ಕಾಂಚಿಪುರಂನಲ್ಲಿಂದು ಕಂಚೀಶ್ರೀಗಳಿಗೆ ಅಂತಿಮ ವಿದಾಯ
ಕಾಂಚಿಪುರಂ, ಮಾರ್ಚ್ 01: ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಂಚಿ ಕಾಮಕೋಟಿ ಪೀಠದ 69 ನೇ ಜಗದ್ಗುರುಗಳಾಗಿದ್ದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳು(82) ನಿನ್ನೆ(ಫೆ.28) ಅಸ್ತಂಗತರಾದರು. ಅವರ ಅಂತ್ಯ ಸಂಸ್ಕಾರ ಇಂದು(ಮಾ.01) ನಡೆಯಲಿದ್ದು, ಕಂಚಿ ಶಂಕರ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಬೆಳಿಗ್ಗೆ 7:30 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ 8 ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಅಸ್ತಂಗತ
ನಿನ್ನೆಯಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಸ್ವಾಮೀಜಿಯವರ ಅಂತಿಮ ದರ್ಶನ ಪಡೆದಿದ್ದಾರೆ.
1994 ರಲ್ಲಿ ಕಂಚಿ ಕಾಮಕೋಟಿ ಪೀಠದ 69ನೇ ಜಗದ್ಗುರುಗಳಾಗಿ ಅವರು ಪೀಠಾರೋಹಣ ಮಾಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ.25 ರಂದು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಇಹಲೋಕ ತ್ಯಜಿಸಿದ್ದರು.