ತ್ರಿಪುರಾದಲ್ಲಿ ರ್ಯಾಲಿ ಸ್ಥಳ ಬದಲಾವಣೆ: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ
ಅಗರ್ತಾಲ, ಅಕ್ಟೋಬರ್ 30: ತ್ರಿಪುರಾದಲ್ಲಿ ತಮ್ಮ ರ್ಯಾಲಿಯ ಸ್ಥಳ ಬದಲಾವಣೆ ಆದ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ಶನಿವಾರ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯ ರ್ಯಾಲಿಯ ಸ್ಥಳ ಬದಲಾವಣೆ ಮಾಡುವಂತೆ ಪೊಲೀಸರು ಹೇಳಿದ್ದಾರೆ. ಕೋವಿಡ್ ನಿಯಮದ ಕಾರಣವನ್ನು ನೀಡಿ ಪೊಲೀಸರು ರ್ಯಾಲಿಯ ಸ್ಥಳ ಬದಲಾವಣೆ ಮಾಡಲು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ವಿರುದ್ಧ ಟಿಎಂಸಿ ವಾಗ್ದಾಳಿ ನಡೆಸಿದೆ.
"ರ್ಯಾಲಿಯ ವಿಚಾರದಲ್ಲಿ ಗೊಂದಲವನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಬಿಪ್ಲಬ್ ದೇಬ್ ನೇತೃತ್ವದ ತ್ರಿಪುರಾ ಸರ್ಕಾರ ಈ ರೀತಿಯಾಗಿ ದಿಡೀರ್ ಸ್ಥಳ ಬದಲಾವಣೆ ಮಾಡಲು ಹೇಳುತ್ತಿದೆ," ಎಂದು ಟಿಎಂಸಿ ಆರೋಪ ಮಾಡಿದೆ. ಭಾನುವಾರ ರ್ಯಾಲಿಯಲ್ಲಿ ತ್ರಿಪುರಾ ರಾಜಧಾನಿ ಅಗರ್ತಾಲದಲ್ಲಿ ಆಯೋಜನೆ ಮಾಡಲಾಗಿದೆ. ಪಶ್ಚಿಮ ಬಂಗಾಳ ಹಾಗೂ ಬೇರೆ ಕೆಲವು ರಾಜ್ಯಗಳಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಆರ್-ಟಿ ಪಿಸಿಆರ್ ವರದಿಯನ್ನು ಹೊಂದಿರುವುದನ್ನು ತ್ರಿಪುರಾ ಸರ್ಕಾರ ಈಗ ಕಡ್ಡಾಯ ಮಾಡಿದೆ. ಈ ವಿಚಾರದಲ್ಲಿಯೂ ಬಿಜೆಪಿಯ ವಿರುದ್ದ ಟಿಎಂಸಿ ಕಿಡಿಕಾರಿದೆ.
ಒಂದಕ್ಕಿಂತ ಅಧಿಕ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇಕಡ ಐದಕ್ಕಿಂತ ಅಧಿಕವಾಗಿದ್ದರೆ, ಆ ರಾಜ್ಯದಿಂದ ಬರುವ ಜನರು ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ತ್ರಿಪುರಾ ಸರ್ಕಾರ ಕಡ್ಡಾಯಗೊಳಿಸಿ ನೂತನ ಕೋವಿಡ್ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ತ್ರಿಪುರಾ ರಾಜ್ಯದಲ್ಲಿ ಈವರೆಗೆ 84,449 ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 813 ಮಂದಿ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಭಾನುವಾರ ಟಿಎಂಸಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅಗರ್ತಲಾದ ರವೀಂದ್ರ ಭವನದ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ನಿಟ್ಟಿನಲ್ಲಿ ಟಿಎಂಸಿ ತೃಣಮೂಲ ಕಾಂಗ್ರೆಸ್ ಪರವಾಗಿ ರಾಜ್ಯ ಪೊಲೀಸರಿಂದ ಅನುಮತಿ ಕೋರಿತ್ತು. ಇನ್ನು ಈ ಹಿಂದೆ ಮೂರು ಬಾರಿ ಟಿಎಂಸಿಯ ರ್ಯಾಲಿಗೆ ತ್ರಿಪುರಾದಲ್ಲಿ ಕೋವಿಡ್ ಕಾರಣದಿಂದಾಗಿ ಅನುಮತಿ ನೀಡಿರಲಿಲ್ಲ. ಮೊದಲ ಬಾರಿಗೆ ಟಿಎಂಸಿಯ ರ್ಯಾಲಿಯು ಸೆಪ್ಟೆಂಬರ್ 15 ರಂದು ಆಯೋಜನೆ ಮಾಡಲಾಗಿತ್ತು. ಆದರೆ ಈ ರ್ಯಾಲಿಗೆ ಅನುಮತಿಯನ್ನು ನಿರಾಕರಿಸಲಾಗಿತ್ತು. "ಈ ದಿನದಂದೇ ಬೇರೆ ಪಕ್ಷವೂ ರ್ಯಾಲಿಯನ್ನು ನಡೆಸುತ್ತಿದೆ," ಎಂದು ಕಾರಣ ನೀಡಿ ಟಿಎಂಸಿಯ ರ್ಯಾಲಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು.
ಬಳಿಕ ಸೆಪ್ಟೆಂಬರ್ 16 ಕ್ಕೆ ರ್ಯಾಲಿ ನಡೆಸಲು ಟಿಎಂಸಿಗೆ ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಅದಕ್ಕೂ ಕೂಡಾ ಅನುಮತಿಯನ್ನು ನೀಡಿರಲಿಲ್ಲ. ಬಳಿಕ ಸೆಪ್ಟೆಂಬರ್ 23 ರಂದು ರ್ಯಾಲಿಯನ್ನು ನಡೆಸಲು ನಿರ್ಧಾರ ಮಾಡಲಾಗಿತ್ತು. ಈ ಅನುಮತಿ ವಿಚಾರವು ಕೊನೆಯದಾಗಿ ಕೋರ್ಟ್ ಮೆಟ್ಟಲು ಕೂಡಾ ಏರಿದೆ. ಈ ಸಂದರ್ಭದಲ್ಲಿ ಸರ್ಕಾರವು ಕೊರೊನಾ ವೈರಸ್ ಸೋಂಕಿನ ಪರಿಸ್ಥಿತಿಯ ಬಗ್ಗೆ ಕಾರಣವನ್ನು ನೀಡಿತ್ತು. "ಕಾನೂನುಬಾಹಿರ ಸಭೆ"ಯನ್ನು ನಿಷೇಧಿಸುವ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 144 ಅನ್ನು ವಿಧಿಸಿದೆ.
ಬೇರೆ ಸ್ಥಳದಲ್ಲಿ ಕೋವಿಡ್ ಹರಡುವುದಿಲ್ಲವೇ: ಸುಶ್ಮಿತಾ ಪ್ರಶ್ನೆ
ಈ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಟಿಎಂಸಿಯಿಂದ ನಾಮನಿರ್ದೇಶನಗೊಂಡ ರಾಜ್ಯಸಭಾ ಸಂಸದೆ ಸುಶ್ಮಿತಾ ದೇವ್, "ಮೊದಲು ಆರ್ಟಿ-ಪಿಸಿಆರ್ ನಿಯಮವನ್ನು ದಿಡೀರ್ ಆಗಿ ತಂದರು. ಬಳಿಕ ಈಗ ನಮ್ಮ ರ್ಯಾಲಿಯ ಸ್ಥಳವನ್ನು ಬದಲಾವಣೆ ಮಾಡಲು ಹೇಳುತ್ತಿದ್ದಾರೆ. ಬೇರೆ ಸ್ಥಳದಲ್ಲಿ ಕೋವಿಡ್ ಹರಡುವುದಿಲ್ಲವೇ?. ಕೋವಿಡ್ ಬಿಪ್ಲಬ್ ದೇಬ್ ಸರ್ಕಾರವನ್ನು ಕೇಳಿ ಹರಡುತ್ತದೆಯೇ?," ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ. "ಸ್ಥಳವನ್ನು ಬದಲಾವಣೆ ಮಾಡುವಂತೆ 48 ಗಂಟೆಗಳ ಮುಂಚೆಯೇ ತಿಳಿಸಲಾಗಿದೆ. ಆದರೆ ಪಕ್ಷವೇ ತಡವಾಗಿ ಅದಕ್ಕೆ ಪ್ರತಿಕ್ರಿಯೆ ನೀಡಿದೆ. ನಾವು ಅವರು ರ್ಯಾಲಿ ನಡೆಸುವುದನ್ನು ತಡೆಯುತ್ತಿಲ್ಲ. ಆದರೆ ಅವರು ದೊಡ್ಡ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವ ಹಿನ್ನೆಲೆ ಸ್ಥಳವನ್ನು ಬದಲಾವಣೆ ಮಾಡುವಂತೆ ವಿನಂತಿಯನ್ನು ಮಾಡಿದ್ದೇವೆ. ನಾವು ಅವರಿಗೆ ದೊಡ್ಡ ಸ್ಥಳದಲ್ಲಿ ರ್ಯಾಲಿ ನಡೆಸಲು ಅವಕಾಶವನ್ನು ನೀಡುತ್ತಿದ್ದೇವೆ. ದೊಡ್ಡ ಸ್ಥಳವಾದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಕಾರಿ ಆಗುತ್ತದೆ ಎಂಬ ನಿಟ್ಟಿನಲ್ಲಿ ನಾವು ಸ್ಥಳ ಬದಲಾವಣೆಗೆ ಸೂಚಿಸಿದ್ದೇವೆ," ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಮಾತ್ರ ಈ ಆರೋಪವನ್ನು ನಿರಾಕರಿಸಿದೆ. "ತ್ರಿಪುರಾದ ಜನರಿಗೆ ಟಿಎಂಸಿ ಬೇಕಾಗಿಲ್ಲ. ಆದರೆ ಟಿಎಂಸಿಯೇ ತ್ರಿಪುರಾದ ವಿಚಾರದಲ್ಲಿ ತಲೆ ಹಾಕುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆದಂತೆ ರಾಜಕೀಯ ಹಿಂಸಾಚಾರವನ್ನು ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದೆ," ಎಂದು ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications