ಕಳ್ಳತನ ಮಾಡಿದ್ದಾನೆಂದು ಹೊಡೆದು ಕೊಂದು, ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ!
ಪಾಲಕ್ಕಾಡ್, ಫೆಬ್ರವರಿ 23: ಕಳ್ಳತನದ ಆರೋಪದ ಮೇಲೆ 27 ವರ್ಷದ ಯುವಕನನ್ನು ಜನರ ಗುಂಪೊಂದು ಹೊಡೆದು ಸಾಯಿಸಿದ ಘಟನೆ ಕೇರಳದ ಪಾಲಕ್ಕಾಡಿನ ಸಮೀಪದ ಅಟ್ಟಪ್ಪಾಡಿಯಲ್ಲಿ ನಿನ್ನೆ(ಫೆ.22) ನಡೆದಿದೆ.
ಹತ್ತಿರದ ಕಾಡಿನಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗದ ಮಧು ಎಂಬ ಯುವಕ ಕಳ್ಳತನ ಮಾಡಿದ್ದಾನೆಂಬ ಆರೋಪದ ಮೇಲೆ ಆತನನ್ನು ಹಿಡಿದು ತಂದ ಜನರು ಆತನಿಗೆ ಚೆನ್ನಾಗಿ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ಕೊಟ್ಟಥಾರ ಸರ್ಕಾರಿ ಟ್ರೈಬಲ್ ಸ್ಪೆಶಾಲಿಟಿ ಆಸ್ಪತ್ರೆಗೆ ಸೇರಿಸುವ ಸಮಯದಲ್ಲಿ ವ್ಯಕ್ತಿ ಅಸುನೀಗಿದ್ದಾನೆ.
ಅತ್ಯಾಚಾರಿಗಳನ್ನು ಠಾಣೆಯಿಂದ ಎಳೆದೊಯ್ದು ಸಾಯಿಸಿದ ಜನ
ಮತ್ತಷ್ಟು ಬೇಸರದ ಸಂಗತಿಯೆಂದರೆ ಮಾನಸಿಕ ಅಸ್ವಸ್ಥನಾದ ಈತನನ್ನು ಕಟ್ಟಿಹಾಕಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತ ಆನಂದ ಪಡೆದಿದ್ದಾರೆ!
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಇಂಥ ಅಮಾನವೀಯ ಕೃತ್ಯದ ಕುರಿತು ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಆತನನ್ನು ಥಳಿಸಿದ 15 ಜನರ ಮೇಲೆ ಪೊಲೀಸರು ಕೊಲೆಯತ್ನದ ಪ್ರಕರಣ ದಾಖಲಿಸಿದ್ದಾರೆ. ಮೃತ ಮಧು ಮಾನಸಿಕ ಅಸ್ವಸ್ಥನಾಗಿದ್ದ ಮತ್ತು ಆತ ಕಾಡಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಎಂಮದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.