ್ತು ವಾಣಿಜ್ಯ ಸಚಿವರಾಗಿ ಅನುಭವ ಗಿಟ್ಟಿಸಿದ್ದರು. ಅವರು ಕಾರ್ಪೊರೇಟ್ ವ್ಯವಹಾರ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ (ಸ್ವತಂತ್ರ ಹೊಣೆಗಾರಿಕೆ) ಸಚಿವರಾಗಿಯೂ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಮಾಗಿದ್ದಾರೆ.
ನ್ಯಾಯವಾದಿಯಾಗಿ ಹಲವು ವರ್ಷಗಳ ಅನುಭವ
ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿರ್ಲಾ ಕಾರ್ಪೊರೇಶನ್ ಲಿಮಿಟೆಡ್ ಒಡೆತನದ ಸುಮಾರು 5,000 ಕೋಟಿಗೂ ಹೆಚ್ಚಿನ ಆಸ್ತಿಯ ವಿರುದ್ಧ ಆರ್. ಎಸ್. ಲೋಧಾ ಅವರ ಕಾನೂನು ಸಮರದಲ್ಲಿ ಬಿರ್ಲಾ ಕುಟುಂಬದ ಪರವಾಗಿ ಅರುಣ್ ಜೇಟ್ಲಿಯವರು ವಾದ ಮಾಡಿದ್ದರು. ವಿಪಿ ಸಿಂಗ್ ಸರಕಾರವಿದ್ದಾಗ 1989ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿದ್ದರು.
2014ರ ಚುನಾವಣೆಯಲ್ಲಿ ಸೋತಿದ್ದ ಜೇಟ್ಲಿ
1991ರಿಂದ ಭಾರತೀಯ ಜನತಾ ಪಕ್ಷದ ಎಕ್ಸಿಕ್ಯೂಟಿವ್ ಸದಸ್ಯರಾಗಿರುವ ಅವರು, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ರಾಜ್ಯಸಭೆಯಲ್ಲಿ ನಾಯಕರಾಗಿದ್ದಾರೆ. ಗುಜರಾತ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು 2014ರಲ್ಲಿ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಅಮರಿಂದರ್ ವಿರುದ್ಧ ಸೋತಿದ್ದರು.
ಚುನಾವಣೆಗಳ ಮಾಸ್ಟರ್ ಸ್ಟ್ರಾಟಜಿಸ್ಟ್ ಜೇಟ್ಲಿ
ಚುನಾವಣೆಗೆ ಸಂಬಂಧಿಸಿದಂತೆ ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದೇ ಖ್ಯಾತರಾಗಿರುವ ಅವರು, ಗುಜರಾತ್ ನಲ್ಲಿ ನರೇಂದ್ರ ಮೋದಿಯವರ ಗೆಲುವಿನ ಭಾಗೀದಾರರಾಗಿದ್ದಾರೆ. ಅಲ್ಲದೆ, 2004ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ಅವರ ಮೇಲೆ ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವ ವಿಶೇಷ ಹೊಣೆಯನ್ನು ಅವರ ಮೇಲೆ ಹೊರಿಸಲಾಗಿತ್ತು. ಅವರ ನೇತೃತ್ವದಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.
ಸಂಗೀತಾ ಜೇಟ್ಲಿಯವರೊಂದಿಗೆ ವಿವಾಹ
ಜೇಟ್ಲಿಯವರು 24 ಮೇ 1982ರಂದು ಸಂಗೀತಾ ಜೇಟ್ಲಿಯವರನ್ನು ವಿವಾಹವಾದರು. ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ, ಮಗ ರೋಹನ್ ಹಾಗೂ ಮಗಳು ಸೊನಾಲಿ. ಅವರ ಮಗಳು ಸೊನಾಲಿ ಜೇಟ್ಲಿ ವಕೀಲೆಯಾಗಿದ್ದಾರೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದಾರೆ.