ಬಿರಿಯಾನಿ ತಿಂದರೆ ಪುರುಷತ್ವ ಢಮಾರ್?; ಅಂಗಡಿ ಮುಚ್ರಿ ಎಂದ ಲೀಡರ್!
ಕೋಲ್ಕತ್ತಾ, ಅಕ್ಟೋಬರ್ 24: ಬಿರಿಯಾನಿ ಅಂದ್ರೆ ಬಾಯಿ ಬಾಯಿ ಬಿಡುವ ಜನರು ಇದ್ದಾರೆ. ಬಿಸಿ ಬಿಸಿ ಬಿರಿಯಾನಿಗೆ ಮನ ಸೋಲದ ಮಾಂಸಪ್ರಿಯರೇ ಇಲ್ಲ. ಆದರೆ ನೀವು ತಿನ್ನೋ ಅದೇ ಬಿರಿಯಾನಿ ನಿಮ್ಮ ಪುರುಷತ್ವಕ್ಕೆ ಆಪತ್ತು ತರುತ್ತೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನಲ್ಲಿ ಇತ್ತೀಚಿಗೆ ದಾಳೆ ನಡೆೆಸಿದ ತೃಣಮೂಲ ಕಾಂಗ್ರೆಸ್ ನಾಯಕ ರವೀಂದ್ರ ನಾಥ್ ಘೋಷ್, ಎರಡು ಸ್ಥಳೀಯ ಬಿರಿಯಾನಿ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಈ ಬಿರಿಯಾನಿ ಭಕ್ಷ್ಯದಲ್ಲಿನ ಮಸಾಲೆಗಳು ಪುರುಷರ ಪುರುಷತ್ವವನ್ನು ಕಡಿಮೆ ಮಾಡುತ್ತವೆ ಎಂದು ಅವರು ಆರೋಪಿಸಿದರು.
ಚಿಕನ್ ಬಿರಿಯಾನಿ ತಂದ ಆಪತ್ತು: ಬಿರಿಯಾನಿ ತಿಂದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಓರ್ವ ಸಾವು
ಮಾಂಸಹಾರಿಗಳ ನೆಚ್ಚಿನ ಬಿರಿಯಾನಿಯು ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂದು ಟಿಎಂಸಿ ನಾಯಕ ರವೀಂದ್ರ ನಾಥ್ ಘೋಷ್ ದೂಷಿಸುತ್ತಿದ್ದಾರೆ. ಅಸಲಿಗೆ ಈ ಬಿರಿಯಾನಿಗೂ ಆ ಪುರುಷತ್ವ ಸಮಸ್ಯೆಗೂ ಎಲ್ಲಿಂದೆಲ್ಲಿ ನಂಟು?, ನಿಜವಾಗಿಯೂ ಇಂಥದೊಂದು ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುವುದಕ್ಕೆ ಸಾಧ್ಯವೇ?, ಬಿರಿಯಾನಿ ಅಂಗಡಿ ಅನ್ನು ಮುಚ್ಚಿಸುವುದರ ಹಿಂದಿನ ಅಸಲಿ ಕಾರಣವೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳಿರಿ.
ಪುರುಷತ್ವಕ್ಕೆ ಧಕ್ಕೆ ಉಂಟು ಮಾಡುತ್ತಾ ಬಿರಿಯಾನಿ?
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಮಾಜಿ ಸಚಿವರಾಗಿರುವ ರವೀಂದ್ರ ನಾಥ್ ಘೋಷ್ ಬಿರಿಯಾನಿ ಅಂಗಡಿಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಬಿರಿಯಾನಿ ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳು ಪುರುಷ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಹಲವಾರು ಜನರಿಂದ ಆರೋಪಗಳು ಬಂದಿವೆ ಎಂದು ದೂಷಿಸಿದ್ದಾರೆ.
ಈ ಬಿರಿಯಾನಿಗೆ ಹಾಕುವ ಆ ಮಸಾಲೆ ಯಾವುದು?
ರಾಜ್ಯದ ಕೂಚ್ ಬೆಹಾರ್ನಲ್ಲಿ ಇರುವ ಬಿರಿಯಾನಿ ಅಂಗಡಿಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರುಗಳನ್ನು ನೀಡಿದ್ದರು. ಕಳೆದ ಹಲವು ದಿನಗಳಿಂದ ಈ ಪ್ರದೇಶದ ಜನರು ಆರೋಪಗಳನ್ನು ಮಾಡಿದ್ದರು. ಪುರುಷರ ಲೈಂಗಿಕ ಉತ್ಸಾಹವನ್ನು ತಡೆಯುವ ಮಸಾಲೆಗಳನ್ನು ಬಿರಿಯಾನಿ ಮಾಡುವುದಕ್ಕಾಗಿ ಬಳಸಲಾಗುತ್ತಿದೆ. ಆದರೆ ಆ ಮಸಾಲೆಗಳು ಯಾವುವು ಎಂಬುದು ತಿಳಿದಿಲ್ಲ ಎಂದು ಘೋಷ್ ಹೇಳಿದ್ದರು.
ಇಲ್ಲಿ ಬಿರಿಯಾನಿ ಮಾಡುವ ಮಂದಿ ಯುಪಿ, ಬಿಹಾರದವರು
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪುರಸಭೆಯ ವ್ಯಾಪ್ತಿಯಲ್ಲಿ ಸಾಕಷ್ಟು ಬಿರಿಯಾನಿ ಅಂಗಡಿಗಳಿವೆ. ಬಿಹಾರ ಮತ್ತು ಉತ್ತರ ಪ್ರದೇಶದಿಂದ ಆಗಮಿಸಿರುವ ಜನರು ಈ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ. ಈ ಅಂಗಡಿಗಳು ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ ಎಂದು ರವೀಂದ್ರ ನಾಥ್ ಘೋಷ್ ಆರೋಪಿಸಿದರು.
ಬಿರಿಯಾನಿ ಅಂಗಡಿ ಮುಚ್ಚಿಸಿದ್ದಕ್ಕೆ ಕಾರಣವೇನು?
ಪುರುಷರ ಪುರುಷತ್ವದ ಸಾಮರ್ಥ್ಯವನ್ನು ತಗ್ಗಿಸುವಂತಹ ಮಸಾಲೆ ಪದಾರ್ಥಗಳನ್ನು ಬಿರಿಯಾನಿಯಲ್ಲಿ ಬಳಸಲಾಗುತ್ತದೆ ಎಂಬ ಬಗ್ಗೆ ಸಾಕಷ್ಟು ದೂರುಗಳನ್ನು ಬಂದಿದ್ದವು. ಹೀಗಾಗಿ ಇತ್ತೀಚಿಗೆ ಕೂಚ್ ಬೆಹಾರ್ ಪ್ರದೇಶದ ಕೆಲವು ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಅಂಗಡಿಗಳು ಯಾವುದೇ ರೀತಿ ಪರವಾನಗಿ ಪಡೆದುಕೊಳ್ಳದಿರುವುದು ಬೆಳಕಿಗೆ ಬಂದಿದೆ. ಆ ಕಾರಣಕ್ಕಾಗಿ ಎರಡು ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಘೋಷ್ ತಿಳಿಸಿದರು.