Rahul Gandhi: ಗುಜರಾತ್ ಕೋರ್ಟ್ನಿಂದ ರಾಹುಲ್ಗೆ ಜಾಮೀನು- ಸತ್ಯವೇ ನನ್ನ ಅಸ್ತ್ರ ಎಂದ ಕಾಂಗ್ರೆಸ್ ನಾಯಕ
ನವದೆಹಲಿ, ಏಪ್ರಿಲ್ 03: ಪ್ರಧಾನಿ ನರೇಂದ್ರ ಮೋದಿಯವರ ( Narendra Modi ) ಉಪನಾಮೆ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಇಂದು ಗುಜರಾತ್ನ ಸೆಷನ್ಸ್ ನ್ಯಾಯಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ಜಾಮೀನು ಪಡೆದಿದ್ದಾರೆ. ಜಾಮೀನು ಪಡೆದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಸತ್ಯವೇ ನನ್ನ ಅಸ್ತ್ರವೆಂದು ತಿಳಿಸಿದ್ದಾರೆ.
ಇದು 'ಮಿತ್ರಕಾಲ'ದ ವಿರುದ್ಧದ ಪ್ರಜಾಪ್ರಭುತ್ವ ಉಳಿಸುವ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನ್ನ ಆಶ್ರಯ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

'ಮಿತ್ರಕಾಲ' ಎಂದರೆ ಪ್ರಧಾನಿ ಮೊದಿ ಹಾಗೂ ಗೌತಮ್ ಅದಾನಿ ನಡುವಿನ ಸ್ನೇಹದ ಬಗ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಅದಾನಿ ಪರ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ' ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿತರ ' ಲಾಭಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು 'ಮಿತ್ರ ಕಾಲ ಬಜೆಟ್' ಎಂದು ರಾಹುಲ್ ಗಾಂಧಿ ಕರೆದಿದ್ದಾರೆ.
ರಾಹುಲ್ ಅವರಿಗೆ ಗುಜರಾತ್ ನ್ಯಾಯಲಯದಿಂದ ಇಂದು ಜಾಮೀನು ಸಿಕ್ಕಿದೆ. ಸೂರತ್ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಆದೇಶವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತ್ತು. ಮುಂದಿನ ವಿಚಾರಣೆ ಏಪ್ರಿಲ್ 13 ರಂದು ನಡೆಯಲಿದೆ.

ರಾಹುಲ್ ಗಾಂಧಿಗೆ ನೀಡಲಾದ ಎರಡು ವರ್ಷಗಳ ಜೈಲು ಶಿಕ್ಷೆಯು ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲು ಕಾರಣವಾಯಿತು. ಶಿಕ್ಷೆಯನ್ನು ರದ್ದುಗೊಳಿಸದಿದ್ದರೆ, ಅವರು ಅನರ್ಹರಾಗುತ್ತಾರೆ ಮತ್ತು ಎಂಟು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ದೆಹಲಿಯಲ್ಲಿ ಸರ್ಕಾರ ಮಂಜೂರು ಮಾಡಿದ ಲುಟಿಯನ್ಸ್ ಬಂಗಲೆಯನ್ನು ಖಾಲಿ ಮಾಡಲು ಒಪ್ಪಿಕೊಂಡ ನಂತರ ಅವರು ಈಗಾಗಲೇ ಪ್ಯಾಕಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
2019 ರ ಸಾರ್ವತ್ರಿಕ ಚುನಾವಣೆಗೆ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ ಭಾಷಣವನ್ನು ಮಾಡಿದ್ದರು. ದೇಶದಿಂದ ಪರಾರಿಯಾದ ವಂಚಕ ಉದ್ಯಮಿಗಳಾದ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಬಗ್ಗೆ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಟಾರ್ಗೆಟ್ ಮಾಡಿದ್ದರು. 'ಎಲ್ಲಾ ಕಳ್ಳರಿಗೆ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಬರುತ್ತದೆ?' ಎಂದು ಪ್ರಶ್ನಿಸಿದ್ದರು.

ಮೋದಿ ಉಪನಾಮವನ್ನು ಹಂಚಿಕೊಳ್ಳುವ ಇತರ ಹಿಂದುಳಿದ ವರ್ಗಗಳಿಗೆ ಇದು ಅವಮಾನವೆಂದು ಪರಿಗಣಿಸಲಾಗಿದೆ ಮತ್ತು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದರು.
ವಿಚಾರಣಾ ನ್ಯಾಯಾಲಯದ ತೀರ್ಪಿನ ನಂತರ, ರಾಹುಲ್ ಗಾಂಧಿಯವರು ಮಹಾತ್ಮ ಗಾಂಧಿಯವರ ಉಲ್ಲೇಖವನ್ನು ಮಾಡಿದ್ದರು. ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ. ಸತ್ಯವೇ ನನ್ನ ದೇವರು, ಅಹಿಂಸೆ ಅದನ್ನು ಪಡೆಯುವ ಸಾಧನ ಎಂದೂ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಏಪ್ರಿಲ್ 09 ರಂದು ಕೋಲಾರದಲ್ಲಿ ' ಸತ್ಯಮೇವ ಜಯತೇ ' ಕಾರ್ಯಕ್ರಮದ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಲಿದ್ದಾರೆ. ಇದೇ ಕೋಲಾರದಲ್ಲಿ ಮಾತನಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಕರ್ನಾಟಕ ಚುನಾವಣೆಗೆ ಪ್ರಚಾರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.












Click it and Unblock the Notifications