ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ವಿರುದ್ಧ ನೀರಿನೊಳಗೆ ಭಿತ್ತಿಪತ್ರ ಹಿಡಿದು ವಿಭಿನ್ನ ಪ್ರತಿಭಟನೆ
ಲಕ್ಷದ್ವೀಪ, ಜೂನ್ 07: ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿರುವ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತರಲು ಮುಂದಾಗಿರುವ ಜನವಿರೋಧಿ ನೀತಿ ವಿರುದ್ಧ ಇಂದು ವಿಭಿನ್ನವಾಗಿ ಪ್ರತಿಭಟನೆ ನಡೆಯಿತು.
ಅವರು ದ್ವೀಪ ಸಮೂಹದಲ್ಲಿ ಜಾರಿಗೆ ತರಲು ಮುಂದಾಗಿರುವ ಜನವಿರೋಧಿ ನೀತಿಗಳನ್ನು ವಿರೋಧಿಸಿ ಲಕ್ಷದ್ವೀಪದ ನಿವಾಸಿಗಳು ಇಂದು 12 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿದ್ದು, ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಜನರು ಮತ್ತು ರಾಜಕೀಯ ಮುಂಖಡರು 12 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಜೊತೆಗೆ ತಮ್ಮ ಮನೆಗಳ ಮುಂದೆ, ನೀರಿನೊಳಗೆ ಭಿತ್ತಿಪತ್ರಗಳನ್ನು ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಲಕ್ಷ ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಲಕ್ಷ ದ್ವೀಪದಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಅವರು ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ (ಎಲ್ಡಿಎಆರ್), ಲಕ್ಷದ್ವೀಪ ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಾಮಾನ್ಯವಾಗಿ ಇದನ್ನು ಬೇರೆಡೆ ಪಾಸಾ ಅಥವಾ ಗೂಂಡಾ ಕಾಯ್ದೆ ಎಂದು ಕರೆಯಲಾಗುತ್ತದೆ), ಮತ್ತು ಲಕ್ಷದ್ವೀಪ ಪ್ರಾಣಿ ಸಂರಕ್ಷಣೆ ಮತ್ತು ನಿಯಂತ್ರಣ (ಎಲ್ಎಪಿಆರ್), ಜೊತೆಗೆ ಲಕ್ಷದ್ವೀಪ ಪಂಚಾಯತ್ ನಿಯಮಗಳಿಗೆ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದರು.
ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಲಕ್ಷದ್ವೀಪದಲ್ಲಿ ಪ್ರತಿಭಟನೆ
ಇವೆಲ್ಲದರ ನಡುವೆ ಭಾನುವಾರ ಲಕ್ಷದ್ವೀಪದ ಆಡಳಿತ ಸ್ಥಳೀಯ ಮೀನುಗಾರಿಕೆ ದೋಣಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸುವುದು, ಜೊತೆಗೆ ತೆಂಗಿನ ಉಪ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈನಲ್ ನೂತನ ಆದೇಶಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದರು.
ವಾಪಸ್ ಕರೆಸಿಕೊಳ್ಳಲು ಒತ್ತಾಯ
ಈ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಜನರು, ಕೇರಳ, ತಮಿಳುನಾಡು ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಮೀನುಗಾರಿಕಾ ದೋಣಿಗಳಿಗೆ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಿತ್ತು.
ದ್ವೀಪ ಅಭಿವೃದ್ಧಿ
ಲಕ್ಷದ್ವೀಪವನ್ನು ಮಾಲ್ಡೀವ್ಸ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಲಕ್ಷದ್ವೀಪ ಆಡಳಿತ ತಿಳಿಸಿದೆ. ಆದರೆ ಮಾಲ್ಡೀವ್ಸ್ ಮಾದರಿಯಲ್ಲಿ ಲಕ್ಷದ್ವೀಪದಲ್ಲಿ ರೆಸಾರ್ಟ್ ಗಳು, ಹೋಟೆಲ್ ಗಳು ಬೀಚ್ ಫ್ರಂಟ್ ಗಳು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ವಿರೋಧ ಪಕ್ಷಗಳು ಮತ್ತು ಹಲವು ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷದ್ವೀಪದ ಕುರಿತು ಮಾಹಿತಿ
ಹಿಂದೂ ಮಹಾಸಾಗರದಲ್ಲಿ ಹರಡಿಕೊಂಡಿರುವ 36 ದ್ವೀಪಗಳ ಸಮೂಹವೇ ಲಕ್ಷದ್ವೀಪ. ಈ ದ್ವೀಪಗಳ ಒಟ್ಟಾರೆ ವಿಸ್ತೀರ್ಣ 32 ಚ.ಕಿ.ಮೀ. ಇದೆ. ಇವುಗಳಲ್ಲಿ 10 ದ್ವೀಪಗಳಲ್ಲಿ ಜನರು ವಾಸಿಸುತ್ತಿದ್ದಾರೆ ಮತ್ತು ಒಂದು ದ್ವೀಪವನ್ನು ಟೂರಿಸ್ಟ್ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಈ ದ್ವೀಪಗಳಲ್ಲಿ 65 ಸಾವಿರ ಜನರಿದ್ದು, ಬಹುತೇಕರು ಮುಸ್ಲಿಂ ಸಮುದಾಯದವರಾಗಿದ್ದಾರೆ. ಲಕ್ಷದ್ವೀಪದ ಜನರು ಕೇರಳದೊಂದಿಗೆ ಪಾರಂಪರಿಕವಾಗಿ ನಂಟು ಹೊಂದಿದ್ದಾರೆ.
ಕೇರಳದಲ್ಲೂ ಪ್ರತಿಭಟನೆ
ಇದೇ ವೇಳೆ ಲಕ್ಷದ್ವೀಪದ ಜನರಿಗೆ ಬೆಂಬಲವಾಗಿ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಾಯಕರು ಸೇರಿದಂತೆ ಹಲವು ರಾಜಕೀಯ ಮುಖಂಡರು ಕೇರಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೇರಳ ಸರ್ಕಾರವಂತೂ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಪ್ರಸ್ತಾವನೆಯನ್ನು ಪಾಸ್ ಮಾಡಿತ್ತು.