ತುಘ್ಲಕ್ ಕೂಡಾ ನೋಟ್ ಬ್ಯಾನ್ ಮಾಡಿದ್ದ, ಮೋದಿಗೆ ಯಶವಂತ್ ಸಿನ್ಹಾ ಟಾಂಗ್
ಅಹಮದಾಬಾದ್, ನವೆಂಬರ್ 15: 14ನೇ ಶತಮಾನದ ದೆಹಲಿಯ ಸುಲ್ತಾನ್ ಮೊಹಮ್ಮದ್ ಬಿನ್ ತುಘ್ಲಕ್ ಕೂಡಾ ನೋಟ್ ಬ್ಯಾನ್ ಮಾಡಿದ್ದ ಎಂದು ಹೇಳಿರುವ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ವಿರುದ್ಧ ಯಶವಂತ್ ಸಿನ್ಹಾ ಪ್ರಚಾರ?
ಅಹಮದಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಅಪನಗದೀಕರಣದಿಂದ ದೇಶದ ಆರ್ಥಿಕತೆಗೆ 3.75 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದಾರೆ.
"ಹಲವು ರಾಜರು ಅವರದ್ದೇ ಕರೆನ್ಸಿಗಳನ್ನು ತಂದಿದ್ದಾರೆ. ಮೊಹಮ್ಮದ್ ಬಿನ್ ತುಘ್ಲಕ್ ತನ್ನದೇ ಆದ ಕರೆನ್ಸಿ ಹೊರ ತಂದಿದ್ದ. ಹೀಗಾಗಿ 700 ವರ್ಷಗಳ ಹಿಂದೆಯೇ ಅಪನಗದೀಕರಣ ನಡೆದಿತ್ತು ಎಂದು ಹೇಳಬಹುದು. ತುಘ್ಲಕ್ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿ ಶಿಫ್ಟ್ ಮಾಡಿಯೂ ಜನಪ್ರಿಯನಾಗಿದ್ದ," ಎಂದು ಸಿನ್ಹಾ ಹೇಳಿದ್ದಾರೆ.
'ಲೋಕಶಾಹಿ ಬಚಾವೋ ಅಭಿಯಾನ್' ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನೈತಿಕ ನೆಲೆಗಟ್ಟು ಕಳೆದುಕೊಂಡ ಬಿಜೆಪಿ, ಯಶವಂತ್ ಸಿನ್ಹಾ ವಾಗ್ದಾಳಿ
"ನಿರುದ್ಯೋಗ ದೇಶದ ಅತೀ ದೊಡ್ಡ ಸಮಸ್ಯೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಗೆ ಏನನ್ನಾದರೂ ಮಾಡಲು ಅತೀ ಕಡಿಮೆ ಸಮಯ ಉಳಿದಿದೆ," ಎಂದು ಹೇಳಿದ್ದಾರೆ.
'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ'ಯ ವರದಿಯನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ಸಿನ್ಹಾ, "ನೋಟ್ ಬ್ಯಾನ್ ನಿಂದ ನೋಟ್ ಮುದ್ರಣ ಮಾಡಲು 1,28,000 ಕೋಟಿ ರೂಪಾಯಿ ನೇರ ಖರ್ಚಾಗಿದೆ. ಅಪನಗದೀಕರಣದಿಂದ ದೇಶದ ಆರ್ಥಿಕತೆ ಶೇ. 1.5 ಕುಸಿತವಾಗಿದೆ ಎಂದುಕೊಂಡರೂ ಒಟ್ಟಾರೆ ಆರ್ಥಿಕತೆಗೆ 2,25,000 ಸಾವಿರ ಕೋಟಿ ನಷ್ಟವಾಗಿದೆ," ಎಂದಿದ್ದಾರೆ. ಒಟ್ಟಾರೆ 3.75 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸಿನ್ಹಾ ಅಂದಾಜಿಸಿದ್ದಾರೆ.
ಇವೆಲ್ಲಾ ನೇರ ನಷ್ಟಗಳು, ಪರೋಕ್ಷ ನಷ್ಟಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.