#21: ದಿಶಾ ರವಿ ವಯಸ್ಸು ಸಂಖ್ಯೆಯಷ್ಟೇ, ಅಪರಾಧ ಸಮರ್ಥನೀಯವೇ?
ನವದೆಹಲಿ, ಫೆಬ್ರವರಿ 16: ರೈತರ ಪ್ರತಿಭಟನೆಯ ಕುರಿತಾಗಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡ ಟೂಲ್ಕಿಟ್ಅನ್ನು ಸಂಪಾದಿಸಿದ ಅರೋಪದಲ್ಲಿ ಪರಿಸರ ಹೋರಾಟಗಾರ್ತಿ ಬೆಂಗಳೂರಿನ 21 ವರ್ಷದ ದಿಶಾ ರವಿ ಬಂಧನವು ದೇಶಾದ್ಯಂತ ಕಿಡಿ ಹೊತ್ತಿಸಿದೆ.
ವಿರೋಧಪಕ್ಷಗಳ ಅನೇಕ ರಾಜಕಾರಣಿಗಳು ಆಕೆಯ ಬೆಂಬಲಕ್ಕೆ ಬಂದಿದ್ದರೆ, ಆಕೆಯ ವಿರುದ್ಧದ ಪ್ರಕರಣ ಪ್ರಬಲವಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಸಂಚು ರೂಪಿಸಿದ ಆರೋಪದಲ್ಲಿ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದಿರುವ ದೆಹಲಿ ಪೊಲೀಸರು, ಮತ್ತೊಬ್ಬ ಕಾರ್ಯಕರ್ತೆ ನಿಕಿತಾ ಜೇಕಬ್ಗೆ ಕೂಡ ಹುಡುಕಾಟ ನಡೆಸಿದ್ದಾರೆ.
ಟೂಲ್ಕಿಟ್ ಪ್ರಕರಣದಲ್ಲಿ ಕಟ್ಟುಕಥೆ ಹೆಣೆದ ದೆಹಲಿ ಪೊಲೀಸರು: ಶಂತನು ಆರೋಪ
ದಿಶಾ ಅವರ ಬಂಧನದ ಬಳಿಕ ದೆಹಲಿ ಪೊಲೀಸರು 21 ವರ್ಷದ ಕಾರ್ಯಕರ್ತೆಯನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಾವಿರಾರು ಟ್ವೀಟ್ಗಳನ್ನು ಮಾಡಲಾಗಿದೆ. ಘಟನೆಯಲ್ಲಿ ಮೊದಲು ಖಂಡಿಸಿದವರಲ್ಲಿ ಒಬ್ಬರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 21 ವರ್ಷದ ದಿಶಾ ರವಿಯ ಬಂಧನವು ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ನಡೆಯದಂತಹ ದಾಳಿ ಎಂದು ಹೇಳಿದ್ದಾರೆ.
ಪುಲ್ವಾಮಾ ಬಾಂಬರ್ ವಯಸ್ಸೂ ಅದೇ
ಈ ಘಟನೆ ವ್ಯಾಪಕ ಪರ-ವಿರೋಧಕ್ಕೆ ಒಳಗಾಗಿದೆ. ಅಪರಾಧವನ್ನು ಗುರುತಿಸಲು ಎಂದಿಗೂ ವಯಸ್ಸು ಮಾನದಂಡವಾಗುವುದಿಲ್ಲ ಎಂದು ಹಲವರು ಪ್ರತಿಪಾದಿಸಿದ್ದಾರೆ. ಬಂಧಿತರ ಪರ ಅನುಕಂಪ ವ್ಯಕ್ತಪಡಿಸುತ್ತಿರುವವರು ಮತ್ತು ಆಕೆಯ ವಯಸ್ಸನ್ನು ಮುಂದಿಡುತ್ತಿರುವವರು, ಪುಲ್ವಾಮಾ ಬಾಂಬರ್ ಆದಿಲ್ ದರ್ನ ವಯಸ್ಸು ಕೂಡ 21 ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
ಹಿಮಾ ದಾಸ್ ಸಾಧನೆ ನೋಡಿ
ಇನ್ನು ಕೆಲವರು ಹಿಮಾ ದಾಸ್ ಅವರ ಉದಾಹರಣೆ ನೀಡಿದ್ದಾರೆ. ಅಸ್ಸಾಂನ 21 ವರ್ಷದ ಓಟಗಾರ್ತಿ ಹಿಮಾ ದಾಸ್ಗೆ ಢಿಂಗ್ ಎಕ್ಸ್ಪ್ರೆಸ್ ಎಂಬ ಅಡ್ಡಹೆಸರು ಇದೆ. ಆಕೆ 400 ಮೀಟರ್ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಈ ರೀತಿಯ ವಾದ-ಪ್ರತಿವಾದಗಳು ಸಾಮಾಜಿಕ ಜಾಲತಾಣದಲ್ಲಿ #21 ಮತ್ತು #ದಿಶಾರವಿ ಅರೆಸ್ಟೆಡ್ ಎಂಬ ಹ್ಯಾಶ್ಟ್ಯಾಗ್ಗಳನ್ನು ಟ್ರೆಂಡಿಂಗ್ನಲ್ಲಿ ಇರಿಸಿವೆ. ಅನೇಕರು ಭಾರತೀಯ ಸೇನೆಯಲ್ಲಿನ ಮಹಿಳೆಯರ ಫೋಟೊಗಳನ್ನು ಕೂಡ ಹಂಚಿಕೊಂಡು 21 ಸಮಾನ ವಯಸ್ಸಿನ ಗುಂಪು. ಒಂದೆಡೆ ಈ ಮಹಿಳೆಯರು ಭಾರತೀಯ ಸೇನೆಯನ್ನು ಸೇರುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದರೆ, ಇನ್ನೊಂದೆಡೆ 21 ವರ್ಷದ ದಿಶಾ ರವಿ ದೇಶದ್ರೋಹದ ಆರೋಪಿಯಾಗಿದ್ದಾರೆ ಎಂದು ಹೋಲಿಕೆ ಮಾಡಿದ್ದಾರೆ.
ಗಲ್ವಾನ್ ಯೋಧನ ನೆನಪು
ದೇಶದಲ್ಲಿ ಅಶಾಂತಿ ಮತ್ತು ಗಲಭೆ ಸೃಷ್ಟಿಸುವ ವಿವರವಾದ ಯೋಜನೆ ಹೊಂದಿರುವ ಗ್ರೆಟಾ ಥನ್ಬರ್ಗ್ ಟೂಲ್ಕಿಟ್ಅನ್ನು ಸಂಪಾದನೆ ಮಾಡಲು 21 ವರ್ಷದ ಯುವತಿಗೆ ಹೇಗೆ ಅವಕಾಶ ನೀಡಲಾಯಿತು ಎಂದು ಕೆಲವು ಪ್ರಶ್ನಿಸಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಹೋರಾಡುವಾಗ ಹುತಾತ್ಮರಾದ ಯೋಧ ಅಂಕುಶ್ ಶರ್ಮಾ (21) ಅವರ ಬಗ್ಗೆ ಅನೇಕರು ಮಾತನಾಡಿದ್ದಾರೆ. ಆದರೆ ಎಡಪಂಥೀಯರು ದಿಶಾ ರವಿಯನ್ನು (21) ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ 20ರ ಹರೆಯದಲ್ಲಿರುವಾಗಲೇ ಭಯೋತ್ಪಾದನಾ ಕೃತ್ಯ ಎಸಗಿದ ಅಜ್ಮಲ್ ಕಸಬ್ ಮತ್ತು ಬುರ್ಹಾನ್ ವಾನಿಯನ್ನು ಹೋಲಿಕೆ ಮಾಡಲಾಗಿದೆ.
ಯಾವ ವಯಸ್ಸಾದರೇನು?
ಮಾತಿನ ಯುದ್ಧವು ಟ್ವಿಟ್ಟರ್ಗೆ ಸೀಮಿತವಾಗಿಲ್ಲ. 21 ವರ್ಷದ ಯುವತಿ ವಿರುದ್ಧ ಶಕ್ತಿ ಪ್ರಯೋಗಿಸುವ ಮೂಲಕ ಸರ್ಕಾರವು ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದೆ ಎಂದಿರುವ ವಿರೋಧ ಪಕ್ಷಗಳು, ಭಾರತದ ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸೋಮವಾರ ಖಂಡನೆ ವ್ಯಕ್ತಪಡಿಸಿವೆ. ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಯಾವ ವಯಸ್ಸಾದರೇನು, ಅಪರಾಧ ಅಪರಾಧವೇ ಎಂದು ಹೇಳಿದೆ.
ರಾಹುಲ್ ಗಾಂಧಿ ಖಂಡನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 21 ವರ್ಷದ ದಿಶಾ ರವಿ ಬಂಧನವನ್ನು ಖಂಡಿಸಿದ್ದು, ದೇಶವನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 'ನಿಮ್ಮ ತುಟಿಗಳು ಮಾತನಾಡಲು ಮುಕ್ತವಾಗಿವೆ. ಬದುಕಿರುವವರೆಗೂ ಸತ್ಯ ಹೇಳಿ. ಅವರು ಹೆದರಿದ್ದಾರೆ ಆದರೆ ದೇಶವಲ್ಲ. ಭಾರತವನ್ನು ಮೌನವಾಗಿರಿಸಲು ಸಾಧ್ಯವಿಲ್ಲ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'21 ವರ್ಷದ ದಿಶಾ ರವಿಯ ಬಂಧನವು ಪ್ರಜಾಪ್ರಭುತ್ವದ ಮೇಲಿನ ಅಭೂತಪೂರ್ವ ದಾಳಿ. ನಮ್ಮ ರೈತರನ್ನು ಬೆಂಬಲಿಸುವುದು ಅಪರಾಧವಲ್ಲ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಟೂಲ್ ಕಿಟ್ ಪ್ರೊಪಗಂಡಾ
'ವಯಸ್ಸು ಎನ್ನುವುದು ಮಾನದಂಡವಾಗಿದ್ದರೆ 21ನೇ ವಯಸ್ಸಿನಲ್ಲಿ ಹುತಾತ್ಮರಾದ ಪರಮ್ ವೀರ್ ಚಕ್ರ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಅದರೆ ಟೂಲ್ಕಿಟ್ ಪ್ರೊಪಗಂಡಾದವರನ್ನಲ್ಲ' ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೆಖಾವತ್ ಟ್ವೀಟ್ ಮಾಡಿದ್ದಾರೆ.
ಅನೇಕ ಪ್ರಶ್ನೆಗಳಿಗೆ ಒಂದೇ ಉತ್ತರ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, '21 ವರ್ಷ ವಯಸ್ಸು... ಪರಿಸರ ಹೋರಾಟಗಾರ್ತಿ... ವಿದ್ಯಾರ್ಥಿನಿ... ಭಾರತದ ಶಕ್ತಿಯನ್ನು ಒಡೆಯುವ ಕೆಲಸದಲ್ಲಿ ಭಾಗಿಯಾಗಲು ಇದೆಲ್ಲವೂ ಅರ್ಹತೆಗಳೇ? ಟೂಲ್ ಕಿಟ್ ಸಂಪಾದನೆ ಮಾಡಲು ಆಕೆಗೆ ಅವಕಾಶ ಹೇಗೆ ಸಿಕ್ಕಿತು? ಆಕೆ ಏಕೆ ದೇಶ ವಿರೋಧಿ ವಾಟ್ಸಾಪ್ ಗುಂಪುಗಳಲ್ಲಿ ಆಕೆ ಏಕೆ ಭಾಗಿಯಾದಳು? ಅನೇಕ ಪ್ರಶ್ನೆಗಳು... ಆದರೆ ಒಂದೇ ಉತ್ತರ... 21 ವರ್ಷ ವಯಸ್ಸು' ಎಂದು ಟ್ವೀಟ್ ಮಾಡಿದ್ದಾರೆ.
ಎಡಪಂಥದವರಿಂದ ಬಳಕೆ
'ಒಬ್ಬ ಕ್ರಿಮಿನಲ್, ಕಿಮಿನಲ್ ಅಷ್ಟೇ. ಬಾಲಾಪರಾಧಿಗೆ ಲಿಂಗ ಮತ್ತು ವಯಸ್ಸು ಮುಖ್ಯವಲ್ಲ. ನಿಮ್ಮ ತಿಳಿವಳಿಕೆಗೆ ಇದು, ಮುಂಬೈ ಮೇಲೆ ದಾಳಿ ಮಾಡಿದಾಗ ಕಸಬ್ ವಯಸ್ಸು 21. ರೈತರನ್ನು ಬೆಂಬಲಿಸುವುದು ಅಪರಾಧವಲ್ಲ. ಆದರೆ ಭಾರತದ ವಿರುದ್ಧ ಸಂಚು ರೂಪಿಸುವುದು ಮತ್ತು ಇತರರನ್ನು ಪ್ರಚೋದಿಸುವುದು ಖಂಡಿತಾ ಅಪರಾಧ' ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ತಿಳಿಸಿದ್ದಾರೆ.
'ದೀರ್ಘಕಾಲದಿಂದ ಕೈತಪ್ಪಿರುವ ತಮ್ಮ ರಾಜಕಾರಣಕ್ಕೆ ಫಿರಂಗಿಗಳಂತೆ ಯುವ ಪ್ರಭಾವಿತ ಮನಸ್ಸುಗಳನ್ನು ಎಡಪಂಥವು ಬಳಸಿಕೊಳ್ಳುತ್ತಿದೆ. ಜೆನ್ಯುದಿಂದ ಜಾಮಿಯಾ, ಎಎಂಯುದಿಂದ ನಡ್ವಾ ಮತ್ತು ಈಗ ದಿಶಾ ರವಿ, ಎಲ್ಲರೂ ಅವರ ಕೆಟ್ಟ ಸಂಚಿನಲ್ಲಿ ಭಾಗಿಯಾಗಿದ್ದಾರೆ. ದುರದೃಷ್ಟವಶಾತ್ ಅವರು ತಮ್ಮ ಉದ್ದೇಶ ಈಡೇರಿಕೆಯಾದ ಬಳಿಕ ಅವರನ್ನು ಕೈಬಿಡುತ್ತಾರೆ' ಎಂದು ಬಿಜೆಪಿ ಐಟಿ ಘಟಕದ ಉಸ್ತುವಾರಿ ಅಮಿತ್ ಮಾಳವೀಯ ಹೇಳಿದ್ದಾರೆ.