ಎನ್ ಕೌಂಟರ್ನಲ್ಲಿ ಉಧಾಂಪುರ ದಾಳಿಯ ಮಾಸ್ಟರ್ ಮೈಂಡ್ ಹತ್ಯೆ
ಬೆಂಗಳೂರು, ಅಕ್ಟೋಬರ್ 29 : ಉಧಾಂಪುರದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಬು ಖಾಸಿಂ ಎನ್ ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಅಬು ಖಾಸಿಂನನ್ನು ಹೊಡೆದುರುಳಿಸಿವೆ.
ಕುಲ್ಗಾಮ್ ಸೆಕ್ಟರ್ನಲ್ಲಿ ಅಬು ಖಾಸಿಂ ಅಡಗಿರುವ ಕುರಿತು ಗುಪ್ತಚರ ದಳದಿಂದ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಗುರುವಾರ ಮುಂಜಾನೆ 2 ಗಂಟೆ ಸುಮಾರಿಗೆ ದಾಳಿ ನಡೆಸಿವೆ. ಗುಂಡಿನ ಚಕಮಕಿಯಲ್ಲಿ ಅಬು ಖಾಸಿಂ ಸಾವನ್ನಪ್ಪಿದ್ದಾನೆ. [ಉಗ್ರ ಮೊಹಮ್ಮದ್ ನವೀದ್ ಲಷ್ಕರ್ ಸೇರಿದ್ದು ಹೇಗೆ?]

2015ರ ಆಗಸ್ಟ್ 5ರಂದು ಉಧಾಂಪುರದಲ್ಲಿ ಬಿಎಸ್ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆದಿತ್ತು. ಇಬ್ಬರು ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದರು. ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ಮೊಹಮ್ಮದ್ ನವೀದ್ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. [ಉಧಾಂಪುರ ದಾಳಿಗೆ ಸಹಕರಿಸಿದ್ದು ಲಾರಿ ಚಾಲಕ]
ಈ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೊಹಮ್ಮದ್ ನವೀದ್ ವಿಚಾರಣೆ ನಡೆಸಿದಾಗ ಅಬು ಖಾಸಿಂ ಈ ದಾಳಿಯ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿತ್ತು. ಖಾಸಿಂ ಪತ್ತೆಗಾಗಿ ಎನ್ಐಎ ಹುಡುಕಾಟ ಆರಂಭಿಸಿತ್ತು. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']
ನೇಮಕಾತಿ ಮಾಡಿಕೊಳ್ಳುತ್ತಿದ್ದ : ಅಬು ಖಾಸಿಂ ಹತ್ಯೆ ಭಾರತದ ಪಾಲಿಗೆ ಅತೀ ಮಹತ್ವದ್ದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಎ ತೋಯ್ಬಾದ ಚಟುವಟಿಕೆಗಳಲ್ಲಿ ಖಾಸಿಂ ಐದು ವರ್ಷಗಳಿಂದ ತೊಡಗಿಕೊಂಡಿದ್ದ. ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ.












Click it and Unblock the Notifications